ಸಂವಿಧಾನದಡಿ ಎಲ್ಲರಿಗೂ ನ್ಯಾಯ ದೊರಕಿಸಿದ ಧೀಮಂತ ಅಂಬೇಡ್ಕರ್‌

| Published : Feb 04 2025, 12:31 AM IST

ಸಾರಾಂಶ

ಸ್ವಾತಂತ್ರ್ಯ ಹಾಗೂ ಆನಂತರವೂ ಡಾ. ಅಂಬೇಡ್ಕರ್‌ ಜೀವಿತಾವಧಿಯಲ್ಲಿ ಜಾತಿಯ ಸುಳಿಗೆ ಸಿಲುಕಿ ನಲುಗಿದ್ದರು. ಜಾತೀಯತೆ ವಿರುದ್ಧ ಹೋರಾಡಿ, ತಾವೇ ರಚಿಸಿದ ಸಂವಿಧಾನದ ಮೂಲಕ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲ ವರ್ಗದ ಕಡುಬಡವರಿಗೆ ನ್ಯಾಯ ದೊರಕಿಸಿದ ಧೀಮಂತ ವ್ಯಕ್ತಿತ್ವ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸ್ವಾಭಿಮಾನಿ ಬಳಗದ ಮುಖಂಡ ಹಾಗೂ ಇನ್ ಸೈಟ್‌ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- ಕಾರ್ಯಾಗಾರದಲ್ಲಿ ಇನ್ ಸೈಟ್‌ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಅಭಿಮತ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸ್ವಾತಂತ್ರ್ಯ ಹಾಗೂ ಆನಂತರವೂ ಡಾ. ಅಂಬೇಡ್ಕರ್‌ ಜೀವಿತಾವಧಿಯಲ್ಲಿ ಜಾತಿಯ ಸುಳಿಗೆ ಸಿಲುಕಿ ನಲುಗಿದ್ದರು. ಜಾತೀಯತೆ ವಿರುದ್ಧ ಹೋರಾಡಿ, ತಾವೇ ರಚಿಸಿದ ಸಂವಿಧಾನದ ಮೂಲಕ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲ ವರ್ಗದ ಕಡುಬಡವರಿಗೆ ನ್ಯಾಯ ದೊರಕಿಸಿದ ಧೀಮಂತ ವ್ಯಕ್ತಿತ್ವ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸ್ವಾಭಿಮಾನಿ ಬಳಗದ ಮುಖಂಡ ಹಾಗೂ ಇನ್ ಸೈಟ್‌ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಪದವಿ, ಪಿಯುಸಿ, ಐಟಿಐ ಹಾಗೂ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ದಿಕ್ಸೂಚಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಂವಿಧಾನದಲ್ಲಿ ಜನತೆಗೆ ನೀಡಲಾದ ಮೂಲಭೂತ ಹಕ್ಕುಗಳಲ್ಲಿ ಶಿಕ್ಷಣ ಅತಿ ಮುಖ್ಯ. ಇಂತಹ ಶಿಕ್ಷಣವನ್ನು ಪಡೆದು ಹೇಗೆ ಉನ್ನತ ಸ್ಥಾನವನ್ನು ಪಡೆಯಬಹುದು ಎಂಬುದು ವಿದ್ಯಾರ್ಥಿಗಳು ಜೀವನದ ಪ್ರತಿ ಹಂತದಲ್ಲೂ ಯೋಚಿಸಬೇಕು. ಕೇವಲ ಜೀವನಕ್ಕೆ ಆಸರೆಯಾಗಲು ಶಿಕ್ಷಣ ಪಡೆಯುವ ಉದ್ದೇಶ ಆಗಬಾರದು. ಶಿಕ್ಷಣದ ಮುಖಾಂತರ ಲಕ್ಷಾಂತರ ಜನಸಾಮನ್ಯರಿಗೆ ಉಪಯೋಗ ಆಗಬೇಕು. ಅಂತಹ ಶಿಕ್ಷಣವನ್ನು ನೀವು ಪಡೆಯಬೇಕು ಸಲಹೆ ನೀಡಿದರು.

