ಸವಣೂರು: ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ ಹೊಂದಿದ್ದಾಗ ಮಾತ್ರ ಮುಂದಿನ ಭವಿಷ್ಯದಲ್ಲಿ ನಾಯಕನ ಪಾತ್ರ ವಹಿಸಲು ಸಾಧ್ಯ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು. ಪಟ್ಟಣದ ಶ್ರೀಮತಿ ಲಲಿತಾದೇವಿ ಗುರುಸಿದ್ಧಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 2025-26ನೇ ಸಾಲಿನ ಪಠ್ಯೇತರ ಚಟುವಟಿಕೆ ಮತ್ತು ವಿವಿಧ ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸಂಪತ್ತಾಗಿರುವ ವಿದ್ಯಾರ್ಥಿಗಳನ್ನು ನಮ್ಮಲ್ಲಿಯೇ ಉಳಿಯುವಂತೆ ಮಾಡಿ ದೇಶದ ಪ್ರಗತಿ ಸಾಧಿಸಬೇಕಿದೆ ಎಂದರು. ವಿದ್ಯಾರ್ಥಿಗಳ ಕೋರಿಕೆಯಂತೆ ಕಾಲೇಜಿನ ಎದುರಿನ ರಸ್ತೆಗೆ ಹಂಪ್ಸ್ ಹಾಕಿಸುವುದು, ಕಾಲೇಜಿಗೆ ಸಭಾಂಗಣ, ಕಾಲೇಜಿನ ಗ್ರಂಥಾಲಯಕ್ಕೆ ಪುಟ್ಪಾತ್ ರಸ್ತೆ, ಬಿಸಿಎ ಕೋರ್ಸ್ ಲ್ಯಾಬ್ಗೆ ಕಂಪ್ಯೂಟರ್ ಪೂರೈಕೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಚಳ್ಳಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಗಂಗಾನಾಯ್ಕ್ ಮಾತನಾಡಿ, ಕೇಳುವ, ಓದುವ ಮತ್ತು ಬರೆಯುವ ಈ ಮೂರು ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಲ್ಲಿ ಮಾತ್ರ ಸಾಧನೆಯ ಹಾದಿ ಸುಗಮವಾಗಲಿದೆ ಎಂದರು. ಬೆಳ್ಳಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾವಿಯ ಪ್ರಾಧ್ಯಾಪಕಿ ದಿವ್ಯಶ್ರೀ ಬಿ.ಎನ್., ಡಾ. ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನ ಮಹಿಳೆಯರಿಗೆ ಪುರುಷ ಸಮಾನ ಸ್ಥಾನಮಾನ ನೀಡಿದೆ. ಶಿಕ್ಷಣ ನಮ್ಮ ಅಸಮಾನತೆಗಳನ್ನು ನಿವಾರಿಸುವ ಒಂದು ಪ್ರಮುಖ ಸಾಧನವಾಗಿದೆ ಎಂದರು. ಕಾಲೇಜ್ ಪ್ರಾಚಾರ್ಯ ಪ್ರೊ. ಪ್ರವೀಣ ಮಹಾಬಲೇಶ್ವರ ಆನಂದಕಂದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಬಿಇಒ ಎಂ.ಎಫ್. ಬಾರ್ಕಿ, ಪ್ರಾಧ್ಯಾಪಕರಾದ ಡಾ. ಎಂ.ಎಚ್. ಹೆಬ್ಬಾಳ, ಗಂಗಾನಾಯ್ಕ.ಎಲ್., ಎಸ್.ಬಿ. ಪ್ರವೀಣಕುಮಾರ, ಚಂದ್ರಕಾಂತ ಶಿರಗುಂಪಿ, ಡಾ. ವಿಶ್ವನಾಥ ಯತ್ನಳ್ಳಿ, ಎಫ್.ಬಿ. ನಾಯ್ಕರ, ಲುಬ್ನಾ ನಾಜ್, ರವಿಶಂಕರ ಗಡಿಯಪ್ಪನವರ, ಪ್ರಿಯದರ್ಶಿನಿ ಪಾಟೀಲ, ಶಂಕರಪ್ಪ ಉಪ್ಪಿನ, ಮಹೇಂದ್ರ ದೊಡ್ಡಮನಿ ಹಾಗೂ ಇತರರು ಪಾಲ್ಗೊಂಡಿದ್ದರು.
ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಿ: ಯಾಸೀರಅಹ್ಮದಖಾನ್ ಪಠಾಣ
ಸವಣೂರು ಪಟ್ಟಣದ ಶ್ರೀಮತಿ ಲಲಿತಾದೇವಿ ಗುರುಸಿದ್ಧಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಇತ್ತೀಚೆಗೆ 2025-26ನೇ ಸಾಲಿನ ಪಠ್ಯೇತರ ಚಟುವಟಿಕೆ ಮತ್ತು ವಿವಿಧ ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.