ಗೊಡಬನಹಾಳ್ ಗ್ರಾಮದ ಗುರುಶಾಂತೇಶ್ವರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಭಾರತದ ಹಲವು ಪ್ರತಿಭೆಗಳಂತೆಯೇ ಕ್ರಮೇಣ ಸಾಧನೆ ಮಾಡುತ್ತ ವಿಶ್ವದ ಶ್ರೇಷ್ಠ ಆಟಗಾರರ ಪಟ್ಟಿಗೆ ಸೇರಿದವರು ಮೇಜರ್ ಧ್ಯಾನ್ಚಂದ್ ಎಂದು ಕ್ರೀಡಾ ಅಧ್ಯಾಪಕ ಎಸ್.ಟಿ.ಉಮೇಶ್ ತಿಳಿಸಿದರು.ಗೊಡಬನಹಾಳ್ ಗುರುಶಾಂತೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಆಚರಿಸಲಾದ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಧ್ಯಾನ್ಚಂದ್ ಜರ್ಮನಿಯ ಹಿಟ್ಲರ್ನನ್ನೂ ಸಹ ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕರಾಗಿದ್ದರು. ಅವರು ಓದಿದ್ದು ಕಡಿಮೆಯೇ. 16ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿದರು. ಕ್ರೀಡೆಯಲ್ಲಿ ಆಗ ಗಮನಾರ್ಹ ಸಾಧನೆ ಮಾಡಲಿಲ್ಲ. ಆದರೆ ಛಲವಂತನಾದ ಧ್ಯಾನ್ಚಂದ್ ಮುಂದೆ ವಿಶ್ವವೇ ಗುರುತಿಸುವಂತಹ ಹಾಕಿ ಆಟಗಾರನಾಗಿ ರೂಪುಗೊಂಡರು ಎಂದರು.ಧ್ಯಾನ್ಚಂದ್ ಅವರ ಕೋಚ್ ಆಗಿದ್ದ ಪಂಕಜ್ ಗುಪ್ತ ಅವರಿಗೆ ಧ್ಯಾನ್ಚಂದ್ ಅವರೊಳಗಿನ ಪ್ರತಿಭೆ ಗೊತ್ತಿತ್ತು. ಒಂದು ದಿನ ಈ ಹುಡುಗ ಜಗತ್ತಿನ ಕಣ್ಣನ್ನೇ ತೆರೆಯುತ್ತಾನೆ ಎಂದಿದ್ದಾರೆ. ಆ ಮಾತು ಇಂದು ಸತ್ಯವಾಗಿದೆ. ಭಾರತ ಸರ್ಕಾರ ಧ್ಯಾನ್ಚಂದ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.
ಧ್ಯಾನ್ಚಂದ್ ಅವರ ಬಗ್ಗೆ ತಿಳಿದು ಅವರಂತೆ ಮಹಾನ್ ಆಟಗಾರನಾಗುವ ಕನಸನ್ನು ನಮ್ಮ ಯುವಕರು ಕಾಣಬೇಕು ಎಂದು ಉಮೇಶ್ ಸಲಹೆ ಮಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಪಿ.ಎಸ್.ರವಿಶಂಕರ್ ವಹಿಸಿದ್ದರು. ಈ ವೇಳೆ ಕಾವ್ಯ ದಿವ್ಯಶ್ರೀ, ನೂರ್ ಈ ಮುಜಾಮಿಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.