ಬದುಕನ್ನೇ ಕಸಿದಿರುವ ತಂತ್ರಜ್ಞಾನ ಬೆಳವಣಿಗೆ: ಪ್ರೊ.ಎಂ.ಕೃಷ್ಣೇಗೌಡ

| Published : Feb 14 2025, 12:35 AM IST

ಸಾರಾಂಶ

ತಂತ್ರಜ್ಞಾನದ ಬೆಳವಣಿಗೆಯು ಅನೇಕರ ಬದುಕನ್ನೇ ಕಸಿಯುತ್ತಿದ್ದು, ಶಿಕ್ಷಣ, ಮಾಧ್ಯಮವೂ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳೂ ಆತಂಕ ಎದುರಿಸುತ್ತಿವೆ ಎಂದು ಮೈಸೂರಿನ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ಕೆ.ಎಂ.ಸುರೇಶ್‌ರಿಗೆ ಜಿಲ್ಲಾ ಸಮಾಚಾರ ಬಳಗದ ವಾರ್ಷಿಕ ಪ್ರಶಸ್ತಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ತಂತ್ರಜ್ಞಾನದ ಬೆಳವಣಿಗೆಯು ಅನೇಕರ ಬದುಕನ್ನೇ ಕಸಿಯುತ್ತಿದ್ದು, ಶಿಕ್ಷಣ, ಮಾಧ್ಯಮವೂ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳೂ ಆತಂಕ ಎದುರಿಸುತ್ತಿವೆ ಎಂದು ಮೈಸೂರಿನ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾ ಸಮಾಚಾರ ದಿನಪತ್ರಿಕೆ ಬಳಗದಿಂದ 2024ರ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ್‌ರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸಾಕಷ್ಟು ಸವಾಲು, ಸಂಕಷ್ಟಗಳ ಮಧ್ಯೆಯೂ ಮುದ್ರಣ ಮಾಧ್ಯಮವು ಜನರ ವಿಶ್ವಾಸ ಉಳಿಸಿಕೊಂಡಿದೆ ಎಂದರು.

ಇಂದಿನ ತಂತ್ರಜ್ಞಾನ ಬೆಳವಣಿಗೆಯ ಕಾಲಘಟ್ಟದಲ್ಲಿ ಪತ್ರಿಕೋದ್ಯಮವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಸಭೆ, ಸಮಾರಂಭ, ಕಾರ್ಯಕ್ರಮ ನಡೆಯುತ್ತಿರುವಾಗಲೇ ಯಾರು, ಏನು ಮಾತನಾಡಿದರು, ಎಲ್ಲಿ ಮಾತನಾಡಿದರೆಂಬ ಸಂಗತಿ ಓದುಗರ ಕೈ ತಲುಪುತ್ತಿದೆ. ಹಾಗಾಗಿ ನಾಳೆ ಏನೆಂಬ ಸವಾಲನ್ನು ಪ್ರತಿ ದಿನವೂ ಮಾಧ್ಯಮ ಕ್ಷೇತ್ರ ಅದರಲ್ಲೂ ಮುದ್ರಣ ಮಾಧ್ಯಮ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮೊಬೈಲ್ ಅತಿ ದೊಡ್ಡದಾದ ಆವಿಷ್ಕಾರವಾಗಿದೆ. ಕೈಯಲ್ಲಿ ಜಗತ್ತಿನ ಎಲ್ಲಾ ಮಾಹಿತಿಯೂ ಸಿಗುವಂತಾಗಿದೆ. ತಂತ್ರಜ್ಞಾನವೆಂಬುದು ಅನುಕೂಲ ಕಲ್ಪಿಸುವ ಜೊತೆಗೆ ಹಲವರ ಬದುಕು, ಅನ್ನವನ್ನೇ ಕಸಿಯುತ್ತಿರುವುದು ಸಹ ವಾಸ್ತವ ಸಂಗತಿ. ಸುದ್ದಿಗಳ ಪೈಪೋಟಿ ಎದುರಿಸುತ್ತಿರುವ ಕಾಲದಲ್ಲಿ ಮಾಧ್ಯಮವು ಮತ್ತೊಂದು ರೀತಿಯ ಸವಾಲನ್ನು ನಿತ್ಯವೂ ಎದುರಿಸುತ್ತಿದೆ. ಈಗ ಜನರು ಪತ್ರಿಕೆ ಕೊಂಡು ಓದುವ ಬದಲು ಆನ್‌ಲೈನ್‌ನಲ್ಲಿ ಪತ್ರಿಕೆ ಓದುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಜಿಲ್ಲಾ ಸಮಾಚಾರ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಇದೇ ವೇಳೆ ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕೆ.ಎಂ.ಸುರೇಶ್ ಅವರಿಗೆ 2024ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಹಿರಿಯ ವಕೀಲ ರಾಮಚಂದ್ರ ಕಲಾಲ್, ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಡಾ.ಜಸ್ಟಿನ್ ಡಿಸೌಜ, ಬಳಗದ ಸಂಸ್ಥಾಪಕ, ಪತ್ರಿಕೆ ಸಂಪಾದಕ ವಿ.ಹನುಮಂತಪ್ಪ, ಶ್ರೀ ಬಸವೇಶ್ವರ ಟ್ರಾನ್ಸಪೋರ್ಟ್ ಮಾಲೀಕ ಮಹಾಂತೇಶ ವಿ.ಒಣರೊಟ್ಟಿ, ಡಾ.ಸಿ.ಕೆ.ಆನಂದ ತೀರ್ಥಾಚಾರ್, ಕೆ.ರಾಘವೇಂದ್ರ ನಾಯರಿ, ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ, ಪತ್ರಕರ್ತರಾದ ಎಚ್.ಭಾರತಿ, ಎಚ್.ವೆಂಕಟೇಶ, ಸಾಹಿತಿ ಟಿ.ಎಸ್.ಶೈಲಜಾ, ವೀಣಾ ಸುರೇಶ, ಸಾಲಿಗ್ರಾಮ ಗಣೇಶ ಶೆಣೈ, ರುದ್ರಾಕ್ಷಿ ಬಾಯಿ ಇದ್ದರು.

ಬಸವಾದಿ ಶರಣರಲ್ಲಿ ಗುಪ್ತ ಭಕ್ತಿ ಇತ್ತು. ಬೇರೆಯವರಿಗೆ ಗೊತ್ತಾದರೆ ಅಪಮೌಲ್ಯವಾಗುತ್ತದೆಂದು ಬಹಿರಂಗಪಡಿಸುತ್ತಿರಲಿಲ್ಲ. ಭಕ್ತಿ ಈ ರೀತಿ ಇರಬೇಕು. ಜೀವನದಲ್ಲಿ ಕೆಲವೊಮ್ಮೆ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಬಾರದು.

ಪ್ರೊ.ಎಂ.ಕೃಷ್ಣೇಗೌಡ. ಮೈಸೂರಿನ ಹಿರಿಯ ವಾಗ್ಮಿ.