ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ (ದ.ಕನ್ನಡ)
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕುರಿತಾಗಿ ಕಾಂಗ್ರೆಸ್ ಮುಖಂಡರೊಬ್ಬರು ನೀಡಿರುವ ಹೇಳಿಕೆಯನ್ನು ಚಿತ್ರಾಪುರ ಮಠದಲ್ಲಿ ಭಾನುವಾರ ನಡೆದ ಕೋಟಿ ಗಾಯತ್ರೀ ಜಪಯಜ್ಞದ ಧರ್ಮಸಭೆಯಲ್ಲಿ ಖಂಡಿಸಲಾಯಿತು. ಜೊತೆಗೆ, ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಕೂಳೂರಿನ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಚಿತ್ರಾಪುರ ಮಠದ ಸಹಕಾರದೊಂದಿಗೆ ಚಿತ್ರಾಪುರದಲ್ಲಿ ಎರಡು ದಿನಗಳ ಕಾಲ ನಡೆದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ ಧರ್ಮಸಭೆ ಭಾನುವಾರ ನಡೆಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಖಂಡನಾ ನಿರ್ಣಯ ಮಂಡಿಸಿದರು. ಈ ವೇಳೆ ಮಾತನಾಡಿ, ಎಲ್ಲ ಸಮುದಾಯದಲ್ಲೂ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವವರ ಆಧ್ಯಯನ ನಡೆಸಿ ಅವರಿಗೆ ಬೇಕಾದ ಸೌಲಭ್ಯ ಒದಗಿಸಬೇಕಿದೆಯೇ ಹೊರತು ಜಾತಿ ಗಣತಿ, ಜನಗಣತಿಯಲ್ಲ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ. ಸನಾತನ ಧರ್ಮದವರನ್ನು ಒಡೆದು ಒಂದಿಷ್ಟು ಮತ ಪಡೆಯಬಹುದು ಎಂಬ ಲೆಕ್ಕಾಚಾರ ಮಾತ್ರ ಇದರ ಹಿಂದೆ ಅಡಗಿದೆ ಎಂದು ಆರೋಪಿಸಿದರು.ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.ಬ್ರಾಹ್ಮಣ ಸಮಾಜ ಒಗ್ಗಟ್ಟಿನಿಂದ ಇರಲು ಜನವರಿಯಲ್ಲಿ ಬೆಂಗಳೂರಿನಲ್ಲಿ 24 ಕೋಟಿ ಗಾಯತ್ರಿ ಜಪಯಜ್ಞ ಮಾಡಲು ನಿರ್ಧರಿಸಲಾಗಿದೆ. ದ.ಕ. ಸಮಿತಿಯಿಂದ ಯಶಸ್ವಿಯಾದ ಈ ಕಾರ್ಯಕ್ರಮ ಮುಂದೆ ಪ್ರೇರಕವಾಗಿ ಕೆಲಸ ಮಾಡಲು ಸಹಾಯಕವಾಗಲಿದೆ ಎಂದು ತಿಳಿಸಿದರು. ಕೋಟಿ ಗಾಯತ್ರಿ ಜಪಯಜ್ಞ ಸಂಪನ್ನ:
ಜಪಯಜ್ಞದ ಸಂಚಾಲಕ ಕಟೀಲು ಕ್ಷೇತ್ರದ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅವರ ಮುಂದಾಳತ್ವದಲ್ಲಿ ಕುಡುಪು ಕೃಷ್ಣರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ಜಪಯಜ್ಞವು ಭಾನುವಾರ ಬೆಳಗ್ಗೆ 6.30ಕ್ಕೆ ಆರಂಭಗೊಂಡು 10.30ಕ್ಕೆ ಮಹಾಪೂಜೆಯೊಂದಿಗೆ ಸಂಪನ್ನಗೊಂಡಿತು.ಉಡುಪಿ, ದ.ಕ. ಜಿಲ್ಲೆಯಿಂದ ಸಾವಿರಾರು ಮಂದಿ ವಿವಿಧ ಉಪ ಪಂಗಡಗಳಿಗೆ ಸೇರಿದ ಬ್ರಾಹ್ಮಣ ಸಮುದಾಯವು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿಯ ಒಂದೇ ಸೂರಿನಡಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು. ಆಗಮಿಸಿದ ಸರ್ವರಿಗೂ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಪ್ರಸಾದ ವಿತರಿಸಿ ಆಶೀರ್ವದಿಸಿದರು.ರಾಜಕಾರಣಿಗಳಿಗೆ ಮಾತ್ರ ಮಾತಾಡುವ ಹಕ್ಕಿದೆಯೇ?: ಪೇಜಾವರ ಶ್ರೀ ಲೋಕದಲ್ಲಿ ನಡೆಯುವ ಅನಿಷ್ಟಗಳಿಗೆ ಬ್ರಾಹ್ಮಣ ಸಮಾಜವೇ ಕಾರಣ ಎಂದು ದೂಷಣೆ ಮಾಡುವ ಪ್ರವೃತ್ತಿ ಇತ್ತೀಚೆಗೆ ಬೆಳೆದು ಬರುತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ವಿಷಾದಿಸಿದ್ದಾರೆ. ಜೊತೆಗೆ, ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕು ಇರುವುದು ರಾಜಕಾರಣಿಗಳಿಗೆ ಮಾತ್ರವಾ?. ಮಠಾಧೀಶರಿಗೆ ಮಾತಾಡುವ ಹಕ್ಕಿಲ್ಲವಾ? ಎಂದು ಪ್ರಶ್ನಿಸಿದ್ದಾರೆ.ಚಿತ್ರಾಪುರದಲ್ಲಿ ಭಾನುವಾರ ನಡೆದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಕುರಿತಾಗಿ ನೀಡಿದ್ದ ಹೇಳಿಕೆಯನ್ನು ಪ್ರಸ್ತಾವಿಸಿದ ಶ್ರೀಗಳು, ಲೋಕದಲ್ಲಿ ನಡೆಯುವ ಅನಿಷ್ಟಗಳಿಗೆ ಬ್ರಾಹ್ಮಣ ಸಮಾಜ ಕಾರಣ ಎಂದು ದೂಷಣೆ ಮಾಡುವ ಪ್ರವೃತ್ತಿ ಬೆಳೆದು ಬರುತ್ತಿದೆ. ಪ್ರತಿಯೊಂದಕ್ಕೂ ಜಾತಿಯನ್ನು ಮುಂದಿಟ್ಟು ಜಾತಿ ಲೆಕ್ಕಾಚಾರ ಮಾಡಲು ಮುಂದಾಗಿದ್ದಾರೆ. ಇದರ ಬಗ್ಗೆ ಪ್ರಜಾಪ್ರಭುತ್ವದಡಿ ಪ್ರಶ್ನಿಸಿದರೆ ನಿಂದಿಸಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕು ಇರುವುದು ರಾಜಕಾರಣಿಗಳಿಗೆ ಮಾತ್ರವಾ?. ಸಾಮಾನ್ಯ ವ್ಯಕ್ತಿಗೆ ಕೂಡ ತನ್ನ ಅಭಿಪ್ರಾಯ ಹೇಳುವ, ಪ್ರಶ್ನಿಸುವ ಹಕ್ಕು ಇದೆ ಎಂದರು. ಗಾಯತ್ರಿ ಜಪ ಯಜ್ಞದ ಮೂಲಕ ರಾಜಕಾರಣಿಗಳಿಗೆ ಸದ್ಬುದ್ಧಿಯನ್ನು ನೀಡಲಿ ಎಂದು ಆಶಿಸಿದರು.