ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಸಾಮಾಜಿಕ ಜಾಲತಾಣಗಳಲ್ಲಿ ಕೋಮುಗಲಭೆಗೆ ಸಂಬಂಧಪಟ್ಟ ಸುಳ್ಳುಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಪಿಐ ರೇವಣ್ಣ ಎಚ್ಚರಿಕೆ ನೀಡಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಶಾಂತಿ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಇದೇ ೨೭ರಂದು ಗಣಪತಿ ಹಾಗು ಸೆಪ್ಟೆಂಬರ್ ಮೊದಲ ವಾರದಲ್ಲಿ ಈದ್ ಮಿಲಾದ್ ಹಬ್ಬ ಬರುವುದರಿಂದ ಸೌಹಾರ್ದವಾಗಿ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಕರೆ ನೀಡಿದರು.ಬೇರೆ ಎಲ್ಲೋ ನಡೆದ ವಿಚಾರಗಳನ್ನು ಉಪಯೋಗಕ್ಕೆ ಬಾರದ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾತಿಗಳ ನಡುವೆ ಸಾಮರಸ್ಯ ಕದಡುವ ವಿಷಯಗಳನ್ನು ಹರಿಬಿಟ್ಟರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಎರಡು ಹಬ್ಬಗಳು ಒಂದೇ ಸಮಯದಲ್ಲಿ ಬರುವುದರಿಂದ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ತಾವುಗಳು ಗಣೇಶ ಹಾಗು ಈದ್ ಮಿಲಾದ್ ಹಬ್ಬ ಅಂಗವಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದರು.ಫ್ಲೆಕ್ಸ್ ಹಾಗೂ ಬಂಟಿಂಗ್ಸ್ಗಳನ್ನು ಕಟ್ಟುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟವರ ಬಳಿ ಅನುಮತಿ ಇದ್ದರೆ ಮಾತ್ರ ಅವಕಾಶ ನೀಡಲಾಗುತ್ತದೆ.
ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರರಿಗೆ ತೊಂದರೆಯಾಗದಂತೆ ಸ್ವಯಂ ಸೇವಕರನ್ನು ನೇಮಿಸವೇಕು. ಗಣೇಶ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಕಡ್ಡಾಯ ಅನುಮತಿ ಬೇಕು. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕತ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕೆ ನೇರವಾಗಿ ಆಯೋಜಕರನ್ನೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಮಸೀದಿಗಳಲ್ಲಿ ಎಲ್ಲಾ ಯುವಕರಿಗೂ ಸೂಕ್ತ ಮಾಹಿತಿ ನೀಡುವ ಮೂಲಕ ಅತಿರೇಕದ ವರ್ತನೆಗೆ ಅವಕಾಶ ನೀಡುವುದಿಲ್ಲ ಅಂತಹ ವರ್ತನೆ ಕಂಡುಬಂದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ವಾಹನ ವಶಪಡಿಸಿಕೊಳ್ಳಲಾಗುವುದು ಎಂದರು.ಪಿಎಸ್ಐ ಎಸ್ ಜಿ ಪಾಟೀಲ್ ಮಾತನಾಡಿ, ಹಿಂದೂ ಹಾಗೂ ಮುಸಲ್ಮಾನ್ ಬಾಂಧವರಿಗೆ ಪವಿತ್ರ ಹಬ್ಬಗಳು ಒಟ್ಟಿಗೆ ಬರುವ ಕಾರಣ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಮೊದಲಿಗೆ ಗಣೇಶ ಹಬ್ಬ ಬರುವುದರಿಂದ ನಮ್ಮ ಠಾಣೆ ವ್ಯಾಪ್ತಿಗೆ ಬರುವ ಪ್ರತಿಯೊಬ್ಬರು ಗಣೇಶ ಕೂರಿಸುವ ಸಂದರ್ಭದಲ್ಲಿ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ನಂತರ ೯ ದಿನಕ್ಕೆ ಸರಿಯಾಗಿ ಈದ್ ಮಿಲಾದ್ ಬರುವುದರಿಂದ ಅಂದು ಮೆರವಣಿಗೆ ಇರುವುದರಿಂದ ಯಾವುದೇ ಗಣೇಶನ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ. ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸೂಕ್ತ ನಿರ್ದೇಶನದೊಂದಿಗೆ ಅವಕಾಶ ನೀಡಲಾಗುತ್ತದೆ. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಸಣ್ಣ ಪುಟ್ಟ ಘಟನೆ ಕಂಡುಬಂದಲ್ಲಿ ನೇರವಾಗಿ ಆಯೋಜಕರನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಶಾಂತಿಯುತವಾಗಿ ಹಬ್ಬಗಳನ್ನು ಆಯೋಜಿಸಲು ಜನಸ್ನೇಹಿ ಪೊಲೀಸ್ ಇಲಾಖೆ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ನಾಗೇಶ್, ಅಬ್ದುಲ್ ಖಾದರ್, ಪುರಸಭೆ ಸದಸ್ಯ ಫಯಾಜ್, ಚಂದ್ರಶೆಟ್ಟಿ ಸೂಕ್ತ ಸಲಹೆ ಸೂಚನೆ ನೀಡಿದರು. ಈ ವೇಳೆ ಪೊಲೀಸ್ ಇಲಾಖೆಯ ಎಎಸ್ಐ ಸೋಮಶೇಖರ್, ದೇವರಾಜ್, ಶಿವಸ್ವಾಮಿ, ಭುವನೇಶ್ ಹಾಗೂ ಸಾರ್ವಜನಿಕರು ಹಾಜರಿದ್ದರು.