ಸಾರಾಂಶ
ಶಾಂತಿ, ಭಾವೈಕ್ಯತೆ, ಭಾತೃತ್ವ, ಮಾನವೀಯತೆ, ಸಹೋದರತ್ವವನ್ನು ಜನರಲ್ಲಿ ಬೆಳೆಸಲು ಗ್ರಾಮೀಣ ಭಾಗ ಸೇರಿದಂತೆ ನಗರದಲ್ಲಿ ಕಾರ್ಯಾಗಾರ, ಶಿಬಿರ ಆಯೋಜಿಸಲಾಗುವುದು. ಈ ಅಂಶಗಳ ಆಧಾರದ ಮೇಲೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸುವರು.
ಹುಬ್ಬಳ್ಳಿ:
ಜಾಗತಿಕ ಮಟ್ಟದಲ್ಲಿ ಅಶಾಂತಿ, ಯುದ್ಧ ಮನಸ್ಥಿತಿ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದಕ್ಷಿಣ ಕೋರಿಯಾದ ಎನ್ಜಿಒ ಸಂಸ್ಥೆಯೊಂದು ಕರ್ನಾಟಕ ರಾಜ್ಯ ಕಾನೂನು ವಿವಿ ವಿದ್ಯಾರ್ಥಿಗಳಿಗೆ ಹಾಗೂ ಜನರಲ್ಲಿ ಶಾಂತಿ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಹೊಸದಾಗಿ ''''''''ಶಾಂತಿ ಮತ್ತು ಸಾಮರಸ್ಯ'''''''' ಎಂಬ ನೂತನ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಲು ನಿರ್ಣಯಿಸಿದೆ ಎಂದು ಕುಲಪತಿ ಡಾ. ಸಿ. ಬಸವರಾಜು ಹೇಳಿದರು.ಇಲ್ಲಿನ ನವನಗರದಲ್ಲಿರುವ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ದಕ್ಷಿಣ ಕೋರಿಯಾದ ಹೆವೆನ್ಲಿ ಕಲ್ಚರ್, ವರ್ಲ್ಡ್ ಪೀಸ್, ರೆಸ್ಟೋರೇಷನ್ ಆಫ್ ಲೈಟ್ (HWPL) ಜತೆ ಒಡಂಬಡಿಕೆ ವಿನಿಮಯಕ್ಕೆ ಸಹಿ ಹಾಕಿ ಮಾತನಾಡಿದರು.
ಶಾಂತಿ, ಭಾವೈಕ್ಯತೆ, ಭಾತೃತ್ವ, ಮಾನವೀಯತೆ, ಸಹೋದರತ್ವವನ್ನು ಜನರಲ್ಲಿ ಬೆಳೆಸಲು ಗ್ರಾಮೀಣ ಭಾಗ ಸೇರಿದಂತೆ ನಗರದಲ್ಲಿ ಕಾರ್ಯಾಗಾರ, ಶಿಬಿರ ಆಯೋಜಿಸಲಾಗುವುದು. ಈ ಅಂಶಗಳ ಆಧಾರದ ಮೇಲೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸುವುದು. ಇದೊಂದು ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಆಗಿದೆ. ಪಿಯುಸಿ ನಂತರ ಆಸಕ್ತರು ಕಾನೂನು ಅಧ್ಯಯನ ಮಾಡುವ ವಿದ್ಯಾರ್ಥಿಗಳು, ಅಧ್ಯಯನದ ಪಠ್ಯ ವಿಷಯದ ಜತೆಗೆ ಈ ಕೋರ್ಸ್ನ್ನು ಅಧ್ಯಯನ ಮಾಡಬಹುದು. ಆರಂಭಿಕ ಹಂತದಲ್ಲಿ 2024-25ರಲ್ಲಿ ಮೊದಲ ಬಾರಿಗೆ ವಿವಿಯಲ್ಲಿ ಇದನ್ನು ಪರಿಚಯಿಸಲಾಗುವುದು. ತದನಂತರ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಕೋರ್ಸ್ ಪರಿಚಯಿಸಲಾಗುವುದು ಎಂದರು.ಕುಲಪತಿ ಡಾ. ಸಿ. ಬಸವರಾಜು, ಡಿಪಾರ್ಟ್ಮೆಂಟ್ ಅಂತಾರಾಷ್ಟ್ರೀಯ ಕಾನೂನು ವಿಭಾಗದ ಪ್ರಧಾನ ನಿರ್ದೇಶಕ ಜೇಡನ್ ಲೀ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿ ಹಸ್ತಾಂತರಿಸಿಕೊಂಡರು. ಈ ವೇಳೆ ಮೌಲ್ಯಮಾಪನ ಕುಲಸಚಿವೆ ಪ್ರೊ. ರತ್ನಾ ಭರಮಗೌಡರ, ಎನ್ಜಿಒ ಸಂಸ್ಥೆಯ ಮುಖ್ಯಸ್ಥೆ ಎಲಿಯಾಂಗ್, ಸಿಂಡಿಕೇಟ್ ಸದಸ್ಯರಾದ ವಸಂತ ಲದ್ವಾ, ಡಾ. ಎಚ್.ವಿ. ಬೆಳಗಲಿ, ಎಸ್.ಎನ್. ಫರಾಂಡೆ, ಮೋಹನ ಭಜಂತ್ರಿ ಹಾಗೂ ವಕೀಲರಾದ ಸಾವಿತ್ರಮ್ಮ, ಡಾ. ವಸೀಮ್ ಖಾನ್ ಎಂ.ಐ, ಡಾ. ನಜೀಬುನ್ನೀಸಾ, ಬಿ.ಜಿ. ರವೀಕುಮಾರ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗವಹಿಸಿದ್ದರು.