ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗ ಪತ್ತೆ

| Published : Feb 06 2025, 12:19 AM IST

ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಂಠಿ ಬೆಳೆಯನ್ನು ತೀವ್ರವಾಗಿ ಬಾಧಿಸಿದ ಹೊಸ ಶಿಲೀಂದ್ರ ರೋಗವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕದ ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಂಠಿ ಬೆಳೆಯನ್ನು ತೀವ್ರವಾಗಿ ಬಾಧಿಸಿದ ಹೊಸ ಶಿಲೀಂಧ್ರ ರೋಗವನ್ನುಐ.ಸಿ.ಎ.ಆರ್. – ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ , ಕೋಜಿಕೋಡ್ ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಶುಂಠಿಯಲ್ಲಿ ಕಂಡುಬಂದಿರುವ ಈ ರೋಗವು ಪೈರಿಕ್ಯುಲೇರಿಯಾ ಎಂಬ ಶಿಲೀಂಧ್ರದಿಂದ ಹರಡುತ್ತದೆ. ಪೈರಿಕ್ಯುಲೇರಿಯಾವು ಬತ್ತ, ಗೋಧಿ ಮತ್ತು ಬಾರ್ಲಿಯಂತಹ ಏಕದಳ ಸಸ್ಯಗಳಲ್ಲಿ ಬ್ಲಾಸ್ಟ್ ರೋಗವನ್ನು ಉಂಟುಮಾಡುತ್ತದೆ. ಶುಂಠಿಯಲ್ಲಿ ಇದು ಮೊದಲ ಬಾರಿಗೆ ವರದಿಯಾಗಿದೆ. ಈ ರೋಗಬಂದ ಶುಂಠಿ ಗಿಡದ ಎಲೆಗಳು ಹಳದಿಯಾಗಿ ಕಾಣಿಸಿಕೊಳ್ಳುತ್ತವೆ ಮತ್ತು ಆರಂಭಿಕ ಹಂತದಲ್ಲಿ ಕಪ್ಪು ಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಜೊತೆಗೂಡಿರುತ್ತದೆ. ಒಮ್ಮೆ ಸೋಂಕು ತಗುಲಿದರೆ, ಅದು ವೇಗವಾಗಿ ಹರಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಇಡೀ ಹೊಲವನ್ನು ಆವರಿಸುತ್ತದೆ, ಇದು ತೀವ್ರವಾದ ಬೆಳೆ ನಷ್ಟ ಮತ್ತು ಶುಂಠಿಯ ಎಲೆ ಮತ್ತು ಕಾಂಡದ ಒಣಗುವಿಕೆಗೆ ಕಾರಣವಾಗುತ್ತದೆ.

ರೋಗ ಪೀಡಿತ ಸಸ್ಯಗಳ ಗೆಡ್ಡೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಖಚಿತಪಡಿಸಿರುತ್ತಾರೆ. ಸಮಸ್ಯೆಯು ಎಲೆಗಳ ಅಕಾಲಿಕ ಹಳದಿ ಮತ್ತು ಒಣಗಿಸುವಿಕೆಯಲ್ಲಿದೆ, ಇದು ಶುಂಠಿ ಗೆಡ್ಡೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೋಗದಿಂದಾಗಿ, ಕೊಡಗಿನ ರೈತರು ಗೆಡ್ಡೆಗಳ ತೂಕದಲ್ಲಿ ಶೇ 30 ರಷ್ಟು ನಷ್ಟವನ್ನು ಅನುಭವಿಸಿದ್ದಾರೆ.

ರೋಗ ಹರಡುವಿಕೆಗೆ ಕಾರಣೀಭೂತವಾದ ಹವಾಮಾನದ ಅಂಶಗಳು:

ಸಂಶೋಧಕರ ಪ್ರಕಾರ, ಕೊಡಗಿನಲ್ಲಿರುವ ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳಿಂದ ರೋಗ ಹರಡುವಿಕೆ ಹೆಚ್ಚಾಗಿ ಉಂಟಾಗುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ, ಈ ಪ್ರದೇಶದಲ್ಲಿ ಬೆಳಿಗ್ಗೆ ಇಬ್ಬನಿ ಬೀಳುತ್ತದೆ, ಇದು ಶಿಲೀಂಧ್ರದ ಅಭಿವೃದ್ಧಿ ಹೊಂದಲು ಮತ್ತು ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಇದು ಕೊಡಗಿನ ಮತ್ತು ಸುತ್ತಮತ್ತಲಿನ ಕೆಲವು ಪ್ರದೇಶದ ಶುಂಠಿ ಹೊಲಗಳಲ್ಲಿ ರೋಗವು ವೇಗವಾಗಿ ಹರಡಲು ಕಾರಣವಾಗಿದೆ. ಆದರೆ ಕರ್ನಾಟಕ ಮತ್ತು ಕೇರಳದ ಇತರ ಭಾಗಗಳಲ್ಲಿನ ವಿಭಿನ್ನ ಹವಾಮಾನದಿಂದ ಬೆಳೆಯು ಹಾನಿಗೊಳಗಾಗಿಲ್ಲ. ಐ.ಸಿ.ಎ.ಆರ್. – ಐ. ಐ. ಎಸ್. ಆರ್., ಕೋಜಿಕೋಡ್ಮತ್ತು ಅದರ ಪ್ರಾದೇಶಿಕ ಕೇಂದ್ರವಾದ ಅಪ್ಪಂಗಳ ತಂಡವು ನಡೆಸಿದ ಸಂಶೋಧನೆಯು ಕೊಡಗಿನ ಹವಾಮಾನ ಪರಿಸ್ಥಿತಿಗಳು-ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಇಬ್ಬನಿ ಬೀಳುವಿಕೆ-ರೋಗ ಹರಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದು ಸೂಚಿಸಿದೆ.

