ಶಿಗ್ಗಾಂವಿ: ಶಿಗ್ಗಾಂವಿ-ಸವಣೂರು ಮತಕ್ಷೇತ್ರದಲ್ಲಿನ ಎಲ್ಲ ಪವಿತ್ರ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣಗಳನ್ನಾಗಿಸುವ ಮಹದಾಸೆ ನನ್ನದಾಗಿದೆ ಎಂದು ಶಾಸಕ ಯಾಸೀರ ಅಹ್ಮದಖಾನ್‌ ಪಠಾಣ ಹೇಳಿದರು.

ಬಂಕಾಪುರ ಮತ್ತು ಮಣ್ಣೂರ ಗ್ರಾಮಗಳ ಸರಹದ್ದಿನಲ್ಲಿರುವ ಆದಿ ಜಗದ್ಗುರು ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾನ್ಯವಾಗಿ ನೀರಿನಿಂದ ದೇವಸ್ಥಾನಗಳ ಕಟ್ಟಡ ನಿರ್ಮಾಣ ಮಾಡುವುದನ್ನು ನೋಡಿದ್ದೇವೆ. ಆದರೆ, ಈ ದೇವಸ್ಥಾನದ ಕಟ್ಟಡವನ್ನು ನೀರಿನ ಬದಲಾಗಿ ಕುರಿಹಾಲಿನಿಂದ ನಿರ್ಮಿಸಿದ್ದಾರೆ. ಇದು ಅದ್ಭುತ. ಇಂತಹ ಕಟ್ಟಡ ರಾಜ್ಯ ಮಾತ್ರವಲ್ಲ, ದೇಶಕ್ಕೆ ಗೊತ್ತುಮಾಡುವ ಕೆಲಸ ಆಗಬೇಕು ಎಂದರು.

ಕನಕದಾಸರ ಅಲೆದಾಡಿದ ಗುಡ್ಡದ ಚನ್ನಾಪುರದಲ್ಲಿ ಸುಮಾರು ₹೧೭ ಕೋಟಿ ಅನುದಾನದಲ್ಲಿ ಆದಿಕೇಶವ ಮತ್ತು ಚನ್ನಕೇಶವ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದೇವೆ. ಬಂಕಾಪುರ ದುರ್ಗಾದೇವಿ ದೇವಸ್ಥಾನಕ್ಕೆ ೨.೬೦ ಕೋಟಿ ಅನುದಾನದಲ್ಲಿ ದೊಡ್ಡ ದೇವಸ್ಥಾನ ಕಟ್ಟುತ್ತಿದ್ದೇವೆ. ನನ್ನ ಮುಂದಿನ ಗುರಿ ಈ ಪವಿತ್ರ ಸ್ಥಳವನ್ನು ಅಭಿವೃದ್ಧಿ ಪಡಿಸುವುದಾಗಿದೆ. ಇದಕ್ಕಾಗಿ ಭೂ ಮಾಲೀಕರ ಮನವೊಲಿಸಿ ಜಾಗ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಜಿಪಂ ಸದಸ್ಯ ರಮೇಶ ದುಗ್ಗತ್ತಿ, ಕೆಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶೇಖರಗೌಡ ಪಾಟೀಲ ಮಾತನಾಡಿದರು.

ವಿಠ್ಠಲ ಬನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಗ್ಗಾಂವಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುಡ್ಡಪ್ಪ ಜಲದಿ, ಗ್ರಾಪಂ ಸದಸ್ಯೆ ಪ್ರೇಮಾ ನಂದೀಶಗೌಡ ಪಾಟೀಲ, ಮಲ್ಲನಗೌಡ್ರ ಪಾಟೀಲ, ಪ್ರಕಾಶಗೌಡ್ರ ಪಾಟೀಲ, ಮಾಳಪ್ಪ ಗಡ್ಡೆ, ಮಂಜಪ್ಪ ಹಿರವೆ, ಅಜಿತ ಹಿರೇಕುರಬರ, ಮಂಜಪ್ಪ ಸೂರಣ್ಣವರ ಇದ್ದರು. ನಂದೀಶಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.