ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶಕ್ಕೋಸ್ಕರ ರಾಜಕಾರಣ ಮಾಡುತ್ತಿರುವ ಅದ್ವಿತೀಯ ನಾಯಕ. ಅವರ ಗುರಿ, ಚಿಂತನೆ, ಅಭಿವೃದ್ಧಿ ದೃಷ್ಟಿಕೋನ, ವಿಚಾರ, ಆದರ್ಶಗಳು ಅವರನ್ನು ವಿಶ್ವನಾಯಕರನ್ನಾಗಿ ಮಾಡಿವೆ. ಮೋದಿಯವರ ಬದ್ಧತೆಯ ಆಡಳಿತದಲ್ಲಿ ಭಾರತ ಇಂದು ಆರ್ಥಿಕವಾಗಿ ಜಗತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.ಒಂದೂ ಕಪ್ಪು ಚುಕ್ಕಿ ಇಲ್ಲದ ನಿಷ್ಕಳಂಕಿತ ವ್ಯಕ್ತಿತ್ವದ ನಾಯಕಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದರು. ಪ್ರಧಾನಿ ಮೋದಿಯವರ 11 ವರ್ಷದ ಆಡಳಿತಾವಧಿಯ ಸಾಧನೆ ಕುರಿತು ಗುರುವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಸರ್ಕಾರವು ದಶಕಗಳ ಜಡತ್ವ ಮುರಿದು ದಿಟ್ಟ ನಿರ್ಧಾರಗಳ ಮೂಲಕ ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕಿದೆ. ದೇಶದ ಒಟ್ಟಾರೆ ಆರ್ಥಿಕ ಪ್ರಗತಿಗೆ ವ್ಯಾಪಕವಾಗಿ ಕೊಡುಗೆ ನೀಡಿದೆ. ವಿದೇಶಿ ನೇರ ಹೂಡಿಕೆ ಹರಿವನ್ನು ಹೆಚ್ಚಿಸುವುದು, ಉದ್ಯೋಗ ಸೃಷ್ಟಿ, ಹಣದುಬ್ಬರ ನಿಯಂತ್ರಣ, ಬಡತನ ನಿರ್ಮೂಲನ ಹಾಗೂ ತೆರಿಗೆ ಸಂಗ್ರಹಣೆಯ ಸುಧಾರಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ ಎಂದರು. ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಲಾಗಿದೆ. 4.48 ಲಕ್ಷಕ್ಕೂ ಹೆಚ್ಚು ಮನೆ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ 1.5 ಕೋಟಿಗೂ ಹೆಚ್ಚು ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ರಕ್ಷಣೆ ನೀಡಿರುವ ಜೊತೆಗೆ ಇದೀಗ 70 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೂ 5 ಲಕ್ಷ ರು.ಗಳ ಉಚಿತ ಚಿಕಿತ್ಸೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ 1.86 ಕೋಟಿ ಜನ್ಧನ್ ಖಾತೆಗಳನ್ನು ತೆರೆಯಲಾಗಿದ್ದು ಇದರಲ್ಲಿ 6 ಸಾವಿರ ಕೋಟಿಗೂ ಹೆಚ್ಚು ಹಣ ಜಮೆಯಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ರಾಜ್ಯದ ಜನರಿಗೆ 75 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು ಆಹಾರ ಧಾನ್ಯವನ್ನುಉಚಿತವಾಗಿ ನೀಡಲಾಗುತ್ತಿದೆ. ಜಲಜೀವನ್ ಮಿಷನ್ನಲ್ಲಿ 74 ಲಕ್ಷಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ. ಇದು 2019ರಲ್ಲಿ ಕೇವಲ ಶೇಕಡ 24 ರಷ್ಟು ಇದ್ದ ಪ್ರಮಾಣವನ್ನು ಶೇಕಡ 74 ಕ್ಕೆ ಏರಿಸಿದೆ.