ಮೌಲ್ಯಾಂಕನ ಪರೀಕ್ಷೆಯಿಂದ ಸ್ಪರ್ಧಾತ್ಮಕ ಮನೋಭಾವ ವೃದ್ಧಿ: ಚಂದ್ರಶೇಖರ ನುಗ್ಗಲಿ

| Published : Mar 31 2024, 02:04 AM IST

ಮೌಲ್ಯಾಂಕನ ಪರೀಕ್ಷೆಯಿಂದ ಸ್ಪರ್ಧಾತ್ಮಕ ಮನೋಭಾವ ವೃದ್ಧಿ: ಚಂದ್ರಶೇಖರ ನುಗ್ಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಆಲಮಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ವರ್ಗದ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ನಿಡಗುಂದಿ ತಾಲೂಕಿನ ಶಿಕ್ಷಕರ ಅಭಿನಂದನಾ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ಆಲಮಟ್ಟಿಪ್ರಸಕ್ತ ಸಾಲಿನ ಮೌಲ್ಯಾಂಕನ ಪರೀಕ್ಷೆಗೆ ಸಾಕಷ್ಟು ಅಡೆತಡೆ ಬಂದಿದ್ದರೂ, ಸರ್ಕಾರ ಮೊದಲೇ ನಿರ್ಧರಿಸಿದಂತೆ ಅಚ್ಚುಕಟ್ಟಾಗಿ ಮೌಲ್ಯಾಂಕನ ಕಾರ್ಯ ನಡೆಸಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.

ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ 5ನೇ ವರ್ಗದ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ನಿಡಗುಂದಿ ತಾಲೂಕಿನ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣದ ಗುಣಮಟ್ಟದ ಕಲಿಕೆಯ ಅಳತೆಗೋಲಿಗೆ ಮೌಲ್ಯಾಂಕನ ಪರೀಕ್ಷೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯಲಿದೆ. ಶಿಕ್ಷಕ ಸಂಘಟನೆಯ ರಾಜ್ಯ ಘಟಕದ ಪ್ರಯತ್ನದ ಫಲವಾಗಿ 2006ಕ್ಕೂ ಮುಂಚೆ ನೇಮಕಾತಿ ಅಧಿಸೂಚನೆ ಹೊರಡಿಸಿ, 2007ರಲ್ಲಿ ನೇಮಕಗೊಂಡ ನೌಕರರಿಗೆ ಎನ್ ಪಿಎಸ್ ಬದಲಾಗಿ ಓಪಿಎಸ್ ಜಾರಿ ಮಾಡಿಸಲಾಗಿದೆ. 7ನೇ ವೇತನ ಆಯೋಗದಲ್ಲಿ ಹೆಚ್ಚಿನ ವೇತನ ಶ್ರೇಣಿ ಕೊಡಿಸಲಾಗಿದೆ. ಮುಖ್ಯ ಶಿಕ್ಷಕರು ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.

1000 ಮಕ್ಕಳಿಗೆ ಸಮವಸ್ತ್ರ:

ಸರ್ಕಾರ ನೀಡುವ ಎರಡು ಜತೆ ಉಚಿತ ಸಮವಸ್ತ್ರದ ಜತೆ, ಬೆಂಗಳೂರಿನ ಸಂಘಟನೆಯೊಂದನ್ನು ಸಂರ್ಪಕಿಸಲಾಗಿದ್ದು, ಅವರು ತಾಲೂಕಿನ 1000 ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ನೀಡಲು ಒಪ್ಪಿದ್ದು, ಅದನ್ನು ಜೂನ್ ನಲ್ಲಿ ಕೊಡಿಸಲಾಗುವುದು ಎಂದು ಚಂದ್ರಶೇಖರ ನುಗ್ಗಲಿ ತಿಳಿಸಿದರು. ವೈಯಕ್ತಿಕವಾಗಿ 100 ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಕೊಡಿಸಲಾಗುವುದು.ಈಗಾಗಲೇ ಇನ್ಫೋಸಿಸ್ ಫೌಂಡೇಶನ್ ಸಂರ್ಪಕಿಸಿ ₹ 50 ಲಕ್ಷ ವೆಚ್ಚದಲ್ಲಿ ತಾಲೂಕಿನ ಪ್ರತಿ ಶಾಲೆಗೂ ಕಂಪ್ಯೂಟರ್ ನೀಡಲಾಗಿದೆ ಎಂದರು.

ಶಿಕ್ಷಕ ಸಂಘಟನೆಯ ನಿಡಗುಂದಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಲೀಂ ದಡೆದ ಮಾತನಾಡಿದರು. ಸಂಘಟನೆಯ ಮುಖಂಡರಾದ ಆರ್.ಎಸ್. ಕಮತ, ಸಲೀಂ ದಡೆದ, ಬಿ.ಎಸ್. ಯರವಿನತೆಲಿಮಠ, ಎಂ.ಎಂ. ಮುಲ್ಲಾ, ಮುತ್ತು ಹೆಬ್ಬಾಳ, ಪವಾಡೆಪ್ಪ ಚಲವಾದಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ಹುರಕಡ್ಲಿ, ಭಾಷಾಸಾಬ್ ಮನಗೂಳಿ, ಬಿ.ಐ. ಖ್ಯಾಡಿ, ಎಸ್.ಐ. ಕಾರಕೂನ ಮತ್ತೀತರರು ಇದ್ದರು.