ಚಿಕ್ಕಬಳ್ಳಾಪುರ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಿ

| Published : Oct 13 2024, 01:05 AM IST

ಸಾರಾಂಶ

ಭಾರತದ ಮೊದಲ ಜೀವವೈವಿಧ್ಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇವನಹಳ್ಳಿ ತಾಲ್ಲೂಕಿನ ನಲ್ಲೂರು ಹುಣಸೆ ತೋಪಿನಲ್ಲಿ 410 ವರ್ಷಗಳಷ್ಟು ಹಳೆಯದಾದ ಭಾರಿ ಗಾತ್ರದ ಸುಮಾರು 300 ಹುಣಸೆ ಮರಗಳಿವೆ. ಇದರ ಜತೆ ಇತರ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಸದ ಡಾ.ಸುಧಾಕರ್‌ ಕೇಂದ್ರಕ್ಕೆ ಮನವಿ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನಲ್ಲೂರು ಹುಣಸೆ ತೋಪು, ಶಿವಗಂಗೆ, ದೇವನಹಳ್ಳಿ ಕೋಟೆ, ಆವತಿ ಬೆಟ್ಟ ಸೇರಿದಂತೆ ಮೊದಲಾದ ಸ್ಥಳಗಳ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೂಲಸೌಕರ್ಯ ಕಲ್ಪಿಸುವಂತೆ ಸಂಸದ ಡಾ.ಕೆ.ಸುಧಾಕರ್‌ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಈ ಮೂಲಕ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರವಾಸೋದ್ಯಮಕ್ಕೆ ಅಭಿವೃದ್ಧಿಯ ಹೊಸ ಸ್ಪರ್ಶವನ್ನು ನೀಡಲು ಸಂಸದ ಡಾ.ಕೆ.ಸುಧಾಕರ್‌ ಪ್ರಯತ್ನ ಆರಂಭಿಸಿದ್ದಾರೆ. ಯೋಜನೆಯಡಿ ಅಭಿವೃದ್ಧಿಗೆ ಮನವಿ

ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿನ ಪುರಾತನ ತೀರ್ಥ ಕ್ಷೇತ್ರಗಳು ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಅಭಿವೃದ್ದಿಪಡಿಸುವ ಕುರಿತು ಚರ್ಚಿಸಿ ಮನವಿ ಪತ್ರ ಸಲ್ಲಿಸಿದರು. ಕೇಂದ್ರ ಸರ್ಕಾರದ ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಗಳಡಿ ಈ ತಾಣಗಳನ್ನು ಅಭಿವೃದ್ಧಿ ಮಾಡಬೇಕೆಂದು ಕೋರಿದರು.ಭಾರತದ ಮೊದಲ ಜೀವವೈವಿಧ್ಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇವನಹಳ್ಳಿ ತಾಲ್ಲೂಕಿನ ನಲ್ಲೂರು ಹುಣಸೆ ತೋಪಿನಲ್ಲಿ 410 ವರ್ಷಗಳಷ್ಟು ಹಳೆಯದಾದ ಭಾರಿ ಗಾತ್ರದ ಸುಮಾರು 300 ಹುಣಸೆ ಮರಗಳಿವೆ. ಇದನ್ನು ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬಹುದು. ಇದು ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಅಧ್ಯಯನ ಯೋಗ್ಯ ಸ್ಥಳವೂ ಆಗಿದೆ. ಇಲ್ಲಿ ಮಕ್ಕಳ ಉದ್ಯಾನ ನಿರ್ಮಾಣ ಮಾಡುವಂತೆ ಕೋರಿದ್ದಾರೆ. ಹೊಸಕೋಟೆಯ ಅಮಾನಿಕೆರೆ

