ಜನ ಪ್ರತಿನಿಧಿಗಳ ಸಾಕ್ಷರತೆಯಿಂದ ಅಭಿವೃದ್ಧಿ

| Published : Aug 30 2024, 01:06 AM IST

ಸಾರಾಂಶ

ಬೋಧಕರು ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರು ತರಬೇತಿ ಕಾರ್ಯಾಗಾರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು

ರೋಣ: ಚುನಾಯಿತ ಗ್ರಾಪಂ ಅನಕ್ಷರಸ್ಥ ಪ್ರತಿನಿಧಿಗಳನ್ನು ಓದು, ಬರಹ ಮತ್ತು ಲೆಕ್ಕಾಚಾರಗಳಲ್ಲಿ ಕ್ರಿಯಾತ್ಮಕ ಸಾಕ್ಷರಸ್ಥರನ್ನಾಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಸಾಕ್ಷರ ಸನ್ಮಾನ ತರಬೇತಿ ಕಾರ್ಯಾಗಾರದ ಸದುಪಯೋಗ ಚುನಾಯಿತ ಪ್ರತಿನಿಧಿಗಳು ಪಡೆದುಕೊಳ್ಳಬೇಕು ಎಂದು ತಾಪಂ ಸಹಾಯಕ ನಿರ್ದೇಶಕ (ನರೇಗಾ) ಚಂದ್ರಶೇಖರ.ಬಿ. ಕಂದಕೂರ ಹೇಳಿದರು.

ಅವರು ಇಲ್ಲಿಯ ತಾಪಂ ಸಾಮರ್ಥ್ಯ ಸೌಧದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ವತಿಯಿಂದ ಪಂಚಾಯಿತಿ ಚುನಾಯಿತ ಅನಕ್ಷರಸ್ಥ ಪ್ರತಿನಿಧಿಗಳಿಗೆ ಸಾಕ್ಷರತಾ ಕೌಶಲ್ಯ ನೀಡುವ ಸಾಕ್ಷರ ಸನ್ಮಾನ ತರಬೇತಿದಾರರಿಗೆ ಹಮ್ಮಿಕೊಂಡಿದ್ದ 3 ದಿನಗಳ ಸಾಕ್ಷರ ಸನ್ಮಾನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬೋಧಕರು ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರು ತರಬೇತಿ ಕಾರ್ಯಾಗಾರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು, ಚುನಾಯಿತ ಪ್ರತಿನಿಧಿಗಳು ಚೆನ್ನಾಗಿ ಶಿಕ್ಷಣ ಕಲಿತು ತಮ್ಮ ಗ್ರಾಮದ ಸಭೆಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿ ತಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿರಿ ಅಂದಾಗ ಮಾತ್ರ ಈ ಯೋಜನೆ ಸ್ವಾರ್ಥಕತೆ ಆಗುತ್ತದೆ ಎಂದರು.

ತಾಪಂ ವ್ಯವಸ್ಥಾಪಕ ದೇವರಾಜ ಸಜ್ಜನಶೆಟ್ಟರ ಮಾತನಾಡಿ, ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ಸಾಕ್ಷರತೆ ಮುಖ್ಯ.ಮೌಢ್ಯ ರಹಿತ ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರನ್ನೂ ಅಕ್ಷರಸ್ಥರನ್ನಾಗಿಸುವಲ್ಲಿ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಅದಕ್ಕೆ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಸಹಕರಿಸಬೇಕು. ಮಹಿಳೆಯರು ಸಾಕ್ಷರರಾದರೆ ತನ್ನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬಹುದು ಎಂದರು.

ಈ ವೇಳೆ ವಿಷಯ ನಿರ್ವಾಹಕ ಎಚ್.ಕೆ. ದೇಸಾಯಿ, ತಜ್ಞ ಸಂಪನ್ಮೂಲ ವ್ಯಕ್ತಿ ಬಿ.ಆರ್. ಪಟ್ಟಣಶೆಟ್ಟರ್‌, ಆರ್.ಬಿ. ಸೋಮನಕಟ್ಟಿ, ಎ.ಎನ್.ಎಸ್.ಎಸ್.ಐ ಆರ್.ಡಿ ಸಂಸ್ಥೆಯ ತಾಲೂಕು ಸಂಯೋಜಕ ಶರಣಪ್ಪ ಕೊತಬಾಳ ಸೇರಿದಂತೆ ಇತರರು ಇದ್ದರು.