ವಿಕೇಂದ್ರೀಕರಣ ವ್ಯವಸ್ಥೆಯಿಂದ ಅಭಿವೃದ್ಧಿ ಸಾಧ್ಯ: ಡಾ. ಯತೀಂದ್ರ

| Published : Oct 05 2025, 01:01 AM IST

ವಿಕೇಂದ್ರೀಕರಣ ವ್ಯವಸ್ಥೆಯಿಂದ ಅಭಿವೃದ್ಧಿ ಸಾಧ್ಯ: ಡಾ. ಯತೀಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೆಳಹಂತದ ಯೋಜನೆಗಳೊಂದಿಗೆ ವಾರ್ಷಿಕ ಜಿಲ್ಲಾಭಿವೃದ್ಧಿ ಯೋಜನೆ ತಯಾರಿಸುವ ಕಾರ್ಯಾಗಾರದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.

ಗದಗ: ಗ್ರಾಮಾಭಿವೃದ್ಧಿಗೆ ಕೆಳ ಹಂತದ ವಾರ್ಷಿಕ ಯೋಜನೆಗಳು ಅತ್ಯಂತ ಸಹಕಾರಿಯಾಗಿವೆ. ವಿಕೇಂದ್ರೀಕರಣ ವ್ಯವಸ್ಥೆಯಿಂದ ಹಾಗೂ ಸರಿಯಾದ ಯೋಜನೆಗಳಿಂದ ಮಹತ್ತರ ಅಭಿವೃದ್ಧಿ ಸಾಧ್ಯ ಎಂದು ವಿಧಾನಪರಿಷತ್‌ ಸದಸ್ಯ ಡಾ.‌ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೆಳಹಂತದ ಯೋಜನೆಗಳೊಂದಿಗೆ ವಾರ್ಷಿಕ ಜಿಲ್ಲಾಭಿವೃದ್ಧಿ ಯೋಜನೆ ತಯಾರಿಸುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂತ ರಾಜಕಾರಣಿ, ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಅಪಾರ ಅನುಭವ ಹಾಗೂ ಅಭಿವೃದ್ಧಿ ಮುಂದಾಲೋಚನೆ ಉಳ್ಳವರಾಗಿದ್ದರಿಂದ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಡಿ.ಆರ್. ಪಾಟೀಲ ಅವರನ್ನು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು.

ಡಿ.ಆರ್. ಪಾಟೀಲ ಅವರ ಅಪಾರ ಅನುಭವದಿಂದ ವಿಕೇಂದ್ರೀಕರಣ ವ್ಯವಸ್ಥೆ ಹಾಗೂ ಯೋಜನೆ ತಯಾರಿಕೆ ಕರಡು ಪ್ರತಿ ಈಗಾಗಲೇ ಗದಗ ಜಿಲ್ಲೆಯಲ್ಲಿ ಸಿದ್ಧವಾಗಿದೆ. ಇದೇ ತರಹ ಮೈಸೂರಲ್ಲಿ ಸಹ ಅಭಿವೃದ್ಧಿ ಯೋಜನೆಯ ಕರಡು ತಯಾರಿಸಲಾಗುವುದು ಎಂದು ಹೇಳಿದರು.

ವಾರ್ಡ್‌, ಗ್ರಾಮಮಟ್ಟದಲ್ಲಿ ಸಭೆ ನಡೆಸಿ ತಮ್ಮ ಗ್ರಾಮದಲ್ಲಿ ಅಗತ್ಯವಾದ ಅಭಿವೃದ್ಧಿ ಕೆಲಸಗಳ ಕುರಿತು ಯೋಜನಾ ವರದಿ ಕರಡು ಸಿದ್ಧಪಡಿಸಿ, ತಾಪಂ, ಜಿಪಂ ಮೂಲಕ ಸರ್ಕಾರಕ್ಕೆ ಕಳುಹಿಸಿ ಆದ್ಯತೆ ಆಧಾರದಲ್ಲಿ ಗ್ರಾಮಗಳ ಯೋಜನೆಗಳ ಅನುಷ್ಠಾನಕ್ಕೆ ಸಹಕಾರಿ ಆಗಲಿದೆ. ಇದೊಂದು ಉತ್ತಮ ಕಾರ್ಯವಾಗಿದೆ ಎಂದರು.

ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ವಿಕೇಂದ್ರೀಕರಣ ವ್ಯವಸ್ಥೆ ಗ್ರಾಮಮಟ್ಟದಿಂದ ಬಲವರ್ಧನೆಯಾಗಬೇಕು. ಆಗ ಮಾತ್ರ ಗ್ರಾಮಗಳು ಅಭಿವೃದ್ಧಿಯೊಂದಿಗೆ ಆರ್ಥಿಕ ಸದೃಢತೆ ಸಾಧಿಸಲಿವೆ. ರಾಜ್ಯದ ಎಲ್ಲ ಗ್ರಾಮಗಳಲ್ಲೂ ವಾರ್ಷಿಕ ಅಭಿವೃದ್ಧಿ ಯೋಜನೆಗಳ ಕರಡು ಪ್ರತಿ ತಯಾರಿಸಿ ಮುಂದಿನ ಹಂತಕ್ಕೆ ಕಳುಹಿಸಿಕೊಡಬೇಕು. ಅದನ್ನು ಸಹ ನಿಗದಿಪಡಿಸಿದ ಅವಧಿಯೊಳಗೆ ಪುರ್ಣವಾಗಿಸಬೇಕು ಎಂದರು.

ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಅಶೋಕ ಮಂದಾಲಿ, ಸುಜಾತಾ ದೊಡ್ಮನಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಎ.ಎ. ಕಂಬಾಳಿಮಠ, ಎಂ.ವಿ. ಚಳಗೇರಿ ಇದ್ದರು.