ಉಜ್ವಲ ಯೋಜನೆಯಲ್ಲಿ 37.5 ಲಕ್ಷ ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ ಉಚಿತ ಎಲ್ಪಿಜಿ ಸಂಪರ್ಕ ನೀಡಲಾಗಿದೆ.ರಾಜ್ಯದ ಮಹಿಳೆಯರಿಗೆ ನೀಡಲಾದ 4.14 ಕೋಟಿ ಮುದ್ರಾ ಸಾಲಗಳಲ್ಲಿ ಶೇಕಡ 69ರಷ್ಟು ಮಹಿಳೆಯರೇ ಪಡೆದಿದ್ದಾರೆ.ಸುಕನ್ಯಾ ಸಮೃದ್ಧಿ ಯೋಜನೆಯಡಿಕರ್ನಾಟಕವೊಂದರಲ್ಲೇ 27.6 ಲಕ್ಷ ಖಾತೆಗಳನ್ನು ತೆರೆಯಲಾಗಿದೆ.ನವೋದ್ಯಮಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯದಲ್ಲಿ 12,353 ಮಾನ್ಯತೆ ಪಡೆದ ಸ್ಟಾರ್ಟ್ಅಪ್ಗಳು ಕಾರ್ಯ ನಿರ್ವಹಿಸುತ್ತಿವೆ. ನಮ್ಮರಾಜ್ಯಕ್ಕೆ 1.845 ಕೋಟಿ ರು.ಗಳ ಬೃಹತ್ ಮೊತ್ತದ ಸಾಲ ಬಿಡುಗಡೆಯಾಗಿದ್ದು, ಇದರಿಂದ 7,940 ಫಲಾನುಭವಿಗಳು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ರವಿಕುಮಾರ್ ಹೇಳಿದರು. ಶಾಸಕ ಬಿ.ಸುರೇಶ್ಗೌಡರು ಮಾತನಾಡಿ, ಪ್ರಧಾನಿ ಮೋದಿಯವರ 11 ವರ್ಷದ ಆಡಳಿತಕ್ಕೆ ಶೂನ್ಯ ಅಂಕ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿ, 2014ರ ಪರಿಸ್ಥಿತಿ ನಂತರ ಮೋದಿ ಸರ್ಕಾರದ 2025ರವರೆಗಿನ ಸುಧಾರಣೆಯ ಸಾಧನೆಗಳನ್ನು ಹೋಲಿಕೆ ಮಾಡಿ ವಿವರಿಸಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮೋದಿ ಸರ್ಕಾರ ತುಮಕೂರು ಜಿಲ್ಲೆಗೆ ಕೊಟ್ಟ ಕೊಡುಗೆಗಳನ್ನು ಸ್ಮರಿಸಿದರು. ಜಿಲ್ಲೆಯ ಬಹುದೊಡ್ಡದಾದ ಜಲಜೀವನ್ ಮಿಷನ್ ಮೂಲಕ ಮನೆಮನೆಗೆ ಕುಡಿಯುವ ನೀರು ನೀಡುವ ಯೋಜನೆ ನೀಡಿದೆ. ಮೋದಿ ಸರ್ಕಾರ ತುಮಕೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ನೀಡಿ ನಗರದ ಅಭಿವೃದ್ಧಿಗೆ ನೆರವಾಗಿದೆ. ಅಮೃತ್ ಯೋಜನೆಯಡಿ ಕುಡಿಯುವ ನೀರು, ಒಳಚರಂಡಿಗೆ 200 ಕೋಟಿ ರೂ.ಗಳ ಅನುದಾನ ನೀಡಿದೆ. ಎಚ್ಎಎಲ್ಗೆ ಮೋದಿಯವರೇ ಶಂಸ್ಥಾಪನೆ ನೆರವೇರಿಸಿ, ಅವರೇ ಉದ್ಘಾಟನೆ ಮಾಡಿದ್ದಾರೆ. ಹೀಗೆ ಹತ್ತುಹಲವು ಯೋಜನೆಗಳನ್ನು ಮೋದಿ ಸರ್ಕಾರ ಜಿಲ್ಲೆಗೆ ನೀಡಿದೆ ಎಂದು ಹೇಳಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಮುಖಂಡ ದಿಲೀಪ್ಕುಮಾರ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಪ್ರಧಾನ ಕಾರ್ಯದರ್ಶಿ ಸಂದೀಪ್ಗೌಡ, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎ.ಆಂಜನಪ್ಪ, ಕಾರ್ಯದರ್ಶಿ ಸಾಗರನಹಳ್ಳಿ ವಿಜಯಕುಮಾರ್, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಮಾಧ್ಯಮ ಪ್ರಮುಖ್ಜೆ.ಜಗದೀಶ್ ಮೊದಲಾದವರು ಭಾಗವಹಿಸಿದ್ದರು.