ಓದಿನ ಮೂಲಕ ಸಾಹಿತ್ಯ ಪ್ರೀತಿ ಬೆಳೆಸಿಕೊಳ್ಳಿ

| Published : Jul 17 2025, 12:37 AM IST

ಸಾರಾಂಶ

ಯಲ್ಲಾಪುರ ತಾಲೂಕಿನ ಅರಬೈಲ್ ಶಾಲೆಯಲ್ಲಿ ''ಕವನ ಆಲಿಸೋಣ ಭಾವಾರ್ಥ ಗ್ರಹಿಸೋಣ'' ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಯಲ್ಲಾಪುರ: ಸಾಹಿತ್ಯಿಕ ಚಿಂತನೆಗಳನ್ನು ಕುತೂಹಲದಿಂದ ಗ್ರಹಿಸುವ, ಪಠ್ಯದ ಹೊರತಾಗಿ ಓದಿನ ಮೂಲಕ ಸಾಹಿತ್ಯ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಪತ್ರಕರ್ತ, ಸಾಹಿತಿ ಸುಬ್ರಾಯ ಬಿದ್ರೆಮನೆ ಹೇಳಿದರು.

ತಾಲೂಕಿನ ಅರಬೈಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅವರು ಕವನ ಆಲಿಸೋಣ ಭಾವಾರ್ಥ ಗ್ರಹಿಸೋಣ ಕಲಿಕಾಫಲ ಆಧಾರಿತ ಉಪನ್ಯಾಸ ನೀಡಿದರು.

ಸಹಜವಾಗಿ, ಸರಳವಾಗಿ, ನಯವಾಗಿ ಹೂವು ಅರಳುವಂತೆ ಕವಿತೆಯ ಶೈಲಿ ಇದ್ದರೆ ಸೊಗಸೆನಿಸುತ್ತದೆ. ಒತ್ತಾಯಪೂರ್ವಕವಾಗಿ ಶಬ್ದಗಳನ್ನು ಹೆಣೆದರೆ, ಕವಿತೆ ಅರ್ಥ ಸತ್ವ ಕಳೆದುಕೊಂಡು ನಿಸ್ಸಾರದ ಸಾಲುಗಳಾಗಿ ಸಹೃದಯಿಗಳನ್ನು ತಲುಪುವಲ್ಲಿ ಸೋಲುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕಿ ಸಾಹಿತಿ ಶಿವಲೀಲಾ ಹುಣಸಗಿ ಮಾತನಾಡಿ, ಮನದಲ್ಲಿ ಮೂಡಿದ ಭಾವನೆಗಳನ್ನು ಪದಗಳಲ್ಲಿ ಹಿಡಿದಿಟ್ಟು ಪೋಣಿಸಿ ಕವಿತೆ ರಚಿಸುವುದು ಸುಲಭವಲ್ಲ. ಓದಿದ್ದನ್ನು ಭಾವಾರ್ಥ ಗ್ರಹಿಸುವ ಕೆಲಸ ಮಾಡಬೇಕು. ಬರೆಯುವ ಮುನ್ನ ಕವಿತೆಯ ಭಾವ ಆಲಿಸಬೇಕು. ಮನಸ್ಸಿಗೆ ಅನಿಸಿದ್ದನ್ನು ಅಕ್ಷರರೂಪಕ್ಕೆ ಇಳಿಸಿ, ತಿದ್ದಿ, ತೀಡಿ ಬರವಣಿಗೆಯ ಕೌಶಲ್ಯ ಬೆಳೆಸಿಕೊಳ್ಳುವ ಪ್ರಯತ್ನವಾದಾಗ ಮಾತ್ರ ಉತ್ತಮ ಸಾಹಿತ್ಯ ಸಾಧ್ಯ ಎಂದರು.

ಮುಂಗಾರು ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಪ್ರಥಮ ಭಟ್ಟ, ಪವಿತ್ರಾ ಸಿದ್ದಿ, ಮಾನ್ಯಾ ಭಟ್ಟ, ಸಿಂಚನಾ ದೇವಾಡಿಗ, ಆರಾಧ್ಯಾ ಭಟ್ಟ, ಸೃಷ್ಟಿ ಮರಾಠಿ, ಗಗನಾ ಗೌಡ, ಚಂದನ ಆಚಾರಿ, ರಾಮಕೃಷ್ಣ ಹೆಗಡೆ, ಅಭಿಷೇಕ ಹೆಬ್ಬಾರ್, ಅಭಿನವ ಭಟ್ಟ ಸ್ವರಚಿತ ಕವಿತೆ ವಾಚಿಸಿದರು. ಪಾಲಕ ಪ್ರತಿನಿಧಿ ವಿಘ್ನೇಶ್ವರ ಭಟ್ಟ ಅರಬೈಲ್ ಉಪಸ್ಥಿತರಿದ್ದರು. ಶಿಕ್ಷಕರಾದ ಮಹೇಶ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಸುಶ್ಮಿತಾ ನಾಯಕ ವಂದಿಸಿದರು.

ಯಲ್ಲಾಪುರ ತಾಲೂಕಿನ ಅರಬೈಲ್ ಶಾಲೆಯಲ್ಲಿ ''''ಕವನ ಆಲಿಸೋಣ ಭಾವಾರ್ಥ ಗ್ರಹಿಸೋಣ'''' ಉಪನ್ಯಾಸ ಕಾರ್ಯಕ್ರಮ ನಡೆಯಿತು.