ಸಾರಾಂಶ
ಕನಕಗಿರಿ:
ಶಿಕ್ಷಕ ವೃತ್ತಿಯಲ್ಲಿರುವವರು ಪ್ರಾಮಾಣಿಕ ಸೇವೆ ಮಾಡಿದಾಗ ಸಮಾಜ ಅಭಿವೃದ್ಧಿ ಹೊಂದಲಿದೆ ಎಂದು ನಿವೃತ್ತ ಪ್ರಾಚಾರ್ಯ ಜಿ. ಅನಿಲಕುಮಾರ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಅಂದುಕೊಂಡಂತೆ ಶಿಕ್ಷಕರು ಇರಲು ಸಾಧ್ಯವಿಲ್ಲ. ಆದರೆ, ಬೆಳಗ್ಗೆ ಆರಂಭಗೊಂಡ ತರಗತಿಗಳು ಮಧ್ಯಾಹ್ನದವರೆಗೆ ನಡೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಬೋಧಿಸಬೇಕು. ನಾವು ಮಕ್ಕಳಿಗೆ ಏನನ್ನೂ ಕೊಡಲು ಸಾಧ್ಯವೋ ಎಲ್ಲ ಸಂಪನ್ಮೂಲ ನೀಡಿದರೆ ಆ ಸಂಸ್ಥೆಯ ಭವಿಷ್ಯ ಉಜ್ವಲವಾಗಲಿದೆ. ಶಿಸ್ತು, ಸಮಯ ಪಾಲನೆ, ಸಂಯಮದ ಜತೆಗೆ ಪ್ರಾಮಾಣಿಕತೆ ಮೈಗೂಡಿಸಿಕೊಂಡ ಶಿಕ್ಷಕರು ಸಮಾಜದಲ್ಲಿ ಅಚ್ಚಳಿಯದೇ ಉಳಿಯುತ್ತಾರೆ ಎಂದರು.ಕನಕಗಿರಿಯಲ್ಲಿ ಹತ್ತಾರು ವರ್ಷಗಳ ಕಾಲ ಸೇವೆಸಲ್ಲಿಸಿದ್ದರಿಂದಲೇ ನಾನು ಜಿಲ್ಲೆ, ರಾಜ್ಯ ಮಟ್ಟದ ವರೆಗೂ ಬೆಳೆದಿದ್ದೇನೆ. ನನ್ನ ಸಾವಿರಾರು ವಿದ್ಯಾರ್ಥಿಗಳು ಶಾಲೆಯನ್ನೂ ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ. ಐಎಎಸ್, ಕೆಪಿಎಸ್ ಸೇರಿ ಅನೇಕ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಹಳೇ ವಿದ್ಯಾರ್ಥಿಗಳು ಕಾಲೇಜಿಗೆ ದೇಣಿಗೆ, ದಾನ ನೀಡುವ ಮೂಲಕ ಕಾಲೇಜಿನ ಋಣ ತೀರಿಸುವ ಹಾಗೂ ಬಡ ಮಕ್ಕಳಿಗೆ ಆಸರೆಯಾಗುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಅಮರೇಶ ದೇವರಾಳ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ಶರಣೇಗೌಡ, ಹಳೇ ವಿದ್ಯಾರ್ಥಿಗಳಾದ ಸಣ್ಣ ಕನಕಪ್ಪ, ರವಿ ಭಜಂತ್ರಿ ಹಾಗೂ ಲಕ್ಷ್ಮೀಕಾಂತ ಬೊಂದಾಡೆ ಮಾತನಾಡಿದರು.ಉಪನ್ಯಾಸಕರಾದ ಕಾಳಪ್ಪ ಪತ್ತಾರ, ಪಂಪಾರೆಡ್ಡಿ ಗಚ್ಚಿನಮನಿ, ರವಿ ಪಾಟೀಲ್, ಪ್ರಮುಖರಾದ ಮಹಾಂತೇಶ ಸಜ್ಜನ, ಮಲ್ಲಿಕಾರ್ಜುನಗೌಡ, ಹನುಮೇಶ ಯಲಬುರ್ಗಿ, ಟಿ.ಜೆ. ರಾಮಚಂದ್ರ, ಶಿವಪುತ್ರಪ್ಪ ಗಳಪೂಜೆ, ಈಶ್ವರ ಹಲಗಿ, ರೇಖಾ ಚಕ್ರಸಾಲಿ, ದೈಹಿಕ ಶಿಕ್ಷಕ ಶಾಮೀದಸಾಬ್ ಲಯನ್ದಾರ, ಉದ್ಯಮಿ ಶ್ರೀಕಾಂತ ಗೊಂದಳೆ ಸೇರಿದಂತೆ ಕಾಲೇಜಿನ ಹಳೇ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಇದ್ದರು.