ಹೊಸಕೋಟೆಯ ಅಮಾನಿಕೆರೆ ವಲಸೆ ಹಕ್ಕಿಗಳಿಗೆ ಆಶ್ರಯ ತಾಣವಾಗಿದ್ದು, ಪ್ರವಾಸಿಗರು ಹಾಗೂ ವನ್ಯಜೀವಿ ಛಾಯಾಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಕೆರೆಯ ಸುತ್ತ ವಿಹಾರ ಪಥ ಹಾಗೂ ರಸ್ತೆ ನಿರ್ಮಾಣ, ಬೋಟಿಂಗ್‌ ವ್ಯವಸ್ಥೆ, ಮಕ್ಕಳ ಉದ್ಯಾನ, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ಸೌಕರ್ಯಗಳ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದು. ಶಿವಗಂಗೆಗೆ ಪ್ರತಿ ದಿನ ಸುಮಾರು 6,000 ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ಪ್ರವಾಸಿ ಹಾಗೂ ಧರ್ಮ ಕ್ಷೇತ್ರವಾಗಿ ಅಭಿವೃದ್ಧಿ ಮಾಡಬೇಕಿದೆ ಎಂದು ಅವರು ಸಲ್ಲಿಸಿದ ಮನವಿಯಲ್ಲಿ ವಿವರಿಸಿದ್ದಾರೆ. ಇದೇ ರೀತಿ ದೇವನಹಳ್ಳಿ ಕೋಟೆಯ ಬಳಿ ರಸ್ತೆಗಳ ಅಭಿವೃದ್ಧಿಗೂ ಕೋರಿದ್ದಾರೆ. ವಿದುರಾಶ್ವತ್ಥ ಅಭಿವೃದ್ಧಿಗೆ ಮನವಿ

ಕರ್ನಾಟಕದ ಜಲಿಯನ್‌ ವಾಲಾಭಾಗ್‌ ಎಂದು ಹೆಸರು ಪಡೆದಿರುವ ಈ ಸ್ಥಳದಲ್ಲಿ 38 ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾಗಿದ್ದರು. ಇಲ್ಲಿ ವಿದುರ ಅಶ್ವತ್ತ ನಾರಾಯಣ ದೇವಸ್ಥಾನ, ವಿದುರ ನೆಟ್ಟಿರುವ ಅಶ್ವತ್ಥ ವೃಕ್ಷವಿದೆ. ಈ ಭಾಗದಲ್ಲಿ ಪ್ರವಾಸಿಗರಿಗೆ ಆಸನ ವ್ಯವಸ್ಥೆ, ವೀರಸೌಧದಲ್ಲಿ ಆಡಿಯೋ ವ್ಯವಸ್ಥೆ, ಮ್ಯೂಸಿಯಂ ನವೀಕರಣ ಮಾಡಬೇಕಿದೆ. ಒಟ್ಟು 3 ಕೋಟಿ ರೂ. ಅನುದಾನದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.ಇತರೆ ಪ್ರವಾಸಿ ತಾಣಗಳ ಸುಧಾರಣೆ:ಮಂಚೇನಹಳ್ಳಿಯ ಮಿಣಕನಗುರ್ಕಿ, ಗುಡಿಬಂಡೆಯ ಸುರಸದ್ಮಗಿರಿ ಬೆಟ್ಟ, ಆವಲಬೆಟ್ಟ, ತಲಕಾಯಾಲ ಬೆಟ್ಟ, ಆದಿನಾರಾಯಣಸ್ವಾಮಿ ಬೆಟ್ಟ, ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಸ್ಥಾನ, ಗುಮ್ಮನಾಯಕನಪಾಳ್ಯ ಕೋಟೆ ಹಾಗೂ ದೇವಿಕುಂಟೆ ಕೋಟೆಯಲ್ಲಿ ವಿವಿಧ ಮೂಲಸೌಕರ್ಯ ಕಲ್ಪಿಸಬೇಕೆಂದು ಪತ್ರದಲ್ಲಿ ಕೋರಿದ್ದಾರೆ.