ಸಾರಾಂಶ
ಾರವಾಡ:
ಡಾ. ರಾ.ಯ. ಧಾರವಾಡಕರ ಅವರ ವ್ಯಕ್ತಿತ್ವ ವಿಶಾಲ ಆಲದ ಮರವಿದ್ದಂತೆ. ಅದರಡಿ ಬೆಳೆದ ಅವರ ಶಿಷ್ಯ ಸಂಪತ್ತು ಅಗಾಧವಾದುದು. ರಸಪ್ರಧಾನವಾದ ವಿಶಿಷ್ಟ ಬೋಧನಾ ಶೈಲಿ, ಧೀರೋದಾತ್ತ ಆಡಳಿತ ವೈಖರಿ, ಬಹು ಭಾಷಾ ಪಾಂಡಿತ್ಯ, ಪ್ರಾಮಾಣಿಕತೆ ಮತ್ತು ಮಾನವೀಯ ಹೃದಯ ಶ್ರೀಮಂತಿಕೆ ಅವರ ಬಹುಮುಖ ವ್ಯಕ್ತಿತ್ವದ ಆಯಾಮಗಳಾಗಿದ್ದವು ಎಂದು ಸಾಹಿತಿ ಪ್ರೊ. ಹರ್ಷ ಡಂಬಳ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ರಾ.ಯ. ಧಾರವಾಡಕರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ‘ಡಾ. ರಾ.ಯ. ಧಾರವಾಡಕರ ಅವರ ವ್ಯಕ್ತಿತ್ವ ಮತ್ತು ಬರಹ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, 25ಕ್ಕೂ ಹೆಚ್ಚು ಕನ್ನಡ ಮೌಲಿಕ ಕೃತಿ ರೂಪಿಸಿದ್ದಾರೆ. ಅವರ ‘ಕನ್ನಡ ಭಾಷಾಶಾಸ್ತ್ರ’ ಆಧುನಿಕ ಕನ್ನಡ ಭಾಷಾ ವಿಜ್ಞಾನದ ಬೆಳವಣಿಗೆಗೆ ಭದ್ರಬುನಾದಿ ಹಾಕಿದರೆ ಹೊಸಗನ್ನಡ ಸಾಹಿತ್ಯದ ಉದಯಕಾಲ, ಹೊಸಗನ್ನಡ ಸಾಹಿತ್ಯ ಚರಿತ್ರೆ ಕಟ್ಟಲು ತಳಪಾಯವಾಯಿತೆಂದು ಅವರ ಸಾಹಿತ್ಯಿಕ ಕೊಡುಗೆ ಸ್ಮರಿಸಿದರು.
ಅನೀಲ ಧಾರವಾಡಕರ ತಂದೆಯ ವ್ಯಕ್ತಿತ್ವ ಬಣ್ಣಿಸಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸತೀಶ ತುರಮರಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ವಂದಿಸಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ಶಂಕರ ಹಲಗತ್ತಿ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಸುಜಾತಾ ಧಾರವಾಡಕರ, ಮನೋಜ ಪಾಟೀಲ, ಹ.ವೆಂ. ಕಾಖಂಡಕಿ, ಡಾ. ಮಾರ್ಕಂಡೇಯ ದೊಡಮನಿ, ಮಹಾಂತೇಶ ನರೇಗಲ್, ಎಸ್.ಬಿ. ಗುತ್ತಲ, ಸೀತಾರಾಮ ಶೆಟ್ಟಿ, ಎಸ್.ಕೆ. ಕುಂದರಗಿ, ವೆಂಕಟೇಶ ದೇಸಾಯಿ, ಕೃಷ್ಣ ಕಟ್ಟಿ, ಸಿ.ಜಿ. ಹಿರೇಮಠ, ರಮೇಶ ನಾಡಗೀರ, ಸುರೇಶ ಹೊರಕೇರಿ, ಚಂದ್ರಶೇಖರ ಅಮೀನಗಡ ಇದ್ದರು.