ಕನ್ನಡಪ್ರಭ ವಾರ್ತೆ ಬೆಳಗಾವಿ

ಡಯಾಬಿಟಿಸ್ ಅಷ್ಟು ಮಾರಕ ಕಾಯಿಲೆಯಲ್ಲ. ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆದರೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಹಿರಿಯ ಮಧುಮೇಹ ತಜ್ಞ ಡಾ.ಸಂದೀಪ್ ಶ್ರೀವಾಸ್ತವ ಹೇಳಿದರು.

ನಗರದಲ್ಲಿ ಶನಿವಾರ ಮೆಡ್ ಬೆಲ್ ಗ್ಲೋಬಲ್‌ ಹೆಲ್ತ್‌ ಕೇರ್‌ ಮತ್ತು ಸಂಶೋಧನೆ ಫೌಂಡೇಶನ್‌ ವತಿಯಿಂದ ಆಯೋಜಿಸಲಾದ ಎರಡು ದಿನದ ಮಧುಮೇಹ ಜಾಗೃತ ಕಾರ್ಯಕ್ರಮವನ್ನು ಉದ್ಘಾಟಿಸಿ‌ ಅವರು ಮಾತನಾಡಿದರು. ಮಧುಮೇಹ ರೋಗಿಗಳು ರೋಗದ ಬಗ್ಗೆ ಅನಗತ್ಯ ಭಯ ಮತ್ತು ಆತಂಕಕ್ಕೆ ಒಳಗಾಗಬಾರದು. ಧೈರ್ಯ ಮತ್ತು ಸ್ಥೈರ್ಯದಿಂದ ಆರೋಗ್ಯದ ಕಡೆ ಗಮನ ಹರಿಸಿದರೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ನಿಯಮಿತ ವ್ಯಾಯಾಮ, ಗುಣಮಟ್ಟದ ಆಹಾರ ಸೇವನೆ ಹಾಗೂ ಆರೋಗ್ಯಕರ ಜೀವನಶೈಲಿಯ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು. ಬೆಳಗಾವಿಯಲ್ಲಿ ಬೃಹತ್‌ ಮಧುಮೇಹ ಜಾಗೃತ ಕಾರ್ಯಕ್ರಮವನ್ನು ಆಯೋಜಿಸಿದ ಮೆಡ್ ಬೆಲ್ ಗ್ಲೋಬಲ್ ಸಂಸ್ಥೆ ಬಗ್ಗೆ ಮೆಚ್ಚುಗೆ ತಿಳಿಸಿದರು.ತಂತ್ರಜ್ಞಾನದ ಅಭಿವೃದ್ಧಿಯಿಂದ ಇಂದು ಮಧುಮೇಹ ಸೇರಿದಂತೆ ಅನೇಕ ಕಾಯಿಲೆಗಳಿಗೆ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ. ಆದ್ದರಿಂದ ರೋಗವನ್ನು ನಿರ್ಲಕ್ಷಿಸದೆ ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ವೈದ್ಯರ ಸಲಹೆ ಪಾಲಿಸುವುದು ಅಗತ್ಯ. ಇಂದಿನ ಜೀವನಶೈಲಿ, ಒತ್ತಡ ಹಾಗೂ ಅನಿಯಮಿತ ಆಹಾರ ಪದ್ಧತಿಯಿಂದ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲಸದ ಜತೆ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುನ್ನೆಚ್ಚರಿಕೆ ಮತ್ತು ಜಾಗೃತಿ ಅತ್ಯಂತ ಮುಖ್ಯ ಎಂದು ಅವರು ತಿಳಿಸಿದರು.

ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಮಧುಮೇಹ ನಿಯಂತ್ರಣದಲ್ಲಿ ಇಡಲು ಜಾಗೃತಿ, ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಹಾಗೂ ವೈದ್ಯರ ಸಲಹೆ ಅತ್ಯಂತ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು ಎಂದರು.

