ಪ್ರತಿಯೊಬ್ಬರೂ ಭಕ್ತಿ ಶ್ರದ್ಧೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಆಂತರಿಕ ಬದಲಾವಣೆಯನ್ನು ಕಾಣಬೇಕಾಗಿದೆ ಎಂದು ವಾಸವಿ ಪೀಠದ ಆರ್ಯವೈಶ್ಯ ಪೀಠಾಧಿಪತಿ ಶ್ರೀ ಸತ್ಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಪ್ರತಿಯೊಬ್ಬರೂ ಭಕ್ತಿ ಶ್ರದ್ಧೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಆಂತರಿಕ ಬದಲಾವಣೆಯನ್ನು ಕಾಣಬೇಕಾಗಿದೆ ಎಂದು ವಾಸವಿ ಪೀಠದ ಆರ್ಯವೈಶ್ಯ ಪೀಠಾಧಿಪತಿ ಶ್ರೀ ಸತ್ಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಅವರು ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಳಶೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಪ್ರತಿನಿತ್ಯ ಆರಾಧನೆ ಮೂಲಕ ಭಕ್ತಿ ಬೆಳವಣಿಗೆ ಸಾಧನೆ ಸಾಧ್ಯ ಎಂದ ಶ್ರೀಗಳು ಮನಸ್ಸಿನ ಒಂದು ಭಾಗ ಸದಾ ಭಗವಂತನ ಮೇಲಿರಬೇಕು ಆ ಮೂಲಕ ನೆಮ್ಮದಿ ಆನಂದ ಲಭಿಸಲು ಸಾಧ್ಯ ಎಂದರು. ಸರ್ವಸ್ವ ನೀಡಿದ ಭಗವಂತನಿಗೆ ನಾವು ಪರಿಪೂರ್ಣ ಭಕ್ತಿ ಪೂಜೆ ಮೂಲಕ ಆಂತರಿಕ ಬೆಳವಣಿಗೆ ಸಾಧ್ಯ, ಭಕ್ತಿ ಭಾವನೆಗಳು ನಿರಂತರವಾಗಿ ಹೆಚ್ಚಿಸಿಕೊಳ್ಳುವ ಕೆಲಸವಾಗಬೇಕಾಗಿದೆ ಎಂದರು. ಕುಶಾಲನಗರದಲ್ಲಿ ಪುಟ್ಟ ಸಮುದಾಯವಾಗಿರುವ ಆರ್ಯವೈಶ್ಯ ಮಂಡಳಿಯ ಹಾಗೂ ವಾಸವಿ ಯುವಜನ ಸಂಘದ ಕಾರ್ಯವೈಖರಿ, ಚಟುವಟಿಕೆಗಳ ಬಗ್ಗೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಣ್ಣ ಸಮಾಜವನ್ನು ಗಟ್ಟಿಯಾಗಿ ಉಳಿಸುವುದು ಎಲ್ಲರ ಬಾಧ್ಯತೆ ಹಾಗೂ ಜವಾಬ್ದಾರಿಯಾಗಿದೆ ಎಂದು ಹೇಳಿದರು.