ನಾನು ಪಿಡಿಒ ಆಗಿದ್ದೆ, ಕೆಎಎಸ್ ಉತ್ತೀರ್ಣ ಆಗಿದ್ದೆ. ಆದರೆ ನನ್ನ ಗುರಿ ಇದ್ದದ್ದು ನನ್ನ ಮುಖಾಂತರ ಸಾವಿರಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ವಿಷಯಗಳಲ್ಲಿ ಪಾಸ್ ಐಎಎಸ್, ಐಪಿಎಸ್, ಕೆಎಎಸ್ ಕೋಚಿಂಗ್ ಕೊಡುವುದು. ತರಬೇತಿ ಪಡೆದವರು ಜನಸಾಮನ್ಯರ ಕಣ್ಣೀರು ಒರೆಸಬೇಕು ಎಂಬುದು ಆಶಯವಾಗಿತ್ತು. ಅದಕ್ಕಾಗಿ ದೇಶದ ನಾಲ್ಕು ಮೂಲೆಗಳಲ್ಲೂ ಇನ್‌ಸೈಟ್‌ ಐಎಎಸ್ ಕೋಚಿಂಗ್ ಸೆಂಟರ್ ಪ್ರಾರಂಭಿಸಿದೆ. ನಮ್ಮ ಕೋಚಿಂಗ್ ಸೆಂಟರ್ ಮೂಲಕ ನೂರಾರು ವಿದ್ಯಾರ್ಥಿಗಳು ಐಎಎಸ್ ಹಾಗೂ ಐಪಿಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂದು ದೃಢನಿರ್ಧಾರದಿಂದ ಸಂಸ್ಥೆ ಕಟ್ಟಿದೆ. ಇಂದು ನೂರಾರು ಜನರಿಗೆ ಕೆಲಸ ನೀಡಿದ್ದೇನೆ ಎಂದರು.

ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಮೂಲ್ಯ ಎಂಬುದನ್ನು ಯಾರೂ ಮರೆಯಬೇಡಿ. ಒಮ್ಮೆ ಎಡವಿದರೆ ಇಡೀ ಜೀವನ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ, ಸತತ ಅಧ್ಯಯನದಲ್ಲಿ ತೊಡಗಬೇಕು. ಆಗ ನಿಮಗೆ ವಿಫುಲ ಅವಕಾಶಗಳು ಹುಡುಕಿ ಬರುತ್ತವೆ ಎಂದರು.

ದಿಕ್ಸೂಚಿ ಕಾರ್ಯಗಾರಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ರಾಜು ಕಣಗಣ್ಣಾರ್, ರಾಜುಮೌರ್ಯ, ಮಲ್ಲೇಶ್ ಮಾಳಕ್ಕಿ, ಮಂಜುನಾಥ್, ಡಿ.ಸಿ.ತಮ್ಮಣ್ಣ, ಸುದೀಪ್, ವಿಜಯ ಕಾಲೇಜಿನ ಪ್ರಾಂಶುಪಾಲ ವಸಂತ್, ಸರ್ಕಾರಿ ಪಿಯುಸಿ ಕಾಲೇಜಿನ ಪ್ರಾಂಶುಪಾಲ ಬಸವರಾಜ, ಸಾಸ್ವೇಹಳ್ಳಿ ಕಾಲೇಜಿನ ಪ್ರಾಚಾರ್ಯ ದೇವೀರಪ್ಪ, ಸರ್ಕಾರಿ ಪಾಲಿಟೆಕ್ನಿಕ್‌ನ ದೊಡ್ಡಸ್ವಾಮಿ, ಮಾಲತಿ, ಡಾ.ಶಿವಪ್ಪ, ಹನುಮಂತಪ್ಪ ಸೊರಟೂರು, ಲಕ್ಷ್ಮೀದೇವಮ್ಮ, ಸುಚಿತ್ರ ಇತರರು ಇದ್ದರು.

- - -

ಕೋಟ್‌ ವಿನಯಕುಮಾರ್ ವಿನಯವಂತಿಕೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತ ಸಮಾಜಮುಖಿಯಾಗಿ ವಿದ್ಯಾರ್ಥಿಗಳಿಗೆ ಸಲಹೆ ಹಾಗೂ ಸಹಕಾರ ನಿಡುತ್ತಿದ್ದಾರೆ. ಇಂತಹ ವ್ಯಕ್ತಿತ್ವವನ್ನು ನಾವೆಲ್ಲರೂ ಗೌರವಿಸಲೇಬೇಕು

- ಡಾ. ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಹಿರೇಕಲ್ಮಠ

- - - -3ಎಚ್.ಎಲ್.ಐ1.ಜೆಪಿಜಿ:

ದಿಕ್ಸೂಚಿ ಕಾರ್ಯಾಗಾರವನ್ನು ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಉದ್ಘಾಟಿಸಿದರು. ಜಿ.ಬಿ.ವಿನಯಕುಮಾರ್ ಇತರರು ಇದ್ದರು.