ಹಾನಗಲ್ಲ: ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳಲು ಬೇಕಾಗುವ ಬೌದ್ಧಿಕ ಕೌಶಲ್ಯ ಬೆಳೆಸಿಕೊಳ್ಳುವ ಅನಿವಾರ್ಯತೆ ಈಗ ಬಹಳ ಇದೆಯಲ್ಲದೆ, ಕೃತಕ ಬುದ್ಧಿಮತ್ತೆಯ ಮೂಲಕ ಉದ್ಯೋಗಗಳು ಅಪಾಯವೂ ನಮ್ಮನ್ನು ಕಾಡುತ್ತಿದೆ ಎಂದು ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸಂಟ್ ಜೇಸನ್ ತಿಳಿಸಿದರು.ಮಂಗಳವಾರ ಇಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಯುವಕರಿಗಾಗಿ ಉದ್ಯೋಗ ಮಾರ್ಗದರ್ಶನ, ಭವಿಷ್ಯಕ್ಕೆ ಬದುಕು ರೂಪಿಸಿಕೊಳ್ಳುವ ಕ್ರಮಗಳ ಕುರಿತ ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿನ ಸುಸ್ಥಿರತೆಗೆ ಬೇಕಾಗುವ ಕೌಶಲ್ಯಗಳನ್ನು ಹೊಂದುವುದು ತೀರ ಅವಶ್ಯ. ನಾಳೆಗಳು ಬಹಳಷ್ಟು ಸ್ಪರ್ಧಾತ್ಮಕವಾಗಿವೆ. ನಮ್ಮ ಉತ್ಸಾಹ ಕ್ರಿಯಾಶೀಲತೆಗೆ ಕುಂದು ಬರದಂತೆ ಬದುಕು ರೂಪಿಸಿಕೊಳ್ಳುವ ದಾರಿ ಕಂಡುಕೊಳ್ಳಬೇಕು. ಇಂದಿನ ಯುವಕರಿಗೆ ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆಯೂ ಇದೆ ಎಂದರು.ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಕಾಲ ಹರಣ ಬೇಡ. ಕಾಲವನ್ನು ದುಡಿಸಿಕೊಳ್ಳುವ ಬುದ್ಧಿ, ವಿವೇಕ ನಮಗೆ ಬರಬೇಕಾಗಿದೆ. ಇದು ಔದ್ಯೋಗಿ ಸ್ಪರ್ಧಾ ಕಾಲವಾಗಿದೆ. ಇಲ್ಲಿ ಅಂಕಪಟ್ಟಿಯ ಅಂಕಗಳಿಗಿಂತ ವ್ಯಕ್ತಿ ಕೌಶಲ್ಯ ಕ್ರಿಯಾಶೀಲತೆಯೇ ಮಹತ್ವ ಪಡೆಯುತ್ತವೆ. ನಾಳೆಗಳಿಗಾಗಿ ಇಂದೇ ಗಂಭೀರ ಚಿಂತನೆ ನಡೆಸಬೇಕು. ಉದ್ಯೋಗ ಯಾವುದು ಎನ್ನುವುದಕ್ಕಿಂತ ಅದರಿಂದ ಬರುವ ಆದಾಯವೇ ಈಗ ಮುಖ್ಯವಾಗುತ್ತಿದೆ. ತಾಂತ್ರಿಕ ಯುಗದಲ್ಲಿರುವ ಜಗತ್ತಿನ ಓಟಕ್ಕೆ ಸರಿಯಾಗಿ ಓಡುವ, ಅದಕ್ಕೆ ಬೇಕಾಗುವ ಕೌಶಲ್ಯವನ್ನು ಪ್ರದರ್ಶಿಸುವವರಿಗೆ ಮಾತ್ರ ಒಳ್ಳೆಯ ಅವಕಾಶಗಳಿವೆ ಎಂದರು.ಪರಶುರಾಮ ಆಲದಕಟ್ಟಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಒಂದುಕಲೆ. ಇದಕ್ಕಾಗಿ ಉತ್ತಮ ಅಧ್ಯಯನ, ವಿಷಯದ ಪರಿಪೂರ್ಣ ತಿಳುವಳಿಕೆ ಬೇಕು. ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ಯಾರು ಕಾಲವನ್ನು ದುಡಿಸಿಕೊಳ್ಳುತ್ತಾರೋ ಅವರು ಉತ್ತಮ ಜೀವನ ನಿರ್ವಹಣೆಯಲ್ಲಿ ಯಶಸ್ವಿಯಾಗುತ್ತಾರೆ ಎಂದರು.ನಯನಾ ಗೊಲ್ಲರ ವೇದಿಕೆಯಲ್ಲಿದ್ದರು. ಶೀಲಾ ಕಟ್ಟಿಮನಿ ಸಂವಿಧಾನ ಪ್ರಸ್ತಾವನೆ ಓದಿದರು. ಜಯಾ ಕೋಡಂಬಿ ಸ್ವಾಗತಿಸಿದರು. ಲೋಹಿತ ಕಾಟಣ್ಣನವರ ಕಾರ್ಯಕ್ರಮ ನಿರೂಪಿಸಿದರು. ರೇವಣ್ಣ ದಾನಗೊಂಡರ ವಂದಿಸಿದರು.