ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಸರ್ವೇ ನಂಬರ್ ಜಮೀನುಗಳಲ್ಲಿ ಮಾಲೀಕತ್ವ ಇಲ್ಲದೇ ಸುಮಾರು ೩೦-೩೫ ವರ್ಷಗಳಿಂದ ವಾಸಿಸುತ್ತಿರುವ ೧೩ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ನೀಡುವ ದೃಢಸಂಕಲ್ಪ ಮಾಡಿದ್ದು, ಈಗಾಗಲೇ ಹೊಸ ಕಂದಾಯ ಗ್ರಾಮ, ಉಪ ಗ್ರಾಮಗಳನ್ನು ಸೃಷ್ಟಿಸಲಾಗುತ್ತಿದೆಯಲ್ಲದೆ, ಒಂದು ವರ್ಷದ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಶಾಡಗುಪ್ಪಿ ಸೇರಿದಂತೆ ಹಲವೆಡೆ ಗ್ರಾಮ ಭೇಟಿ ಸಂದರ್ಭದಲ್ಲಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಸರ್ವೇ ಕೈಗೊಳ್ಳಲಾಗಿದೆ. ರಸ್ತೆ ಇಲ್ಲದೇ, ಅಗತ್ಯ ಸೌಲಭ್ಯಗಳೂ ಇಲ್ಲದೇ ಸರ್ಕಾರಿ ಮತ್ತು ಖಾಸಗಿ ಸರ್ವೇ ನಂಬರ್ ಜಮೀನುಗಳಲ್ಲಿ ಸಾವಿರಾರು ಕುಟುಂಬಗಳು ವಾಸಿಸುತ್ತಿವೆ. ಹಕ್ಕುಪತ್ರ ಇಲ್ಲದೇ ಸರ್ಕಾರದ ಸೌಲಭ್ಯ, ಬ್ಯಾಂಕಿನ ಸಾಲ ಸೇರಿದಂತೆ ಇನ್ನಿತರ ಎಲ್ಲ ರೀತಿಯ ನೆರವಿನಿಂದ ವಂಚಿತವಾಗಿವೆ. ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿನ ಇಂಥ ಕುಟುಂಬಗಳ ಸಂಪೂರ್ಣ ವಿವರ ಸಂಗ್ರಹಿಸಲಾಗಿದೆ. ಹಂತ ಹಂತವಾಗಿ ಪ್ರತಿಯೊಂದು ಕುಟುಂಬಗಳಿಗೂ ಹಕ್ಕುಪತ್ರ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದ ಮಾನೆ, ತಾಲೂಕಿನಲ್ಲಿ ಹತ್ತಾರು ವರ್ಷಗಳಿಂದ ಬಗೆಹರಿಯದ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಗಮನ ನೀಡಲಾಗಿದೆ. ಪ್ರತಿ ಗ್ರಾಮಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದು ಸಮಸ್ಯೆ ಅರಿಯುವ ಪ್ರಯತ್ನ ನಡೆಸಲಾಗಿದೆ ಎಂದು ವಿವರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಿಪಂ ಮಾಜಿ ಸದಸ್ಯ ಕೊಟ್ರಪ್ಪ ಕುದರಿಸಿದ್ದನವರ, ಮುಖಂಡರಾದ ಪ್ರಕಾಶ ಓಲೇಕಾರ, ರಾಜಶೇಖರ ಮಲಗುಂದ, ಶ್ರೀಧರ ಮಲಗುಂದ, ಮೂಕಣ್ಣ ತಳವಾರ, ಶಿವರುದ್ರಪ್ಪ ಕಲ್ಲಣ್ಣನವರ, ಗುಡ್ಡಪ್ಪ ಹರಿಜನ, ಇಂದ್ರಪ್ಪ ಮಕರವಳ್ಳಿ, ರಮೇಶ ಸಾವಕ್ಕನವರ, ಮಂಜಪ್ಪ ಓಲೇಕಾರ, ನಾರಾಯಣಪ್ಪ ಜಾಲಗಾರ, ಶಿವಣ್ಣ ಬಾರ್ಕಿ, ಮೂಕಪ್ಪ ಬಾರ್ಕಿ, ಪರಸಪ್ಪ ಕಾಣೇರ ಈ ಸಂದರ್ಭದಲ್ಲಿದ್ದರು.