ಹುಬ್ಬಳ್ಳಿ: ಹೊಸ ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಪ್ರೋತ್ಸಾಹ ನೀಡಲು ಪ್ರಧಾನಮಂತ್ರಿ ವಿಕಸಿತ್ ಭಾರತ ರೋಜಗಾರ ಯೋಜನೆ (ಪಿಎಂವಿಬಿಆರ್ವೈ) ಆರಂಭಿಸಿದ್ದು, ಇದರಿಂದ ಉದ್ಯೋಗ ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು.
ನಗರದ ಬಿವಿಬಿ ಕ್ಯಾಂಪಸ್ ಸಭಾಂಗಣದಲ್ಲಿ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (ಇಪಿಎಫ್ಒ) ಶುಕ್ರವಾರ ಏರ್ಪಡಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅನ್ಲೈನ್ ಮೂಲಕ ಪಿಎಂವಿಬಿಆರ್ವೈ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದ 200 ಕಡೆಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು, ಪ್ರಧಾನಮಂತ್ರಿ ಆನ್ಲೈನ್ ಮೂಲಕ ಫಲಾನುಭವಿಗಳಿಗೆ ₹2,400 ಕೋಟಿ ಸಹಾಯಧನ ಬಿಡುಗಡೆ ಮಾಡಿ ಸಂದೇಶ ನೀಡುತ್ತಿರುವುದು ವಿಶೇಷವಾಗಿದೆ ಎಂದರು.
ಇಪಿಎಫ್ಒ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ಆಯುಕ್ತ ಆಶುತೋಷ ಮಾತನಾಡಿ, ಕಳೆದ 2025 ಆಗಸ್ಟ್ ತಿಂಗಳಲ್ಲಿ ಈ ಯೋಜನೆ ಜಾರಿಗೊಳಿಸಿದ್ದು, 2027 ಜುಲೈ ವರೆಗೂ ಚಾಲ್ತಿ ಇರುತ್ತದೆ. ಈ ಅವಧಿಯಲ್ಲಿ ಒಟ್ಟು 3.5 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಇದೆ. ಇದುವರೆಗೂ 1.92 ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಹೇಳಿದರು.ನವದೆಹಲಿಯ ವಿಜ್ಞಾನ ಭವನದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆನ್ಲೈನ್ ಮೂಲಕ ಹೊಸ ಉದ್ಯೋಗಿಗಳು ಮತ್ತು ಉದ್ಯೋಗದಾತರನ್ನು ಉದ್ದೇಶಿಸಿ ಮಾತನಾಡಿದರು. ದೇಶಪಾಂಡೆ ಫೌಂಡೇಷನ್ ಸಿಇಒ ಪಿ.ನರಸಿಂಹ ನಾಯಕ ಮಾತನಾಡಿದರು.
ದೇಶಪಾಂಡೆ ಫೌಂಡೇಷನ್, ಆರ್ಎನ್ಎಸ್ ಮೋಟರ್ಸ್, ವಿಆರ್ಎಲ್ ಸಮೂಹ ಸಂಸ್ಥೆ ಸೇರಿದಂತೆ ಹಲವು ಕಂಪನಿ ಅಧಿಕಾರಿಗಳು ಹೊಸದಾಗಿ ನೇಮಕಾತಿ ಮಾಡಿಕೊಂಡ ಉದ್ಯೋಗಿಗಳಿಗೆ ನೇಮಕ ಪತ್ರ ವಿತರಿಸಿದರು.
ಜಿಲ್ಲಾಧಿಕಾರಿ ಸ್ನೇಹಲ್, ಮೇಯರ್ ಜ್ಯೋತಿ ಪಾಟೀಲ, ಕೆಸಿಸಿಐ ಕಾರ್ಯದರ್ಶಿ ಉದಯ ಎಂ.ರೇವಣಕರ್, ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ರೂಪೇಶಕುಮಾರ್, ಕೆಸಿಸಿಐ ಅಧ್ಯಕ್ಷ ಅದಪ್ಪಗೌಡರ ಮತ್ತಿತರರು ಇದ್ದರು. ಹುಬ್ಬಳ್ಳಿ ಇಪಿಫ್ಒ ಕಚೇರಿ ಹಣಕಾಸು ಅಧಿಕಾರಿ ಜೆ.ಎ.ಮಂಜುನಾಥ ನಿರೂಪಿಸಿದರು.