ಐ.ಸಿ.ಎ.ಆರ್. – ಐ. ಐ. ಎಸ್. ಆರ್. ನಲ್ಲಿನ ಸಂಶೋಧನಾ ತಂಡವು ರೋಗವನ್ನು ಅಧ್ಯಯನ ಮಾಡುವಾಗ ಗಮನಾರ್ಹ ಸವಾಲುಗಳನ್ನು ಎದುರಿಸಿತು, ಏಕೆಂದರೆ ರೋಗದ ಮಾದರಿಗಳು ಕೋಜಿಕೋಡ್ನ ಪ್ರಯೋಗಾಲಯವನ್ನು ತಲುಪುವ ವೇಳೆಗೆ ಹೆಚ್ಚಾಗಿ ಒಣಗಿರುತ್ತಿದ್ದವು. ಅದಾಗ್ಯೂ, ತಿಂಗಳುಗಳ ಸತತ ಸಂಶೋಧನೆಯಿಂದ ರೋಗದ ಹಿಂದಿನ ಕಾರಣವಾದ ಪೈರಿಕ್ಯುಲೇರಿಯಾಎಸ್‌ಪಿ ಅನ್ನು ವಿಜ್ಞಾನಿಗಳು ದೃಢೀಕರಿಸಲು ಸಾಧ್ಯವಾಯಿತು.

ನಿಯಂತ್ರಣ ಕ್ರಮಗಳು:

ರೋಗವನ್ನು ನಿರ್ವಹಿಸಲು, ವಿಜ್ಞಾನಿಗಳು ಶಿಲೀಂಧ್ರನಾಶಕಗಳಾದ ಪ್ರೊಪಿಕೊನಜೋಲ್ ಅನ್ನು 1 ಎಂಎಲ್‌/ಎಲ್‌ ಅಥವಾ ಕಾರ್ಬೆಂಡಜಿಮ್ ಮತ್ತು ಮ್ಯಾಂಕೋಜೆಬ್ ಸಂಯೋಜನೆಯನ್ನು 2 ಗ್ರಾಂ/ಲೀ ಅನುಪಾತದಲ್ಲಿ ಶಿಫಾರಸು ಮಾಡುತ್ತಾರೆ. ಬೀಜದ ಗೆಡ್ಡೆಗಳನ್ನು ಶೇಖರಿಸುವ ಮೊದಲು ಈ ಶಿಲೀಂಧ್ರನಾಶಕದಲ್ಲಿ 30 ನಿಮಿಷಗಳ ಕಾಲಅದ್ದಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸುವುದು. ರೋಗನಿರೋಧಕ ಕ್ರಮವಾಗಿ ಪ್ರೊಪಿಕೊನಜೋಲ್ ಅಥವಾ ಟೆಬುಕೊನಜೋಲ್ 1ಎಂಎಲ್‌/ಎಲ್‌ ಅನ್ನು ನಾಟಿ ಮಾಡಿದ ನಾಲ್ಕು ತಿಂಗಳ ನಂತರ ಸಿಂಪಡಿಸುವುದು. ರೋಗಲಕ್ಷಣವಾದ ಎಲೆಗಳ ಮೇಲೆ ಕಪ್ಪುಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಹಳದಿ ಭಾಗದಿಂದ ಸುತ್ತುವರಿಯುವುದನ್ನು ಗಮನಿಸಿದರೆ, ರೋಗದ ತ್ವರಿತ ಹರಡುವಿಕೆಯನ್ನು ತಡೆಯಲು ತಕ್ಷಣ ಶಿಲೀಂಧ್ರನಾಶಕವನ್ನು ಸಿಂಪಡಿಸುವುದು. ಪೈರಿಕ್ಯುಲೇರಿಯ ಶಿಲೀಂಧ್ರವು ಅತಿ ವೇಗವಾಗಿ ಹರಡುವುದರಿಂದ ರೈತರು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವುದು ಅಗತ್ಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ಅಪ್ಪಂಗಳ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.