ಕಾಂಗ್ರೆಸ್‌ ಕಮಿಷನ್ ಆರೋಪದ ದಾಖಲೆ ನೀಡಿತ್ತಾ?: ಸಂಸದ ಬಸವರಾಜ ಬೊಮ್ಮಾಯಿ

| Published : Jan 07 2025, 12:32 AM IST

ಕಾಂಗ್ರೆಸ್‌ ಕಮಿಷನ್ ಆರೋಪದ ದಾಖಲೆ ನೀಡಿತ್ತಾ?: ಸಂಸದ ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಶೇ. 60ರಷ್ಟು ಕಮಿಷನ್‌ ಪಡೆಯುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ದಾಖಲೆ ಕೊಡಿ ಎಂದು ಕೇಳುತ್ತಿದ್ದಾರೆ. ಇವರು ಶೇ. 40ರಷ್ಟು ಕಮಿಷನ್‌ ಎಂದು ಆರೋಪ ಮಾಡುತ್ತಿದ್ದಾರಲ್ಲ. ಆಗ ದಾಖಲೆ ಕೊಟ್ಟಿದ್ದರಾ? ಎಂದು ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿ:

ಬಿಜೆಪಿ ಆಡಳಿತ ಇದ್ದಾಗ ಶೇ. 40ರಷ್ಟು ಕಮಿಷನ್‌ನ ಆರೋಪ ಮಾಡಿದ್ದ ಕಾಂಗ್ರೆಸ್‌, ಏನು ದಾಖಲೆ ಕೊಟ್ಟಿತ್ತು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಶೇ. 60ರಷ್ಟು ಕಮಿಷನ್‌ ಪಡೆಯುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ದಾಖಲೆ ಕೊಡಿ ಎಂದು ಕೇಳುತ್ತಿದ್ದಾರೆ. ಇವರು ಶೇ. 40ರಷ್ಟು ಕಮಿಷನ್‌ ಎಂದು ಆರೋಪ ಮಾಡುತ್ತಿದ್ದಾರಲ್ಲ. ಆಗ ದಾಖಲೆ ಕೊಟ್ಟಿದ್ದರಾ? ಎಂದು ಪ್ರಶ್ನಿಸಿದರು. ಅಲ್ಲದೇ, ಈ ವರೆಗೂ ಅವರಿಗೆ ದಾಖಲೆ ಕೊಡಲು ಸಾಧ್ಯವಾಗಿಲ್ಲ ಎಂದು ತಿರುಗೇಟು ನೀಡಿದರು.

ಸರ್ಕಾರ ಯಾವ ರೀತಿ ನಡೆದುಕೊಳ್ಳತ್ತಿದೆ ಎನ್ನುವುದೆಲ್ಲವೂ ಗೊತ್ತು. ಪ್ರತಿ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿದೆ. ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಜನಸಾಮಾನ್ಯರು, ಗುತ್ತಿಗೆದಾರರು, ಎಲ್ಲ ವರ್ಗದ ಜನರಿಗೆ ಭ್ರಷ್ಟಾಚಾರದ ಬಿಸಿ ಮುಟ್ಟಿದೆ ಎಂದ ಬೊಮ್ಮಾಯಿ, ಭ್ರಷ್ಟಾಚಾರ ಮುಚ್ಚಿ ಹಾಕುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನವರು ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ. ನೀವು (ಬಿಜೆಪಿ) ಏನು ಮಾಡಿದ್ದೀರಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಭಾಗ್ಯಲಕ್ಷೀ ಹಾಗೂ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಇವೆಲ್ಲವನ್ನು ಕಾಂಗ್ರೆಸ್ ಕೊಟ್ಟಿದೆಯಾ ? ಎಂದರು.

ಅಂಬೇಡ್ಕರ್ ವಿರೋಧಿ:

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅಂಬೇಡ್ಕರ್ ಅವರು ಬದುಕಿದ್ದಾಗ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತು. ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಸಂವಿಧಾನ ಹಾಗೂ ಅಂಬೇಡ್ಕರ್ ವಿರೋಧಿ ಎನ್ನುವುದು ಸ್ಪಷ್ಟವಾಗಿದೆ. ತಾವು ಮಾಡಿರುವ ಅಪರಾಧವನ್ನು ಮುಚ್ಚಿ ಹಾಕಿಕೊಳ್ಳಲು ಶಾ ಹೇಳಿಕೆ ತಿರುಚುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಂಬೇಡ್ಕರ್ ಬಗ್ಗೆ ಗೌರವ ಇದ್ದರೆ, ಮೊದಲು ಅಂಬೇಡ್ಕರ್‌ಗೆ ಅವರ ಹಿರಿಯರು ಮಾಡಿರುವ ಅಪಮಾನಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲಿ ಎಂದು ಹೇಳಿದರು.

ಜನ ವಿರೋಧಿ ತೀರ್ಮಾನ:

ಬಸ್ ಪ್ರಯಾಣ ದರ ಏರಿಕೆ ಜನ ವಿರೋಧಿ ತೀರ್ಮಾನ, ಜನರೇ ಈ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರು ಶಕ್ತಿ ಯೋಜನೆ ಮಾಡಿ ಅದಕ್ಕೆ ನೀಡಬೇಕಾದ ಹಣ ಸರಿಯಾಗಿ ನೀಡುತ್ತಿಲ್ಲ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ತೊಂದರೆ ಆದಾಗ ಸಾರಿಗೆ ಸಂಸ್ಥೆಗೆ ಯಡಿಯೂರಪ್ಪ ಸರ್ಕಾರ ಸಹಾಯ ಮಾಡಿತ್ತು. ಇವರು ಡೀಸೆಲ್ ದುಡ್ಡು ಕಟ್ಟಲು ಆಗದ ಪರಿಸ್ಥಿತಿಗೆ ತಂದಿದ್ದಾರೆ. ಅವರು ಗ್ಯಾರಂಟಿ ಯೋಜನೆಗಳಿಗೆ ಸರಿಯಾಗಿ ಸಂಪನ್ಮೂಲ ಕ್ರೋಡೀಕರಣ ಮಾಡಲಾಗದೇ ಜನರ ಮೇಲೆ ತೆರಿಗೆ ಭಾರ ಹಾಕುತ್ತಿದ್ದಾರೆ ಎಂದರು.

ವಿತಂಡವಾದ:

ರೈಲ್ವೆ ಪ್ರಯಾಣ ದರ ಏರಿಕೆಗೂ ಬಸ್ ಪ್ರಯಾಣ ದರ ಹೆಚ್ಚಳಕ್ಕೂ ಹೋಲಿಕೆ ಮಾಡಿ ವಿತಂಡವಾದ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ನಮ್ಮ ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡಲಿ. ರಾಜ್ಯದಲ್ಲಿ ರಸ್ತೆ ಗುಂಡಿಗಳು ಬಿದ್ದಿವೆ. ಚಂದ್ರನ ಮೇಲೂ ಗುಂಡಿಗಳಿವೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಕೇಳಿ ಬಂದಿರುವ ಆರೋಪದ ಕುರಿತು ಸೂಕ್ತ ತನಿಖೆಯಾಗಲಿ ಎಂದರು.