ತಮ್ಮ ಕ್ಷೇತ್ರದ ಬಹು ದಶಕದ ಬೇಡಿಕೆಯಾದ ಮಾಯಕೊಂಡ ನೂತನ ತಾಲೂಕು ರಚನೆಬಗ್ಗೆ ಸಾದಕ-ಬಾಧಕಗಳನ್ನು ಪರಿಶೀಲಿಸಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ, ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ತಮ್ಮ ಕ್ಷೇತ್ರದ ಬಹು ದಶಕದ ಬೇಡಿಕೆಯಾದ ಮಾಯಕೊಂಡ ನೂತನ ತಾಲೂಕು ರಚನೆಬಗ್ಗೆ ಸಾದಕ-ಬಾಧಕಗಳನ್ನು ಪರಿಶೀಲಿಸಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ, ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಕ್ಷೇತ್ರವಾದ ಮಾಯಕೊಂಡವನ್ನು ತಾಲೂಕು ಕೇಂದ್ರವಾಗಿ ಘೋಷಿಸಬೇಕೆಂಬ ಬೇಡಿಕೆ ದಶಕಗಳಿಂದಲೂ ಇದ್ದು, ಇದು ನಿನ್ನೆ, ಮೊನ್ನೆಯ ಕೂಗಲ್ಲ. ಬಹು ದಶಕಗಳಿಂದಲೂ ಇದ್ದಂತಹ ಕೂಗು. ನಾನೂ ಸಹ ಮಾಯಕೊಂಡ ತಾಲೂಕು ರಚನೆ ಬಗ್ಗೆ ಧ್ವನಿ ಎತ್ತಿದ್ದವನು ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರನ್ನು ಭೇಟಿ ಮಾಡಿ, ಮಾಯಕೊಂಡ ತಾಲೂಕು ರಚನೆ ಬಗ್ಗೆ ಚರ್ಚಿಸುತ್ತೇನೆ. ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟಿಷರ ಕಾಲದಲ್ಲಿ ಮಾಯಕೊಂಡ ಪ್ರಮುಖ ನೆಲೆಯಾಗಿತ್ತು. ಆ ಕಾಲದಲ್ಲೇ ಇಲ್ಲಿ ರೈಲ್ವೇ ನಿಲ್ದಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಂಡಿದ್ದಂತಹ ಹೋಬಳಿ ಕೇಂದ್ರವಾಗಿದೆ. ಈ ಎಲ್ಲಾ ವಿಚಾರ, ಅಂಶಗಳೂ ತಮ್ಮ ಗಮನದಲ್ಲಿದ್ದು, ತಮ್ಮ ಮಾಯಕೊಂಡ ಗ್ರಾಮವನ್ನು ನೂತನ ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಸಿಎಂ ಬಳಿ ಮನವಿ ಮಾಡುವೆ ಎಂದು ಹೇಳಿದರು.ತುಂಗಭದ್ರಾ ನದಿಯಿಂದ ಜಿಲ್ಲೆಯ 22 ಕೆರೆಗಳನ್ನು ತುಂಬಿಸುವ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡಿ, ಜನರಿಗೆ ನ್ಯಾಯ ಒದಗಿಸುವುದು ತಮ್ಮ ಪ್ರಮುಖ ಗುರಿ, ಧ್ಯೇಯ, ಆದ್ಯತೆಯಾಗಿದೆ. ಜನ ಸಾಮಾನ್ಯರು ಹಾಗೂ ರೈತರ ಬಹು ದಿನಗಳ ಬೇಡಿಕೆಯಾದ 22 ಕೆರೆಗಳನ್ನು ತುಂಬಿಸುವ ಯೋಜನೆಗೆ ಶೀಘ್ರವೆ ಚಾಲನೆ ನೀಡಲಾಗುವುದು. 22 ಕೆರೆ ತುಂಬಿಸುವ ಯೋಜನೆಗೆ ಹಿಂದೆ ಕೆಲ ತಾಂತ್ರಿಕ ತೊಡಕಾಗಿದ್ದವು. ಈಗ ಅದನ್ನೆಲ್ಲಾ ಪರಿಹರಿಸಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿವೆ ಎಂದರು.
ದಾವಣಗೆರೆ, ಜಗಳೂರು ತಾಲೂಕಿನ 22 ಕೆರೆಗಳನ್ನು ತುಂಬಿಸುವ ಯೋಜನೆಯ ಹಳೆ ಪೈಪ್ಲೈನ್ಗಳನ್ನು ಬದಲಿಸಿ, ಸಂಪೂರ್ಣ ಹೊಸ ಹಾಗೂ ಗುಣಮಟ್ಟದ ಪೈಪ್ಲೈನ್ ಅಳವಡಿಸಿ, ಕಾಮಗಾರಿ ಕೈಗೊಳ್ಳಲಾಗುವುದು. 22 ಕೆರೆಗಳ ಏತ ನೀರಾವರಿ ಯೋಜನೆ ಪೂರ್ಣಗೊಂಡರೆ ರೈತರ ಜಮೀನುಗಳಿಗೆ ಹಾಗೂ 22 ಕೆರೆಗಳಿಗೆ ಶಾಶ್ವತವಾಗಿ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ ಎಂದರು.ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಬಡವರು, ರೈತರು ಮಾತ್ರವಲ್ಲದೇ, ಹಾವೇರಿ, ವಿಜಯನಗರ, ಚಿತ್ರದುರ್ಗ ಸೇರಿದಂತೆ ನೆರೆಹೊರೆಯ ಜಿಲ್ಲೆಗಳ ಜನರು ಹೆಚ್ಚಿನದಾಗಿ ಆವಲಂಭಿಸಿದ್ದಾರೆ. ಹಾಗಾಗಿ ಆಸ್ಪತ್ಪೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕಿದೆ. ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನ್ ಹಾಗೂ ವೆಂಟಿಲೇಟರ್ಗಳ ತುರ್ತು ಅಗತ್ಯವಿದ್ದು, ಈ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದರು.
ಸರ್ಕಾರಿ ಹಾಸ್ಟೆಲ್ಗಳಲ್ಲಿನ ಸೌಲಭ್ಯಗಳ ಕೊರತೆ, ಹಾಸಿಗೆಗಳ ಅಕ್ರಮ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಈ ಹಿಂದೆ ಪರಿಶೀಲನೆ ನಡೆಸಿ ಗಮನ ಸೆಳೆಯಲಾಗಿತ್ತು. ಇದೀಗ ಸಚಿವನಾಗಿ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು. ಬಡ ಮಕ್ಕಳ ವ್ಯಾಸಂಗಕ್ಕೆ ಹಾಸ್ಟೆಲ್ ಸೌಲಭ್ಯಗಳಲ್ಲಿ ಯಾವುದೇ ಕಾರಣಕ್ಕೂ ಕೊರತೆಯಾಗಬಾರದು ಎಂದರು.ಕ್ಷೇತ್ರದ ಹಿರಿಯ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ ಅಣಜಿ ಇತರರು ಇದ್ದರು.