ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೋಗಿಗಳ ಆರೋಗ್ಯ ಸೇವೆ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದ್ದಾರೆ.ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ‘ಅರೆ ವಿಶೇಷ ಕೊಠಡಿ’ಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಹಳೇ ಕಟ್ಟಡದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಅರೆ ವಿಶೇಷ ಕೊಠಡಿ ಸ್ಥಾಪಿಸಲಾಗಿದ್ದು, ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಶೇಷ ಆರೋಗ್ಯ ಸೇವೆ ಕಲ್ಪಿಸಲು ಮುಂದಾಗಲಾಗಿದೆ.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊಸದಾಗಿ ಒಳರೋಗಿಗಳಿಗೆ ಚೀಟಿ ಬದಲಾಗಿ ರೋಗಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಮಾಹಿತಿ ದೊರೆಯುವಂತಾಗಲು ‘ಪುಸ್ತಕ’ವನ್ನು ಶಾಸಕ ಬಿಡುಗಡೆ ಮಾಡಿದರು.ಪುಸ್ತಕದಲ್ಲಿ ಪ್ರಯೋಗಾಲಯ ವರದಿ, ಎಕ್ಸರೇ, ಯುಎಸ್ಜಿ ವರದಿ, ಸಿಟಿ ಸ್ಕ್ಯಾನ್ ವರದಿ, ಸಿಟಿ ಫಿಲ್ಮ್ ವರದಿ, ಎಂಆರ್ಐ ಫಿಲ್ಮ್ ವರದಿ, ವಾರ್ಡ್ ಆರೋಗ್ಯ ಸೇವೆ ಸಂಬಂಧಿಸಿದಂತೆ ಮಾಹಿತಿ ಒಳಗೊಂಡಿದೆ.
ಸಾಮಾನ್ಯ ವಿಭಾಗ, ಒಟಿ, ವಾರ್ಡ್ ಸೇವಾ ಶುಲ್ಕಗಳು, ರೋಗಿಯ ಆರೋಗ್ಯ ಸಂಬಂಧ ಸಂಪೂರ್ಣ ವಿವರ, ಕ್ಲಿನಿಕಲ್ ಚಾರ್ಟ್, ಡಿಸ್ಚಾರ್ಜ್ ಮಾಹಿತಿ, ಒಳರೋಗಿಗಳಿಗೆ ಆಹಾರದ ಮೆನು, ಹೀಗೆ ಹಲವು ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಿದರು.ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ಆ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೋಗಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ಈ ಹಿಂದೆ ರೋಗಿಗಳಿಗೆ ಚೀಟಿಯನ್ನು ನೀಡಲಾಗುತ್ತಿತ್ತು. ಈಗ ರೋಗಿಯ ಸಂಪೂರ್ಣ ವಿವರ ಜತನ ಮಾಡಲು ಪುಸ್ತಕ ಮಾದರಿಯಲ್ಲಿ ಹೊರತರಲಾಗಿದ್ದು, ಇದರಿಂದ ಹಲವು ವರ್ಷದ ರೋಗಿಯ ಮಾಹಿತಿ ದೊರೆಯಲಿದೆ. ಇದನ್ನು ಸಂಗ್ರಹಿಸಿಟ್ಟುಕೊಳ್ಳಲು ಅನುಕೂಲವಾಗಲಿದೆ ಎಂದರು.ಕೊಡಗು ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಸಿಟಿ, ಎಂಆರ್ಐ, ಎಕ್ಸ್ರೇ ಹೀಗೆ ಎಲ್ಲಾ ರೀತಿಯ ಆರೋಗ್ಯ ಸೇವೆಗಳು ಲಭ್ಯವಿದೆ. ವಿಶೇಷ ವಾರ್ಡ್ ಇಲ್ಲದಿರುವುದನ್ನು ಗಮನಿಸಿ ‘ಸೆಮಿ ಸ್ಪೆಷಲ್ ವಾರ್ಡ್’ನ್ನು ಸ್ಥಾಪಿಸಿರುವುದು ವಿಶೇಷ ಎಂದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮುಡಾ ಸದಸ್ಯ ಚಂದ್ರಶೇಖರ್, ಪ್ರಮುಖರಾದ ಜಗದೀಶ್, ಸದಾ ಮುದ್ದಪ್ಪ, ಟಿ.ಪಿ.ರಮೇಶ್, ಚುಮ್ಮಿ ದೇವಯ್ಯ, ಪ್ರಕಾಶ್ ಆಚಾರ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಎ.ಜೆ.ಲೋಕೇಶ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್, ವಿವಿಧ ವಿಭಾಗದ ವೈದ್ಯಕೀಯ ಮುಖ್ಯಸ್ಥರು, ಇತರರು ಇದ್ದರು.