ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಮೇಲುಕೋಟೆ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಜನರಿಗೆ ಈಗ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅನುಪಸ್ಥಿತಿ ಎಷ್ಟಿದೆ ಎಂಬುದು ಅರಿವಾಗುತ್ತಿದೆ ಎಂದು ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಹೇಳಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಶಾಸಕರಾಗಿದ್ದಾಗ ಕ್ಷೇತ್ರವು ಸಾಕಷ್ಟು ಮಟ್ಟದಲ್ಲಿ ಅಭಿವೃದ್ಧಿ ಕಂಡಿತ್ತು. ಆದರೆ, ಈಗಿನ ಶಾಸಕರು ಸರ್ಕಾರದಿಂದ ಹಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರವು ಸಹ ಅಭಿವೃದ್ಧಿಗೆ ಸೂಕ್ತ ಅನುದಾನದ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆ ನಡೆದಾಗ ಇದ್ದಂತಹ ಒಲವು ಬದಲಾಗಿದೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಅನುಪಸ್ಥಿತಿ ಕ್ಷೇತ್ರದ ಜನತೆಗೆ ಕಾಡುತ್ತಿದೆ. ಎಲ್ಲಾ ಸ್ಥಳೀಯ ಸಂಸ್ಥೆ ಹಾಗೂ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಈ ಚುನಾವಣೆಗಳ ಫಲಿತಾಂಶ ಮುಂದಿನ ಎಲ್ಲಾ ಚುನಾವಣೆಗಳ ಫಲಿತಾಂಶದ ದಿಕ್ಸೂಚಿಯಾಗಲಿದೆ ಎಂದರು.ಶಾಸಕರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದಾಣಿಕೆ ಮಾಡಿಕೊಳ್ಳಲು ಆಸಕ್ತಿ ತೋರದ ಪರಿಣಾಮ ನ್ಯಾಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ ಚುನಾವಣೆಗೆ ನಡೆಬೇಕಾಯಿತು ಎಂದರು.
ನ್ಯಾಮನಹಳ್ಳಿ ಸೊಸೈಟಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಬೇಡ ಎಲ್ಲಾ ಪಕ್ಷಗಳು ಒಗ್ಗಟ್ಟಿನಿಂದ ಮಾತುಕತೆ ಮೂಲಕ ನಿರ್ದೇಶಕರನ್ನು ಅವಿರೋಧ ಆಯ್ಕೆ ಮಾಡಿಕೊಳ್ಳೋಣ ಎಂಬುದಾಗಿ ನಾವು ಸಾಕಷ್ಟು ಚರ್ಚಿಸಿದೆವು. ಆದರೆ, ಪಕ್ಷದ ಕೆಲವು ಮುಖಂಡರು ಅವಿರೋಧ ಆಯ್ಕೆಗೆ ಸಹಮತ ತೋರಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕೆಲವು ಹಿಂಬಾಲಕರ ಮಾತು ಕಟ್ಟಿಕೊಂಡು ಅವಿರೋಧ ಆಯ್ಕೆಗೆ ಒಪ್ಪಿಗೆ ನೀಡಲಿಲ್ಲ. ಅದರ ಪರಿಣಾಮ ಚುನಾವಣೆ ನಡೆದು ಸಂಘ ಹಾಗೂ ಜನರ ಲಕ್ಷಾಂತ ರು. ಹಣವು ವ್ಯರ್ಥವಾಗುತ್ತಿದೆ ಎಂದರು.ಚುನಾವಣೆಯಲ್ಲಿ ಮತದಾರರು ಜೆಡಿಎಸ್-ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ನೀಡಿ ಸ್ಪಷ್ಟ ಬಹುಮತದೊಂದಿಗೆ ಆಯ್ಕೆ ಮಾಡಿದರು. ಹಾಗಾಗಿ ಶಾಸಕರು ಸಹಕಾರ ಸಂಘಗಳ ಚುನಾವಣೆ ನಡೆಯುವಾಗ ಕೇವಲ ಕೆಲವು ಹಿಂಬಾಲಕರ ಮಾತು ಕೇಳುವುದನ್ನು ಬಿಟ್ಟು ತಮ್ಮ ಸ್ವಂತ ಬುದ್ಧಿಯಿಂದ ಆಲೋಚನೆ ಮಾಡಬೇಕು. ಮುಂದಿನ ದಿನಗಳಲ್ಲಾದರು ಶಾಸಕರು ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಸಹಮತ ನೀಡಬೇಕು ಎಂದು ಸಲಹ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಮನಹಳ್ಳಿ ಸೊಸೈಟಿ ನಿರ್ದೇಶಕರಾದ ಎ.ಎನ್.ಮಂಜುನಾಥ್, ಎಸ್ಎನ್ಟಿ ಸೋಮಶೇಖರ್, ಮಾಜಿ ಅಧ್ಯಕ್ಷ ಜೆ.ಪಿ.ಶಿವಕುಮಾರ್, ಜೆಡಿಎಸ್ ಮುಖಂಡ ಆನಂದ್ ಸೇರಿದಂತೆ ಹಲವರು ಇದ್ದರು.