ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಜಿಲ್ಲೆಯ ಸಹಕಾರಿ ರಂಗವೂ ಒಂದು ಹಂತದಲ್ಲಿ ತನ್ನ ನೌಕರಿಗೆ ಸಂಬಳ ಕೊಡಲು ಹಣವಿಲ್ಲದೆ ಸೊರಗಿತ್ತು. ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದ ವೇಳೇ ಅವರು ರೂಪಿಸಿದ ಪೈಲೆಟ್ ಯೋಜನೆಯ ಫಲವಾಗಿ ಇಂದು ಜಿಲ್ಲೆಯ ಸಹಕಾರಿ ಕ್ಷೇತ್ರವೂ ೨ ಸಾವಿರ ಕೋಟಿ ರು. ಗಳ ವಹಿವಾಟು ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ಚನ್ನರಾಯಪಟ್ಟಣದಲ್ಲಿನ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಸಹಕಾರಿ ಕ್ಷೇತ್ರವು ಶೋಚನೀಯ ಸ್ಥಿತಿಯಲ್ಲಿದ್ದಾಗ ಮುಖ್ಯಮಂತ್ರಿಗಳಾಗಿದ್ದ ವೇಳೆ ಎಚ್.ಡಿ.ದೇವೇಗೌಡರವರು ೨ ಕೋಟಿ ರು. ಗಳನ್ನು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಪ್ರೋತ್ಸಾಹ ಧನವಾಗಿ ನೀಡಿದ ಫಲ ಇಂದು ೨ ಸಾವಿರ ಕೋಟಿ ರು. ಗಳ ವಹಿವಾಟನ್ನು ನಡೆಸುತ್ತಿದೆ. ಹಾಲು ಉತ್ಪನ್ನ ಸಹಕಾರ ಸಂಘಗಳು, ಕೃಷಿ ಪತ್ತಿನ ಸಹಕಾರ ಸಂಘಗಳು, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ, ಅತ್ಯುತ್ತಮವಾಗಿ ವಹಿವಾಟು ನಡೆಸುತ್ತಿವೆ. ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ೩೩ ಕೋಟಿ ರು. ಠೇವಣಿ ಇಡಲಾಗಿದೆ. ಇನ್ನೂ ಟಿಪಿಸಿಎಂಎಸ್ ನಲ್ಲಿ ಅಯಾ ಕಾಲಘಟ್ಟಗಳಲ್ಲಿ ಅಧ್ಯಕ್ಷರಾದವರ ಉತ್ತಮ ಆಡಳಿತದ ಫಲವಾಗಿ ಫಲವಾಗಿ ಜಪ್ತಿ ಮಾಡುವ ಸ್ಥಿತಿಯಲ್ಲಿದ್ದ ಸಂಘದಲ್ಲೀಗ ೧೧.೫ ಲಕ್ಷ ರು. ಗಳ ಲಾಭ ಗಳಿಸಿದೆ ಎಂದರು.
ಮೈಸೂರು ರಸ್ತೆಯಲ್ಲಿನ ಅಂಬೇಡ್ಕರ್ ಸರ್ಕಲ್ ಬಳಿಯಿರುವ ಖಾಲಿ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಿ, ಈ-ಪೆಕ್ಯೂರ್ಮೆಂಟ್ ಮೂಲಕ ಮಳಿಗೆ ವಿಲೇವಾರಿ ಮಾಡುವ ಚಿಂತನೆಯಲ್ಲಿ ಸಂಘವಿದೆ. ಇನ್ನೂ ಈಗಾಗಲೇ ಇರುವ ಮಳಿಗೆಯ ಬಾಡಿಗೆಯ ಹಣವನ್ನು ಸರಿಯಾದ ಸಮಯಕ್ಕೆ ಕಟ್ಟಿಸಿಕೊಳ್ಳಬೇಕು, ಕಟ್ಟದಿದ್ದವರಿಗೆ ಬಡ್ಡಿ ಸಮೇತ ವಸೂಲಿಗೆ ಮುಂದಾಗಬೇಕು ಸೂಚಿಸಿದರು. ಇನ್ನು ಲಾಭದ ಪೈಕಿ ಸಂಘವು ತಮ್ಮ ವಹಿವಾಟಿಗೆ ಅವಶ್ಯವಿರುವ ಹಣವನ್ನು ಉಳಿತಾಯ ಖಾತೆಯಲ್ಲಿ ಹೊಂದಿ ಮಿಕ್ಕ ಹಣವನ್ನು ಜಿಲ್ಲಾ ಸಹಕಾರಿ ಬ್ಯಾಂಕ್ನಲ್ಲಿ ಠೇವಣಿ ಇಡುವಂತೆ ತಿಳಿಸಿದರು. ರಾಜ್ಯ ಮಾರಾಟ ಮಹಾ ಮಂಡಳದಿಂದ ಪ್ರೋತ್ಸಾಹ ಧನವಾಗಿ ಸಂಘಕ್ಕೆ ಉಚಿತವಾಗಿ ೩೬ ಲಕ್ಷ ರು. ಹಣ ಬಂದಿದೆ. ಇದಕ್ಕೆ ಸಹಕರಿಸಿದ ಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡರಿಗೆ ಕೃತಜ್ಞತೆ ಸಲ್ಲಿಸಿದರು.ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಚಂದ್ರಕಲಾ ಮಂಜೇಗೌಡ ಮಾತನಾಡಿ, ನಮ್ಮ ಸಂಘವು ರಸಗೊಬ್ಬರ ಮಾರಾಟದಲ್ಲಿ ಮೈಸೂರು ವಲಯದಲ್ಲಿ ಅತ್ಯುತ್ತಮ ಮಾರಾಟ ಮಾಡಿದ ಹೆಗ್ಗಳಿಕೆ ಹೊಂದಿ ರಾಜ್ಯ ಪ್ರಶಸ್ತಿ ಗಳಿಸಿದೆ. ಇದು ನಮಗೆ ಮತ್ತಷ್ಟು ಪ್ರೇರಣೆಯಾಗಿದೆ. ರೈತವರ್ಗಕ್ಕೆ ಬೇಕಾದ ಅನುಕೂಲಗಳನ್ನು ರೂಪಿಸುವಲ್ಲಿ ನಾವು ಬದ್ಧರಾಗಿದ್ದೇವೆ. ಶಾಸಕರ ಅಣತಿ ಮೇರೆಗೆ ಸಂಘವು ಅವರ ಸಹಕಾರದಿಂದ ಉತ್ತಮ ಯೋಜನೆಗಳನ್ನು ರೂಪಿಸುವಲ್ಲಿ ಮುಂದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಟಿಎಪಿಸಿಎಂಎಸ್ನ ಉಪಾಧ್ಯಕ್ಷರಾದ ಅಂಕನಹಳ್ಳಿ ಸ್ವಾಮಿ, ನಿರ್ದೇಶಕರುಗಳಾದ ವಿ.ಎನ್.ರಾಜಣ್ಣ, ಬಿ.ಎಚ್.ಶಿವಣ್ಣ, ಪರಮ ಕೃಷ್ಣೇಗೌಡ, ಅನಿಲ್ ಮರಗೂರು ಸೇರಿದಂತೆ ಕಾರ್ಯದರ್ಶಿ ಮಂಜುಳಮ್ಮ, ಸಹ ಕಾರ್ಯದರ್ಶಿ ಸಂಧ್ಯಾ ಸೇರಿ ಸಿಬ್ಬಂದಿ ಹಾಜರಿದ್ದರು.