ಸಾರಾಂಶ
ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಯುವ ರೆಡ್ ಕ್ರಾಸ್ ಘಟಕ, ಐಕ್ಯೂಎಸಿ, ರೋಟರಿ ಉಡುಪಿ ಮತ್ತು ಐಎಂಎ ಉಡುಪಿ ಕರಾವಳಿ ಆಶ್ರಯದಲ್ಲಿ ‘ಮಧುಮೇಹ ಜಾಗೃತಿ’ ಕಾರ್ಯಕ್ರಮ ಆಯೋಜಿಸಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಡಾ ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಯುವ ರೆಡ್ ಕ್ರಾಸ್ ಘಟಕ, ಐಕ್ಯೂಎಸಿ, ರೋಟರಿ ಉಡುಪಿ ಮತ್ತು ಐಎಂಎ ಉಡುಪಿ ಕರಾವಳಿ ಆಶ್ರಯದಲ್ಲಿ ‘ಮಧುಮೇಹ ಜಾಗೃತಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು.ಐಎಂಎ ಉಡುಪಿ ಕರಾವಳಿಯ ಅಧ್ಯಕ್ಷ ಡಾ.ಕೆ.ಸುರೇಶ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾ ವಿಭಾಗದ ಡೀನ್ ಸೋಜನ್ ಕೆ.ಜಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ರೋಟರಿ ಅಧ್ಯಕ್ಷ ಗುರುರಾಜ್ ಭಟ್, ಆರೋಗ್ಯದ ಬಗ್ಗೆ ಜಾಗೃತಿವಹಿಸುವುದರ ಬಗ್ಗೆ ಸಲಹೆ ನೀಡಿದರು. ಕಾರ್ಯದರ್ಶಿ ವಾಸ್ನವಿ ಆಚಾರ್ಯ, ಮಧುಮೇಹ ಬರುವುದಕ್ಕೂ ಮುನ್ನ ಅದರ ಬಗ್ಗೆ ಜಾಗೃತಿ ವಹಿಸುವಂತೆ ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಮಧುಮೇಹ ತಜ್ಞೆ ಡಾ. ಶೃತಿ ಬಲ್ಲಾಳ್, ವಿದ್ಯಾರ್ಥಿನಿಯರಿಗೆ ಉತ್ತಮ ಆಹಾರ ಸೇವನೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದರು ಹಾಗೂ ವಿದ್ಯಾರ್ಥಿನಿಯರಿಗೆ ಮೊಬೈಲ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿ, ಹೊರಾಂಗಣ ಆಟಗಳಲ್ಲಿ ತೊಡಗಿಸಿಕೊಳ್ಳುವುದರ ಕುರಿತಾಗಿ ಮತ್ತು ವ್ಯಾಯಾಮವನ್ನು ನಿತ್ಯ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.ಐಕ್ಯೂಎಸಿ ಸಂಯೋಜಕಿ ಪ್ರೊ. ಶ್ರೀಮತಿ ಅಡಿಗ, ನಿರ್ವಹಣಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದಿವ್ಯ ಎಂ.ಎಸ್. ಉಪಸ್ಥಿತರಿದ್ದರು. ಅನನ್ಯ ನಿರೂಪಿಸಿದರು. ವಿನೋದ ಸ್ವಾಗತಿಸಿದರು. ಧನ್ಯಾ ವಂದಿಸಿದರು.