ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಖುರ್ಚಿ ಗಲಾಟೆಯಲ್ಲಿ ತೊಡಗಿರುವುದರಿಂದ ರಾಜ್ಯದ ಅಭಿ ವೃದ್ಧಿ ಕುಂಠಿತವಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್.ಶೆಟ್ಟಿ ಹೇಳಿದರು.ಜೆಡಿಎಸ್ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆ ಹಿನ್ನೆಲೆಯಲ್ಲಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ರಾಜ್ಯದಲ್ಲಿ ಈ ಹಿಂದೆ ಹೋಟೆಲ್ , ರೆಸಾರ್ಟ್ ರಾಜಕಾರಣ ನಡೆದು ಅದೀಗ ವಿದೇಶಕ್ಕೆ ಹೋಗಿ ತಲುಪಿದೆ. ಒಬ್ಬರು ಕುರ್ಚಿಯಲ್ಲಿ ಕೂರಲು ಕಾಯುತ್ತಿದ್ದರೆ, ಮತ್ತೊಬ್ಬರು ಕುರ್ಚಿ ಬಿಡಲು ಸಿದ್ಧವಿಲ್ಲ. ಅಧಿಕಾರ ಹಂಚಿಕೆಗೆ ಸಂಕ್ರಾಂತಿ, ಗಣರಾಜ್ಯೋತ್ಸವ ಗಡಿಗಳೆಲ್ಲಾ ಮುಕ್ತಾಯಗೊಂಡಿವೆ. ಇದೀಗ ಬಜೆಟ್ ಎಂಬ ಗಡಿ ಕಾಯುತ್ತಿದೆ.ಸಿಎಂ, ಡಿಸಿಎಂ ಶಾಸಕರಿಗೂ ಸರಿಯಾಗಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಶಾಸಕರು ಜನರ ಹಿತಾಸಕ್ತಿ ಕಾಪಾಡದೆ ಅಧಿಕಾರದ ಬೆನ್ನ ಹಿಂದೆ ಬಿದ್ದಿದ್ದಾರೆ ಎಂದರು. ಹಕ್ಕುಪತ್ರ ನೀಡಿದವರಿಗೆ ಗಡಿ ರೇಖೆ ಗುರುತಿಸಲು, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕ್ಷೇತ್ರದಲ್ಲಿ ಅರಣ್ಯ ಇಲಾಖೆ, ಶಾಸಕರ ವೈಫಲ್ಯದಿಂದ ಪದೇ ಪದೇ ಆನೆ ದಾಳಿಗೆ ಜನರ ಸಾವಾಗುತ್ತಿದೆ. ಯಾರಾದರೂ ಮೃತಪಟ್ಟಾಗ ಮಾತ್ರ ಶಾಸಕರು ಭರವಸೆ ನೀಡುತ್ತಿದ್ದಾರೆ. ಕಾರ್ಯರೂಪಕ್ಕೆ ಬರುತ್ತಿಲ್ಲ. ತೋಟಗಳಲ್ಲಿ ಕೂಲಿ ಮಾಡು ವವನೂ ಸಹ ರೈತನೇ ಕಾಡು ಪ್ರಾಣಿಗಳ ದಾಳಿಯಿಂದ ಯಾರಾದರೂ ಮೃತಪಟ್ಟರೆ ₹50 ಲಕ್ಷ ಪರಿಹಾರ ನೀಡಬೇಕು. ಈಗಾಗಲೇ ಮೃತಪಟ್ಟವರಿಗೆ ₹20 ಲಕ್ಷ ನೀಡಿದ್ದು, ಕೂಡಲೇ ಎಲ್ಲಾ ಕುಟುಂಬಕ್ಕೂ ₹30 ಲಕ್ಷ ನೀಡಬೇಕು ಎಂದು ಆಗ್ರಹಿಸಿದರು. ವ್ಯಕ್ತಿ ಮೃತಪಟ್ಟ ಗ್ರಾಮದಲ್ಲಿ ಚೆಕ್ ವಿತರಿಸಬೇಕಿದೆ. ಹೋಬಳಿ ಜೆಡಿಎಸ್ ಅಧ್ಯಕ್ಷ ಕೆ.ಆರ್.ದೀಪಕ್ ಮರಿಗೌಡ, ಖಾಂಡ್ಯ-ಬಾಳೆಹೊನ್ನೂರು ಘಟಕದ ಅಧ್ಯಕ್ಷ ಕೆ.ಟಿ. ಗೋವಿಂದೇಗೌಡ, ಜೆಡಿಎಸ್ ಹಿರಿಯ ಮುಖಂಡ ಕೆ.ಎನ್.ಮರಿಗೌಡ ಕೊಳಲೆ, ಅತಿಶಯ್ ಮಾಗುಂಡಿ, ಸುಧಾ ಎಸ್.ಪೈ, ಉದಯ್ ಸುವರ್ಣ, ಶಿವಶಂಕರ್ ಖಾಂಡ್ಯ ಮತ್ತಿತರರು ಹಾಜರಿದ್ದರು.
ಕಲ್ಲೆಸೆತ ಘಟನೆ ಉದ್ದೇಶಪೂರ್ವಕ: ಚಿಕ್ಕಮಗಳೂರಿನ ಮನೆಯೊಂದರ ಮೇಲೆ ಕಲ್ಲೆಸೆದು ಕೋಮು ಗಲಭೆ ಸೃಷ್ಟಿಸಿರುವುದು ಉದ್ದೇಶ ಪೂರ್ವಕವಾಗಿದೆ. ಕಲ್ಲು ಎಸೆದವರು, ಅವರನ್ನು ಹಿಡಿದವರು ಎಲ್ಲರೂ ಒಂದೇ ಕೋಮಿನವರು ಈ ಮೂಲಕ ಜನರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನಿಸಲಾಗಿದೆ ಎಂದು ಸುಧಾಕರ್ ಎಸ್.ಶೆಟ್ಟಿ ಹೇಳಿದರು.ಶೀಘ್ರದಲ್ಲಿ ಗ್ರಾಪಂ ಚುನಾವಣೆಯಿದ್ದು, ಇದಕ್ಕೆ ಪಕ್ಷದ ಕಾರ್ಯಕರ್ತರು ಸಿದ್ಧರಾಗಬೇಕಿದೆ. ಪಕ್ಷದ ನಾಯ ಕರ ನಿರ್ಧಾರಕ್ಕೆ ನಾವು ಬದ್ಧ. ಗ್ರಾಪಂ ಚುನಾವಣೆ ಪಕ್ಷಕ್ಕಿಂತ ವ್ಯಕ್ತಿಗಳ ಆಧಾರಿತ ಚಿಹ್ನೆ ರಹಿತವಾಗಿದೆ ಎಂದರು. ಜಿಪಂ, ತಾಪಂ ಚುನಾವಣೆ ನಡೆಸಲು ಈ ಸರ್ಕಾರಕ್ಕೆ ಮನಸ್ಸು ಇಲ್ಲ ಎಂದು ದೂರಿದರು.-೧೮ಬಿಹೆಚ್ಆರ್ ೧:ಬಾಳೆಹೊನ್ನೂರು ಜೆಡಿಎಸ್ ಕಚೇರಿಯಲ್ಲಿ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೆ.ಆರ್.ದೀಪಕ್, ಕೆ.ಟಿ.ಗೋವಿಂದೇಗೌಡ, ಕೆ.ಎನ್.ಮರಿಗೌಡ, ಅತಿಶಯ್, ಸುಧಾ ಪೈ, ಇದ್ದರು.