ಸಾರಾಂಶ
ವಿರಾಜಪೇಟೆಯ ಪ್ರಗತಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ, ಅಂಡರ್ 14 ಮಿನಿ ಒಲಿಂಪಿಕ್ ಕೊಡಗು ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ ಬಾಲಕ ಮತ್ತು ಬಾಲಕಿಯರಿಗೆ ಅಂತಾರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ, ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಕೌಶಲ್ಯ ತರಬೇತಿ ಮತ್ತು ಫಿಟ್ನೆಸ್ ತರಬೇತಿ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕ್ರೀಡಾಪಟುಗಳು ಕ್ರೀಡೆಯಲ್ಲಿ ಶಿಸ್ತಿನೊಂದಿಗೆ ಸಮಯ ಪಾಲಿಸಿದರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಅಂತಾರಾಷ್ಟ್ರೀಯ ರಗ್ಬಿ ಮಾಜಿ ಆಟಗಾರ, ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.ವಿರಾಜಪೇಟೆಯ ಪ್ರಗತಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ, ಅಂಡರ್ 14 ಮಿನಿ ಒಲಿಂಪಿಕ್ ಕೊಡಗು ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ ಬಾಲಕ ಮತ್ತು ಬಾಲಕಿಯರಿಗೆ ಕೌಶಲ್ಯ ತರಬೇತಿ ಮತ್ತು ಫಿಟ್ನೆಸ್ ತರಬೇತಿ ನೀಡಿ ಅವರು ಮಾತನಾಡಿದರು.
ಕ್ರೀಡಾ ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಮುಖ್ಯವಾಗಿ ಕ್ರೀಡಾಪಟುಗಳು ಶಿಸ್ತು ಮತ್ತು ಸಮಯ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು. ನಿರಂತರವಾಗಿ ಫಿಟ್ನೆಸ್ ಮುಂದುವರಿಸಿದರೆ ಮಾತ್ರ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯ ಎಂದರು.ತರಬೇತಿ ನೀಡುವ ವೇಳೆಯಲ್ಲಿ ಕ್ರೀಡಾಪಟುಗಳು ಸರಿಯಾದ ಸಮಯಕ್ಕೆ ಆಗಮಿಸಬೇಕು. ತಮ್ಮ ಕೋಚ್ನೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಂಡರೆ ಮಾತ್ರ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯವೆಂದು ಕಿವಿಮಾತು ಹೇಳಿದರು.
ತರಬೇತುದಾರರು ಹೇಳಿಕೊಟ್ಟಿರುವ ಕೌಶಲ್ಯಗಳನ್ನು ತರಬೇತಿ ವೇಳೆಯಲ್ಲಿ ಮಾತ್ರ ಪಾಲಿಸುವುದಲ್ಲ, ಮನೆಯಲ್ಲಿ ಕೂಡ ಭ್ಯಾಸ ನಡೆಸಬೇಕೆಂದು ಅಭಿಪ್ರಾಯಪಟ್ಟರು.ಅಂಡರ್ 14 ಮಿನಿ ಒಲಿಂಪಿಕ್ ನಿಮ್ಮ ಕ್ರೀಡಾ ಬದುಕಿನಲ್ಲಿ ಉತ್ತಮ ಸಾಧನೆ ತೋರಲು ಸಿಕ್ಕ ಸುವರ್ಣವಕಾಶವಾಗಿದೆ, ಕೊಡಗು ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾ ಕ್ರೀಡಾಪಟುಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿ ಕೊಡಗು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮುವಂತೆ ಮಾಡಬೇಕಾಗಿದೆ ಎಂದು ಮಾದಂಡ ತಿಮ್ಮಯ್ಯ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾರ್ಯದರ್ಶಿ ಪಿ.ಎ ನಾಗೇಶ್ (ಈಶ್ವರ್), ಉಪಾಧ್ಯಕ್ಷ ಕ್ರಿಸ್ಟೋಫರ್, ಖಜಾಂಚಿ ದೀಪು ಮಾಚಯ್ಯ, ಎಂಸಿಸಿ ಕ್ಲಬ್ ಕಾರ್ಯದರ್ಶಿ ಉಮೇಶ್ ಇದ್ದರು.