ದೇವರ ದಾಸಿಮಯ್ಯ ಜಯಂತಿ, ಕೊಪ್ಪಳ ಜಿಲ್ಲಾಡಳಿತದಿಂದ ಪುಷ್ಪನಮನ

| Published : Apr 14 2024, 01:53 AM IST

ದೇವರ ದಾಸಿಮಯ್ಯ ಜಯಂತಿ, ಕೊಪ್ಪಳ ಜಿಲ್ಲಾಡಳಿತದಿಂದ ಪುಷ್ಪನಮನ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲೆಯಾದ್ಯಂತ ಹಲವೆಡೆ ದೇವರ ದಾಸಿಮಯ್ಯ ಜಯಂತಿ ನಡೆಯಿತು. ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು.

ಕೊಪ್ಪಳ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು.

ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಅವರು ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮಾಜದ ಮುಖಂಡರಾದ ಶಿವಶಂಕರಪ್ಪ ಚನ್ನಿ, ನಾರಾಯಣಪ್ಪ ವಿ. ಕೊಳ್ಳಿ, ವೆಂಕಟೇಶ ಗುಡಸಲಿ ತಾವರಗೇರಾ, ಶಿವು ಮಧುಕುಂಟಿ ಕಿನ್ನಾಳ, ಶಿವಶಂಕರ ವಿ. ಕಡಣಕಲ್, ಶಶಿಧರ ಸಕ್ರಿ, ಮಂಜುನಾಥ ಎಸ್. ಹನುಮಸಾಗರ, ವೀರೇಶ ಅರಳಿಕಟ್ಟಿ, ಚಿದಾನಂದ ಕಾಳಪ್ಪ ಜೂಜಗಾರ, ನಾರಾಯಣಪ್ಪ ಉಪಸ್ಥಿತರಿದ್ದರು.

ಕುಷ್ಟಗಿಯಲ್ಲಿ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪೂಜೆ:

ದೇವರ ದಾಸಿಮಯ್ಯ ಅವರು ಪ್ರಜಾಪ್ರಭುತ್ವದ ಮೂಲ ಸೆಲೆಯೊಳಗೊಂಡ ವಚನಗಳನ್ನು ರಚಿಸುವ ಮೂಲಕ ಕಲ್ಯಾಣ ಕ್ರಾಂತಿ ಮಾಡಿದರವರಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಸಿದ್ರಾಮಪ್ಪ ಅಮರಾವತಿ ಹೇಳಿದರು.ಪಟ್ಟಣದ ಬಾಲಕಿಯರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವರ ದಾಸಿಮಯ್ಯ ಜಯಂತಿಯ ಅಂಗವಾಗಿ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಅವರು ಮಾತನಾಡಿದರು. ದೇವರ ದಾಸಿಮಯ್ಯ ಅವರು ಮೊದಲ ವಚನಕಾರರು ಆಗಿದ್ದು, ಅವರು ರಚಿಸಿದ ಸುಮಾರು 176 ವಚನಗಳು ಲಭ್ಯವಾಗಿವೆ. ಈ ವಚನಗಳ ಮೂಲಕ ಆತ್ಮಸಾಕ್ಷಿಯೆ ದೇವರು ಎಂದು ಹೇಳಿದ್ದಾರೆ ಎಂದರು.

ಇಂದಿನ ನಮ್ಮ ಸಮಾಜಕ್ಕೆ ದೇವರ ದಾಸಿಮಯ್ಯ ರಚಿಸಿದ ವಚನಗಳ ಅಧ್ಯಯನ ಅವಶ್ಯಕವಾಗಿದೆ. ಭೂಮಿ, ಅಧಿಕಾರ, ಸಂಪತ್ತಿಗಾಗಿ ಲೌಕಿಕ ವಿಲಾಸಿ ಜೀವನಕ್ಕಾಗಿ ಪ್ರಗತಿಯ ಹೆಸರಿನಲ್ಲಿ ಮನುಷ್ಯ ಮಾಡುವ ಕೆಲಸಗಳಿಂದಾಗುವ ಪರಿಣಾಮಗಳನ್ನು ವಚನದಲ್ಲಿ ಉಲ್ಲೇಖಿಸಲಾಗಿದೆ. ಅವುಗಳ ಅಧ್ಯಯನ ಮನುಷ್ಯನನ್ನು ಅರಿಷಡ್ವರ್ಗಗಳಿಂದ ಗೆಲ್ಲಲು ಸಹಾಯ ಮಾಡುತ್ತಿವೆ ಎಂದು ಹೇಳಿದರು.ಶಿಕ್ಷಕರಾದ ಸರಸ್ವತಿ, ಜಿ.ಡಿ. ಪಾಟೀಲ್, ಪಾರ್ವತೆಮ್ಮ, ವೀಣಾ ಸೊನ್ನದ, ರತ್ನಾಬಾಯಿ ಹೂಗಾರ, ಚಂದ್ರಕಲಾ, ಸುನೀತಾ, ವಿಜಯಲಕ್ಷ್ಮಿ, ರೂಪಾ ಗುಡ್ಲಾನೂರ ಇತರರು ಭಾಗವಹಿಸಿದ್ದರು.