ಕನ್ನಡಪ್ರಭ ವಾರ್ತೆ, ತುಮಕೂರುಕ್ರೀಡೆಗಳು ಕೇವಲ ದೈಹಿಕ ವ್ಯಾಯಾಮವಲ್ಲ ಅವು ಯುವ ಜನರಲ್ಲಿ ಶಿಸ್ತು ಸಮಯ ಪ್ರಜ್ಞೆ, ಮತ್ತು ರಾಷ್ಟ್ರ ಭಕ್ತಿ ಬೆಳೆಸುವ ಸಾಧನವಾಗಿದೆ. ಕ್ರೀಡೆ ಕೇವಲ ಆಟವಲ್ಲಿ ಅದು ಬದುಕಿನ ಪಾಠವಾಗಿದ್ದು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕೇಂದ್ರ ಯುವ ಕಾರ್ಯಕ್ರಮ ಹಾಗೂ ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್, ಮೈಭಾರತ್ ತುಮಕೂರು, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಯುವಸಬಲೀಕರಣ ಕ್ರೀಡಾ ಇಲಾಖೆ, ತುಮಕೂರು ವಿಶ್ವ ವಿದ್ಯಾಲಯ, 4ನೇ ಕರ್ನಾಟಕ ಎನ್‌ಸಿಸಿ ಬೆಟಾಲಿಯನ್, ಡಾ.ಬಿ.ಆರ್.ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ, ತುಮಕೂರು ಜಿಲ್ಲೆ, ಇನ್ಹರ್‌ವೀಲ್ ಕ್ಲಬ್ ಆಫ್ ತುಮಕೂರು ಸೆಂಟ್ರಲ್ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ 2025-26 ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಯುವ ಜನತೆ ಮೈದಾನ, ತರಗತಿ, ಗ್ರಂಥಾಲಯ ಈ ಮೂರು ಕಡೆ ಇದ್ದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಬಡತನದ ಹಿನ್ನೆಲೆಯಿಂದ ಬಂದವರು ಉತ್ತಮ ಸಾಧನೆ ಮಾಡಿದ್ದಾರೆ, ನಮ್ಮ ಆಸಕ್ತಿ ಏನಿದೆಯೋ, ಅದರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು. ಗೃಹಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ಕೆ.ನಾಗಣ್ಣ ಮಾತನಾಡಿ, ಇಂದಿನ ಯುವ ಜನತೆ ಮೈದಾನಕ್ಕೆ ಬಂದು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ತನಿಖಾ ಸಮಿತಿ ರಾಜ್ಯಾಧ್ಯಕ್ಷ ಸಂತೋಷ್ ಮಾತನಾಡಿ, ಕ್ರೀಡೆಯು ಶಿಸ್ತುಬದ್ಧ ಹಾಗೂ ಸದೃಢ ನಾಗರಿಕರನ್ನು ಸಮಾಜಕ್ಕೆ ನೀಡಲು ನೆರವಾಗುತ್ತದೆ. ಕ್ರಿಡೆಯಲ್ಲಿ ಭಾಗವಹಿಸುವುದು ಮುಖ್ಯ ಹೊರೆತು ಸೋಲು ಗೆಲುವು ಮುಖ್ಯವಲ್ಲ. ಸೋತಾಗ ಕುಗ್ಗದೆ, ಗೆದ್ದಾಗ ಬೀಗದೆ ಎರಡನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಕ್ರೀಡೆ ಕಲಿಸುತ್ತದೆ ಎಂದರು. ಮೈಭಾರತ್‌ನ ಉಪನಿರ್ದೇಶಕಿ ಕೆ.ಶ್ರೀವಾಣಿ ಮಾತನಾಡಿ ಜೀವನುದ್ದಕ್ಕೂ ಸಂತೋಷವಾಗಿ, ದೈಹಿಕ, ಮಾನಸಿಕ ಸದೃಢರಾಗಲು ಕ್ರೀಡೆಯು ಮುಖ್ಯವಾಗಿದ್ದು, ಯುವಕರು ಪ್ರತಿನಿತ್ಯ ತಮ್ಮ ಆಸಕ್ತಿಯ ಕ್ರಿಡೆಗಳನ್ನು ಪ್ರತಿದಿನವು ಅಭ್ಯಾಸ ಮಾಡಬೇಕೆಂದರು.

ಕ್ರೀಡಾಕೂಟದಲ್ಲಿ ಯುವಕರಿಗೆ ವಾಲಿಬಾಲ್, ೨೦೦ ಮೀಟರ್ ಓಟ, ಉದ್ದ ಜಿಗಿತ, ಗುಂಡು ಎಸೆತ, ಯುವತಿಯರಿಗೆ ಹಗ್ಗ ಜಗ್ಗಾಟ, ೧೦೦ ಮೀಟರ್ ಓಟ ಉದ್ದ ಜಿಗಿತ, ಗುಂಡು ಎಸೆತ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ೨೦೦ ಕ್ಕೂ ಅಧಿಕ ಯುವ ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ರೋಹಿತ ಗಂಗಾಧರ್ ಟ್ರೋಫಿ, ಮೆಡಲ್ಸ್, ಪ್ರಮಾಣ ಪತ್ರ ವಿತರಿಸಿದರು. ಎನ್‌ಸಿಸಿಯ ಅಧಿಕಾರಿ ಯೋಗೀಶ್ ಕ್ಯಾಪ್ಟನ್ ಪ್ರದೀಪ್‌ಕುಮಾರ್, ರುದ್ರೇಶ್, ಮುಕ್ತಾಂಬ, ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು, ಮೈಭಾರತ್ ನ ಲೆಕ್ಕಾಧಿಕಾರಿ ಸುಂದರಮ್ಮ ನವರನ್ನು ಸನ್ಮಾನಿಸಲಾಯಿತು. ಕ್ರೀಡಾ ತರಬೇತುದಾರ ಇಸ್ಮಾಯಿಲ್ ಸ್ವಾಗತಿಸಿ ರಾಜಶೇಖರ್ ನಿರೂಪಿಸಿ ತುಂಗಶ್ರೀ ಪ್ರಾರ್ಥಿಸಿದರು.