ಮೆಡ್ ಬೆಲ್ ಗ್ಲೋಬಲ್ ಸಂಸ್ಥೆಯ ಅಧ್ಯಕ್ಷ, ಖ್ಯಾತ ವೈದ್ಯರಾದ ಡಾ.ಗಿರೀಶ ಸೋನವಾಲಕರ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರ ನಡುವಿನ ಸಮನ್ವಯ, ಅನುಭವ ವಿನಿಮಯ ಮತ್ತು ವೈಜ್ಞಾನಿಕ ಚರ್ಚೆಗಳು ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸಲು ನೆರವಾಗುತ್ತವೆ. ಡಾ.ಸೈಯದ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಉದ್ದೇಶದಿಂದ ಮೆಡ್ ಬೆಲ್ ಗ್ಲೋಬಲ್ ಸಂಸ್ಥೆಯನ್ನು ಸ್ಥಾಪಿಸಿದ್ದು, ಇಂತಹ ಕಾರ್ಯಕ್ರಮಗಳು ವೈದ್ಯರಿಗೆ ಹೊಸ ಜ್ಞಾನ ಮತ್ತು ತಂತ್ರಜ್ಞಾನ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿ ಡಿಸಿಪಿ ನಾರಾಯಣ ಭರಮನಿ ಮಾತನಾಡಿ, ವೈದ್ಯರು ಮತ್ತು ಪೊಲೀಸರು ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸಮಾಜದಲ್ಲಿ ಉತ್ತಮ ಹೆಸರು ಮತ್ತು ವಿಶ್ವಾಸ ಗಳಿಸಲು ನಿರಂತರ ಪರಿಶ್ರಮ, ಬದ್ಧತೆ ಹಾಗೂ ಸೇವಾ ಮನೋಭಾವ ಅಗತ್ಯ. ಹಣದಿಂದ ಎಲ್ಲವನ್ನೂ ಖರೀದಿಸಬಹುದು ಎಂಬ ಊಹೆ ಇದೆ. ಜೀವವನ್ನು ಖರೀದಿಸಲು ಸಾಧ್ಯವಿಲ್ಲ, ಆದರೆ. ವೈದ್ಯರು ಜೀವನವನ್ನು ಉಳಿಸುವ ದೈವ ಸ್ವರೂಪಿಗಳು ಎಂದು ಅಭಿಪ್ರಾಯಪಟ್ಟರು.


ಈ ವೇಳೆ ಸಮ್ಮೇಳನದಲ್ಲಿ ಮಧುಮೇಹ ಚಿಕಿತ್ಸೆಯಲ್ಲಿನ ನೂತನ ಸಂಶೋಧನೆಗಳು, ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳು, ರೋಗ ನಿರ್ವಹಣೆ ಹಾಗೂ ತಡೆಗಟ್ಟುವಿಕೆ ಕುರಿತಂತೆ ತಜ್ಞರು ಉಪನ್ಯಾಸ ನೀಡಿದರು. ವೈದ್ಯರು, ಆರೋಗ್ಯ ವೃತ್ತಿಪರರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ವಿವಿಧ ತಾಂತ್ರಿಕ ಅಧಿವೇಶನಗಳು ನಡೆದವು.ಈ ಸಂದರ್ಭದಲ್ಲಿ ಅಕ್ಯುಮೆಂಟಸ್ ಸೇರಿದಂತೆ ವಿವಿಧ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳ ಒಟ್ಟು 23 ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ವೈದ್ಯಕೀಯ ಕ್ಷೇತ್ರದ ನೂತನ ಸಾಧನಗಳು, ತಂತ್ರಜ್ಞಾನಗಳು ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಡಾ. ಡಿ.ನಾಗೇಶ್ವರ ರೆಡಿ, ಡಾ.ಅರವಿಂದ ಸೊಸಲೆ, ಡಾ.ಹೇಮಂತ ಕೌಜಲಗಿ, ಡಾ.ಮಾಧವ ಪ್ರಭು, ಡಾ.ಸೈಯದ್‌ ಅಲಿ, ಡಾ.ವಿಕ್ರಾಂತ ಘಟನಟ್ಟಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ವೈದ್ಯರು, ಆರೋಗ್ಯ ತಜ್ಞರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು