ರಂಗಭೂಮಿ ಭಾವನೆಗಳಿಗೆ ಸ್ಪಂದಿಸುವ ಸುಂದರ ವಲಯ: ಯತೀಶ್

| Published : May 21 2024, 12:45 AM IST

ಸಾರಾಂಶ

ಜೀವನದಲ್ಲಿ ಎಲ್ಲವನ್ನು ಹಾಗೂ ಎಲ್ಲರನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ರಂಗಭೂಮಿ ನಮಗೆ ಕಲಿಸಿಕೊಟ್ಟಿದೆ. ರಂಗಭೂಮಿ ಒಂದು ಸಮುದಾಯಿಕ ಕಲೆ. ಅದು ಮನುಷ್ಯನ ಪರಿಶ್ರಮ ಹಾಗೂ ಶಿಸ್ತಿನ್ನು ಬಯಸುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ರಂಗಭೂಮಿ ನಮಗೆ ಧೈರ್ಯ ಹಾಗೂ ಶಿಸ್ತನ್ನು ಕಲಿಸುತ್ತದೆ. ರಂಗಭೂಮಿ ಒಂದು ಅದ್ಭುತ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವ ವಲಯವಾಗಿದೆ ಎಂದು ರಂಗಕರ್ಮಿ ಯತೀಶ್ ಎನ್. ಕೊಳ್ಳೇಗಾಲ ತಿಳಿಸಿದರು.

ನಗರದ ಜಯಲಕ್ಷ್ಮೀಪುರಂ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ, ಪ್ರತಿಭಾ ವೇದಿಕೆ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ್ದ ರಂಗಭೂಮಿ ಒಳನೋಟ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಎಲ್ಲವನ್ನು ಹಾಗೂ ಎಲ್ಲರನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ರಂಗಭೂಮಿ ನಮಗೆ ಕಲಿಸಿಕೊಟ್ಟಿದೆ. ರಂಗಭೂಮಿ ಒಂದು ಸಮುದಾಯಿಕ ಕಲೆ. ಅದು ಮನುಷ್ಯನ ಪರಿಶ್ರಮ ಹಾಗೂ ಶಿಸ್ತಿನ್ನು ಬಯಸುತ್ತದೆ ಎಂದರು.

ರಂಗಭೂಮಿ ಬದುಕುವ ಶೈಲಿಯನ್ನು ನಿರ್ಮಾಣ ಮಾಡಿಕೊಡುತ್ತದೆ. ನಾಟಕದ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಾವು ಜೀವನಶೈಲಿಯನ್ನು ರೂಢಿಸಿಕೊಳ್ಳುತ್ತವೆ. ರಂಗಭೂಮಿ ಜೀವನವನ್ನು ಕಲಿಸುವ ಅಪರೂಪದ ಪಾಠಶಾಲೆಯಾಗಿದೆ ಎಂದು ಅವರು ಹೇಳಿದರು.

ನಾಟಕವು ಒಂದು ಕಾರ್ಯಕ್ರಮದಂತೆ ಅದನ್ನು ಯಶಸ್ವಿಗೊಳಿಸುವಲ್ಲಿ ನಮ್ಮೆಲ್ಲರ ವೈಯಕ್ತಿಕ ಆಸೆ- ಆಕಾಂಕ್ಷೆಗಳನ್ನು ಬದಿಗಿರಿಸಿ ದುಡಿಯಬೇಕು. ಒಂದು ನಾಟಕದ ಯಶಸ್ಸು ಇಡೀ ತಂಡದ ವಿಜಯವಾಗಿ ಕಾಣುತ್ತದೆ. ಒಂದು ಗುಂಪಿನೊಂದಿಗೆ ಬೆರೆಯುವ ಕಲೆಯನ್ನು ನಾಟಕ ಕಲಿಸುತ್ತದೆ ಎಂದು ಅವರು ತಿಳಿಸಿದರು.

ಎಲ್ಲರನ್ನು ಬಿಟ್ಟು ಏಕಾಂಗಿ ತನದಲ್ಲಿ ಬದುಕುತ್ತಿರುವ ಮನುಷ್ಯನಿಗೆ, ರಂಗಭೂಮಿ ಇಂದು ಕೂಡಿ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ರಂಗಭೂಮಿ ಒಂದು ವ್ಯಕ್ತಿತ್ವ ನಿರ್ಮಾಣದ ಶಿಬಿರವಾಗಿಯೂ ಇಂದು ಬಳಕೆಗೊಳ್ಳುತ್ತಿದೆ. ನಿರಂತರ ಅಧ್ಯಯನದ ಕ್ರಮವನ್ನು ರಂಗಭೂಮಿ ನಮಗೆ ಕಲಿಸುತ್ತದೆ ಎಂದರು.

ಮಹಾಜನ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಸಹಾಯಕ ಪ್ರಾಧ್ಯಾಪಕ ಜೆ. ಮನೋಜ್ ಕುಮಾರ್, ಪ್ರತಿಭಾ ವೇದಿಕೆ ಸಂಚಾಲಕ ಎಂ. ನಾಗೇಶ್, ಸಾರಂತ ತಂಡದ ಸಂಚಾಲಕ ರಾಧೇಶ್ ಇದ್ದರು. ಸಿ.ಎಂ. ಕಿರಣ್ ಕುಮಾರ್ ಸ್ವಾಗತಿಸಿದರು.