ವಿದ್ಯೆಯ ಜತೆ ಕೌಶಲ್ಯ ರೂಢಿಸಿಕೊಳ್ಳಿ: ಪ್ರಾಂಶುಪಾಲ ಡಿ.ಕೆ.ಮಂಜಯ್ಯ

| Published : Jun 17 2024, 01:42 AM IST

ವಿದ್ಯೆಯ ಜತೆ ಕೌಶಲ್ಯ ರೂಢಿಸಿಕೊಳ್ಳಿ: ಪ್ರಾಂಶುಪಾಲ ಡಿ.ಕೆ.ಮಂಜಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನವನ್ನು ಕೊಡದ ವಿದ್ಯೆ ವ್ಯರ್ಥವಾಗುತ್ತದೆ. ಆದ್ದರಿಂದ ವಿದ್ಯೆಯ ಜತೆಗೆ ಕೌಶಲ್ಯಗಳನ್ನು ರೂಢಿಸಿಕೊಳ್ಳಿ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಮಂಜಯ್ಯ ಹೇಳಿದರು. ಹಾಸನ ಕಾಲೇಜಿನಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾನೂನು ಕಾಲೇಜಲ್ಲಿ ಸಾಂಸ್ಕೃತಿಕ ಕಲರವ

ಹಾಸನ: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂಬ ಕನಸನ್ನು ಹೊತ್ತು ಪದವಿ ಶಿಕ್ಷಣಕ್ಕೆ ಸೇರಿರುತ್ತಾರೆ. ಅನ್ನವನ್ನು ಕೊಡದ ವಿದ್ಯೆ ವ್ಯರ್ಥವಾಗುತ್ತದೆ. ಆದ್ದರಿಂದ ವಿದ್ಯೆಯ ಜತೆಗೆ ಕೌಶಲ್ಯಗಳನ್ನು ರೂಢಿಸಿಕೊಳ್ಳಿ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಮಂಜಯ್ಯ ಹೇಳಿದರು.

ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಸಾಂಸ್ಕೃತಿಕ ಕಲರವ’ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ದೇಶದಲ್ಲಿ ಸುಮಾರು ೧೮೦೦ ಜಾತಿಗಳಿವೆ, ೩ ಸಾವಿರಕ್ಕೂ ಹೆಚ್ಚು ಭಾಷೆಗಳಿವೆ. ಅದರಲ್ಲಿ ಎಷ್ಟೋ ಭಾಷೆಗಳನ್ನು ಕೇಳುವುದಕ್ಕೆ ಆಗುವುದಿಲ್ಲ. ಭಾರತದ ಸಂವಿಧಾನದಲ್ಲಿ ೨೪ ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಘೋಷಿಸಲಾಗಿದೆ. ಅವುಗಳೆಲ್ಲವುಗಳಿಗೂ ಲಿಪಿಗಳಿವೆ. ಲಿಪಿಗಳಿಲ್ಲದ ಭಾಷೆಗಳನ್ನು ಬುಡಕಟ್ಟು ಸಮುದಾಯದವರು ಸೇರಿದಂತೆ ಇತರೆ ಸಮುದಾಯದ ಜನರು ಮಾತನಾಡುತ್ತಾರೆ. ಅವರವರ ಸಂಪ್ರದಾಯಕ್ಕೆ ತಕ್ಕಂತೆ, ಸಂಸ್ಕೃತಿಗೆ ತಕ್ಕಂತೆ ಭಾಷೆ ಬದಲಾಗುತ್ತ ಹೋಗುತ್ತದೆ. ಅದೇ ರೀತಿ ಉಡುಗೆ ತೊಡುಗೆ ಊಟೋಪಚಾರ ನಡವಳಿಕೆಗಳಲ್ಲಿಯೂ ಭಿನ್ನತೆ ಇದೆ ಎಂದು ಹೇಳಿದರು

ಭವಿಷ್ಯದಲ್ಲಿ ಸಣ್ಣ ಸಣ್ಣ ಆಸೆಗಳಿಗೋಸ್ಕರ ದೊಡ್ಡ ದೊಡ್ಡ ಅವಕಾಶಗಳನ್ನು ಕಳೆದುಕೊಳ್ಳುವತ್ತ ವಿದ್ಯಾರ್ಥಿಗಳು ಮುಂದಾಗಬಾರದು. ಉನ್ನತ ಶಿಕ್ಷಣ ವಿದ್ಯಾಭ್ಯಾಸದಲ್ಲಿ ಬಹುತೇಕ ವಿದ್ಯಾರ್ಥಿಗಳು ಹಳ್ಳಿಗಳಿಂದ ಬಂದಿರುವವರೇ ಹೆಚ್ಚು, ದೇಶೀಯತೆ ಎನ್ನುವಂಥದ್ದು ಈ ಕಾಲಘಟ್ಟದ್ದಲ್ಲ, ವಿದೇಶದವರು ಭಾರತೀಯ ಸಂಸ್ಕೃತಿಯತ್ತ ಮುಖ ಮಾಡುವ ಇತ್ತೀಚಿನ ಕಾಲಘಟ್ಟದಲ್ಲಿ ಭಾರತದ ಯುವ ಸಮುದಾಯದವರು ಭಾರತೀಯ ಸಂಪ್ರದಾಯವನ್ನು ಕಳೆದುಕೊಳ್ಳುತ್ತ ವಿದೇಶಿ ಸಂಸ್ಕೃತಿಯನ್ನು ಆಚರಣೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಶೀನಾ ಥಾಮಸ್, ದೈಹಿಕ ಶಿಕ್ಷಣ ನಿರ್ದೇಶಕ ಮಹದೇವಪ್ಪ ಎಸ್.ಎನ್, ಸಹ ಪ್ರಾಧ್ಯಾಪಕ ಡಾ. ಗಣೇಶ್ ಹೆಗ್ಗಡೆ, ಡಾ.ಅನಿತಾ ಕೆ.ಎನ್., ಡಾ. ಭಾರತಿ ಜಿ ಗಣವಾರಿ, ಸಹಾಯಕ ಪ್ರಾಧ್ಯಾಪಕ ಲೇಪಾಕ್ಷಯ್ಯ ಎಸ್.ವಿ., ಡಾ.ಶಿವಣ್ಣ ನಾಯ್ಕ್, ಗ್ರಂಥಪಾಲಕ ಪಾಪಣ್ಣ ವಿ., ಮಂಜೇಗೌಡ, ಮಂಜುನಾಥ್ ಎಚ್.ಜಿ., ಸುಮಾ ಆರ್. ಇದ್ದರು.