ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಭಾಗದ ರೈತರ ಭೂಮಿಯನ್ನು ಸರ್ಕಾರ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವುದು ಖಂಡನೀಯ, ಕೂಡಲೇ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದರ ಮೂಲಕ 1180 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ನ್ಯಾಯ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಚಿನ್ನಸ್ವಾಮಿ ತಿಳಿಸಿದರು.ನಗರದ ಖಾಸಗಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನೆಡೆಸಿ ಮಾತನಾಡಿದ ಅವರು, ಬರ್ಕಾತ್ ಭೂಮಿಯನ್ನು ದಲಿತರಿಗೆ ನೀಡಿ ರೈತರ ಜೀವನ ಹಸನಾಗಿಸುವಂತೆ ಮಾಡಿದ ಸರ್ಕಾರ ಈಗ ಅದೇ ಭೂಮಿಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಿ ರೈತರನ್ನು ಅದೇ ಕಾರ್ಪೊರೇಟ್ ಸಂಸ್ಥೆಗಳ ಮುಂದೆ ಸೆಕ್ಯೂರಿಟಿ ಗಾರ್ಡ್ಗಳಾಗಿ ಮಾಡುವ ಹುನ್ನಾರ ಸರ್ಕಾರ ಮಾಡುತ್ತಿದೆ. ಸರ್ಕಾರ ಕೂಡಲೇ ಚನ್ನರಾಯಪಟ್ಟಣ ಹಾಗೂ ಹೊಸಕೋಟೆ ತಾಲೂಕಿನ ನಂದಗುಡಿ ಭಾಗದ ಭೂಸ್ವಾಧೀನವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಅಧ್ಯಕ್ಷ ವರದಾಪುರ ನಾಗರಾಜ್ ಮಾತನಾಡಿ, ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು ಜೂ. 25ರ ದೇವನಹಳ್ಳಿ ಚಲೋ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿ ಬೆಂಬಲ ನೀಡಬೇಕೆಂದರು.ಕರ್ನಾಟಕ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಹೈದರ್ ಬೇಗ್ ಮಾತನಾಡಿ, ಭೂಸ್ವಾಧೀನ ಕೈ ಬಿಡುವವರೆಗೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ರೈತರಿಗೆ ಬೆಂಬಲವಾಗಿ ನಾವು ಇರುತ್ತೇವೆ, ದೇವನಹಳ್ಳಿ ಚಲೋ ಕಾರ್ಯಕ್ರಮದಲ್ಲಿ ರೈತರು ಭಾಗಿಯಾಗಲಿದ್ದು ಅದಕ್ಕೆ ಸರ್ಕಾರ ವಿರೋಧ ವ್ಯಕ್ತಪಡಿಸಿ ಜೈಲಿಗೆ ಹಾಕಿದರೂ ಸಹ ನಾವು ಜೈಲ್ ಬರೋ ಕಾರ್ಯಕ್ರಮಕ್ಕೂ ಸೈ ಎಂದರು.ಕಾರ್ಪೊರೇಟ್ ಸಂಸ್ಥೆಗಳಿಗೆ ಫಲವತ್ತಾದ ಭೂಮಿ ನೀಡುವ ಸರ್ಕಾರದ ನಿಲುವು ಖಂಡನೀಯ. ದೇವನಹಳ್ಳಿಯಲ್ಲಿ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಬಹಳಷ್ಟು ಗುಟ್ಟಗಾಡು ಪ್ರದೇಶವಿದ್ದು ಕೃಷಿಗೆ ಯೋಗ್ಯವಲ್ಲದ ಜಮೀನು ಬೇಕಾದಷ್ಟಿದೆ. ಆ ಜಾಗದಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಸರ್ಕಾರ ಜಾಗ ನೀಡಲಿ ಎಂದು ಸಿಐಟಿಯು ಕಾರ್ಯದರ್ಶಿ ಮೋಹನ್ ಬಾಬು ತಿಳಿಸಿದರು.
ಈ ಸಂದರ್ಭಧಲ್ಲಿ ಸಿಪಿಐಎಂ ಸಂಘಟನಾ ಕಾರ್ಯದರ್ಶಿ ವೆಂಕಟರಾಜು, ಮುತ್ಕೂರು ಮುನಿರಾಜ್, ಸಿಐಟಿಯು ಕಾರ್ಯದರ್ಶಿ ಮೋಹನ್ ಬಾಬು, ರೈತ ಸಂಘದ ಸಂಘಟನಾ ಕಾರ್ಯದರ್ಶಿ ಹೈದರ್ ಬೇಗ್ ಹಾಗೂ ಹಲವರು ಹಾಜರಿದ್ದರು.ಫೋಟೋ: 23 ಹೆಚ್ಎಸ್ಕೆ 4ಹೊಸಕೋಟೆಯ ವಿವಿಧ ಸಂಘಟನೆಗಳು ದೇವನಹಳ್ಳಿಯಲ್ಲಿ ಸರ್ಕಾರ ರೈತರ ಭೂಸ್ವಾಧೀನ ಪ್ರಕ್ರಿಯೆ ಮಾಡುತ್ತಿರುವುದನ್ನು ವಿರೋಧಿಸಿ ನೆಡೆಯುತ್ತಿರುವ ಹೋರಾಟಕ್ಕೆ ತಾಲೂಕಿನ ವಿವಿಧ ಸಂಘಟನೆ ಮುಖಂಡರು ಬೆಂಬಲ ವ್ಯಕ್ತಪಡಿಸಿ ಸುದ್ದಿಗೋಷ್ಠಿ ನಡೆಸಿದರು.