ಧಾರವಾಡ ಶಿಕ್ಷಣ ಕಾಶಿಯಾಗಲಿ ಹೆಗ್ಗಡೆ ಅವರದ್ದು ಸಿಂಹಪಾಲು

| Published : Sep 02 2025, 01:00 AM IST

ಸಾರಾಂಶ

ಜೆಎಸ್ಸೆಸ್‌, ಎಸ್.ಡಿ.ಎಂ ಮುಖಾಂತರ ಶಿಕ್ಷಣ ಹಾಗೂ ಆರೋಗ್ಯ, ಎಸ್.ಕೆ.ಡಿ.ಆರ್.ಡಿ.ಪಿಯಿಂದ ಗಾಮಾಭಿವೃದ್ಧಿ, ರುಡ್‌ಸೆಟ್‌ನಿಂದ ಸ್ವ-ಉದ್ಯೋಗ ಕಲ್ಪಿಸಿದ ಅವರು ಧಾರವಾಡ ಒಂದು ಮಾದರಿ ನಗರವನ್ನಾಗಿ ಮಾಡಿದ್ದಾರೆ.

ಧಾರವಾಡ: ಧಾರವಾಡ ಶಿಕ್ಷಣ ಕಾಶಿಯಾಗಿ ಬೆಳೆಯಲು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರದು ಸಿಂಹ ಪಾಲಿದೆ ಎಂದು ಜೆಎಸ್ಸೆಸ್‌ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಜೆ.ಎಸ್.ಎಸ್. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಎರಡು ವಾರಗಳ ಕಾಲ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಗಾರವನ್ನು ಸೋಮವಾರ ಉದ್ಘಾಟಿಸಿದ ಅವರು, ಜೆಎಸ್ಸೆಸ್‌, ಎಸ್.ಡಿ.ಎಂ ಮುಖಾಂತರ ಶಿಕ್ಷಣ ಹಾಗೂ ಆರೋಗ್ಯ, ಎಸ್.ಕೆ.ಡಿ.ಆರ್.ಡಿ.ಪಿಯಿಂದ ಗಾಮಾಭಿವೃದ್ಧಿ, ರುಡ್‌ಸೆಟ್‌ನಿಂದ ಸ್ವ-ಉದ್ಯೋಗ ಕಲ್ಪಿಸಿದ ಅವರು ಧಾರವಾಡ ಒಂದು ಮಾದರಿ ನಗರವನ್ನಾಗಿ ಮಾಡಿದ್ದಾರೆ ಎಂದರು.

ಶಿಕ್ಷಣಕ್ಕೆ ಹಲವಾರು ವ್ಯಾಖ್ಯಾನಗಳಿವೆ. ಆದರೆ, ಶಿಕ್ಷಣವೆಂದರೆ ಮಾನವೀಯ ವಿಕಾಸ. ಸಂಸ್ಕಾರಯುತ ನೈತಿಕ ನೆಲೆಗಟ್ಟಿನ ಮೇಲೆ ದೊರೆಯುವ ಶಿಕ್ಷಣ ವಿದ್ಯಾರ್ಥಿಗಳನ್ನು ಸತ್ಥಪ್ರಜೆಗಳನ್ನಾಗಿ ಮಾಡುತ್ತದೆ. ತಾಳ್ಮೆ, ಸಹನೆ, ಶಿಸ್ತು, ಆತ್ಮವಿಶ್ವಾಸ, ಗೌರವ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಇದ್ದಾಗ ಮಾತ್ರ ಆತ ಕಲಿತ ಶಿಕ್ಷಣಕ್ಕೆ ಮಹತ್ವ ದೊರೆಯುತ್ತದೆ ಎಂದ ಅವರು, ಕೇವಲ ಪದವಿ ಪಡೆಯುವುದು ವಿದ್ಯಾರ್ಥಿಯ ಗುರಿಯಾಗಬಾರದು. ಪದವಿ ಜತೆಗೆ ಕೌಶಲ್ಯ, ಮಾನವೀಯ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಆತನ ಶಿಕ್ಷಣ ಪರಿಪೂರ್ಣ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಇಂಟರ್‌ನ್ಯಾಷನಲ್ ಮೋಟಿವೇಶನಲ್ ಸ್ಪೀಕರ್, ಬ್ರೇನ್‌ತಾನನ ಸಂಸ್ಥಾಪಕ ಪ್ರದೀಪ್ ಆಚಾರ್ಯ ಮಾತನಾಡಿದರು. ಚಿನ್ಮಯಿ ಜಹಾಗಿರದಾರ ಪ್ರಾರ್ಥಿಸಿದರು. ಡಾ. ಸೂರಜ್ ಜೈನ್ ಸ್ವಾಗತಿಸಿದರು. ಶೃತಿ ಶೆಟ್ಟಿ ವಂದಿಸಿದರು. ಮಹಾಂತ ದೇಸಾಯಿ ನಿರೂಪಿಸಿದರು. ಮಹಾವೀರ ಉಪಾದ್ಯೆ, ಆರ್.ವಿ.ಚಿಟಗುಪ್ಪಿ, ಜಿನ್ನಪ್ಪ ಕುಂದಗೋಳ, ವಿವೇಕ ಲಕ್ಷ್ಮೇಶ್ವರ ಇದ್ದರು.