ನವಲಗುಂದ:
ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ನಿಷ್ಠೆ, ಶಿಸ್ತು ಮತ್ತು ಸಮರ್ಪಣೆ ಪಕ್ಷದ ಶಕ್ತಿಗೆ ಭದ್ರ ಆಧಾರವಾಗಿದೆ. ಬಲಿಷ್ಠ ಸಂಘಟನೆಯೊಂದಿಗೆ ವಿಕಸಿತ ಭಾರತದ ನಿರ್ಮಾಣದ ದಿಕ್ಕಿನಲ್ಲಿ ನಮ್ಮ ಪ್ರಯತ್ನಗಳು ಇನ್ನಷ್ಟು ವೇಗ ಪಡೆಯಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಇಲ್ಲಿನ ಕುಸುಗಲ್- ಬ್ಯಾಹಟ್ಟಿ ರಸ್ತೆಯಲ್ಲಿನ ಶಣೈ ಗಾರ್ಡನ್ನಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026ರ ಅಂಗವಾಗಿ ನವಲಗುಂದ ಕ್ಷೇತ್ರದ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಸುಭದ್ರತೆ ಬಗ್ಗೆ ಕಾಳಜಿ ಇರುವುದು ಬಿಜೆಪಿ ಕಾರ್ಯಕರ್ತರಲ್ಲಿ ಮಾತ್ರ. ಕಾರ್ಯಕರ್ತರು ಬದುಕಿನಲ್ಲಿ ಬಿಜೆಪಿ ಜೊತೆ ಗುರುತಿಸಿಕೊಳ್ಳುವುದೇ ದೊಡ್ಡ ಸೌಭಾಗ್ಯವಾಗಿದೆ. ಪ್ರತಿ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿದಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆ ಹಾಗೂ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿರಲು ಸಾಧ್ಯವಾಗುತ್ತದೆ ಎಂದು ಜೋಶಿ ಹೇಳಿದರು.ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ತಳಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ ವರೆಗೆ ಶ್ರಮಿಸುವ ಕಾರ್ಯಕರ್ತರನ್ನು ಗುರುತಿಸುವ ಏಕೈಕ ಪಕ್ಷ ಬಿಜೆಪಿ. ಪಕ್ಷ ಆಯೋಜಿಸುವ ತರಬೇತಿ, ಮಾಹಿತಿ ಕಾರ್ಯಾಗಾರ, ಪ್ರಶಿಕ್ಷಣ ಶಿಬಿರಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದರಿಂದ ಪಕ್ಷದ ಮೇಲಿನ ಬದ್ಧತೆ ಬಲವಾಗುತ್ತದೆ ಎಂದರು.
ಧಾರವಾಡ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಂಡಳ ಅಧ್ಯಕ್ಷ ಗಂಗಪ್ಪ ಮನಮಿ, ಮಂಜುನಾಥ ಗಣಿ, ಷಣ್ಮುಖ ಗುರಿಕಾರ, ಲಿಂಗರಾಜ ಪಾಟೀಲ, ಶ್ರೀಪತಿ ಎಡಾಡಿ, ಅಂದಾನಯ್ಯ ಹಿರೇಮಠ, ದೇವರಾಜ ದಾಡಿಭಾವಿ, ಆಡಿವೆಪ್ಪ ಮನಮಿ, ಸುರೇಶ ಗಾಣಿಗೇರ, ಸಿದ್ದನಗೌಡ ಪಾಟೀಲ, ರಾಜಶೇಖರ್ ಕಂಪ್ಲಿ, ಮೃತ್ಯುಂಜಯ ಹಿರೇಮಠ, ರೋಹಿತ್ ಮತ್ತಿಹಳ್ಳಿ, ಸೋಮು ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಸಂಗನಗೌಡ್ರ, ಶಾಂತಕ್ಕ ನಿಡವಣಿ, ಚೈತ್ರಾ ಶಿರೂರ, ಈರಣ್ಣ ಜಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪಕ್ಷದ ಸಂಘಟನೆ ಬಲವರ್ಧನೆ, ಕಾರ್ಯಕರ್ತರ ಸಾಮರ್ಥ್ಯ ವೃದ್ಧಿ ಹಾಗೂ ಮುಂದಿನ ದಿನಗಳ ಕಾರ್ಯಯೋಜನೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.