ಸಾರಾಂಶ
ಚನ್ನಮ್ಮನ ಕಿತ್ತೂರು: ಧಾರವಾಡ ಗ್ರಾಮಾಂತರ ಕ್ಷೇತ್ರದಲ್ಲಿ ನಾನಿಲ್ಲದಿದ್ದರೂ ನನ್ನ ಪತ್ನಿ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತಿದ್ದಾಳೆ. ಕ್ಷೇತ್ರದಲ್ಲಿ ಸಮಸ್ಯೆಗಳ ಮಾಹಿತಿ ಬಂದೊಡನೆ ಸ್ಥಳಕ್ಕೆ ತೆರಳಿ ಸರಿಪಡಿಸುವ ಕೆಲಸ ಮಾಡುತ್ತಾಳೆ. ಮಹಿಳೆಯ ಮೇಲೆ ಧಾರವಾಡದ ಬಿಜೆಪಿ ನಾಯಕರು ಸುಖಾಸುಮ್ಮನೆ ಆರೋಪಿಸುವುದು ಸರಿಯಲ್ಲ. ಆರೋಪಿಸುವ ಈ ಬಿಜೆಪಿಗರು ನನ್ನ ಹೆಂಡತಿಯ ಚಪ್ಪಲಿಗೂ ಸಮವಿಲ್ಲ ಎಂದು ಧಾರವಾಡ ಗ್ರಾಮಾಂತರ ಶಾಸಕ ವಿನಯ ಕುಲಕರ್ಣಿ ಕಿಡಿಕಾರಿದರು.
ಕಿತ್ತೂರಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂಬ ಬಿಜೆಪಿ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿ, ನನ್ನ ಕ್ಷೇತ್ರಕ್ಕೆ ನನಗೆ ಬರದಂತೆ ಹುನ್ನಾರ ಮಾಡಿದ್ದು ಇದೇ ಬಿಜೆಪಿಗರು. ಈಗ ನಾನು ಕ್ಷೇತ್ರದಲ್ಲಿ ಇಲ್ಲ, ಹೀಗಾಗಿ ಜನರ ಕಷ್ಟ-ನಷ್ಟಗಳನ್ನು ನನ್ನ ಪತ್ನಿ ಶಿವಲೀಲಾ ನಿಭಾಯಿಸುತ್ತಿದ್ದಾರೆ. ಕ್ಷೇತ್ರದಲ್ಲಿ ನಾನಿಲ್ಲದಿದ್ದರೂ ಅಭಿವೃದ್ಧಿ ಕುಂಠಿತಗೊಳ್ಳದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಮಹಿಳೆಯ ಮೇಲೆ ಶಿಷ್ಟಾಚಾರ ಉಲ್ಲಂಘನೆಯ ಕುರಿತು ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.ಕೋಳಿಕೆರೆ ವಿಷಯಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಪರ್ಸೆಂಟೆಜ್ ನೀಡಿಲ್ಲ ಎಂಬ ಕಾರಣಕ್ಕೆ ಬಿಜೆಪಿಗರು ಕೆಲಸ ಬಂದ್ ಮಾಡಿಸಿದರು. ಇದನ್ನು ಕ್ಷೇತ್ರದ ಜನರು ಸೂಕ್ಷ್ಮವಾಗಿ ಅವಲೋಕಿಸಿದ್ದರು. ಇಂತಹ ಪ್ರಸಂಗ ಅವರ ಅಧಿಕಾರಾವಧಿಯಲ್ಲಿ ನಡೆದಿತ್ತು ಎಂದು ಮಾತಿನ ಚಾಟಿ ಬೀಸಿದ ಅವರು, ಕ್ಷೇತ್ರದಲ್ಲಿ ನಾನಿಲ್ಲದಿದ್ದರೂ ಎಲ್ಲ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ನನ್ನ ಪತ್ನಿ ಮಾಡುತ್ತಿದ್ದಾರೆ, ಇವರ ಮೇಲೆ ಪ್ರೋಟೋಕಾಲ್ ಉಲ್ಲಂಘನೆ ಎಂದು ಬಾಯಿ ಬಡಿದುಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಹೇಳಿದರು.