ಸಾರಾಂಶ
ನಗರ, ಪಟ್ಟಣಗಳಲ್ಲಿ ರಸ್ತೆ ವಿಸ್ತರಣೆ ಎಂಬುದು ಆಗದಿದ್ದರೆ ಬೆಳೆಯುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಸುರಕ್ಷಿತ ವಾಹನ ಸಂಚಾರ ಅಸಾಧ್ಯವೇ ಸರಿ. ಈ ಕಾರಣದಿಂದ ಸರ್ಕಾರಗಳು ಜನವಿರೋಧ ನಡುವೆಯೂ ಕಾಲಕಾಲಕ್ಕೆ ಯೋಜನೆಗಳ ಜಾರಿಗೊಳಿಸುತ್ತವೆ. ಇದರಿಂದ ಸಾಗರವೂ ಹೊರತಾಗಿಲ್ಲ. ಸಾಗರ ಪಟ್ಟಣದ ಸೊರಬ ರಸ್ತೆ ವಿಸ್ತರಣೆಗೆ ಜ.17 ಅಥವಾ 18ರಂದು ಸ್ಥಳೀಯರ ಜತೆ ಚರ್ಚೆ ನಡೆಸುವುದಾಗಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಸಾಗರ
ಪಟ್ಟಣದ ಸೊರಬ ರಸ್ತೆ ವಿಸ್ತರಣೆಗೆ ಕೆಲವರು ಜಾಗ ಬಿಟ್ಟುಕೊಡುವ ಸಂಬಂಧ ಕೆಲವು ಅನುಮಾನ ವ್ಯಕ್ತಪಡಿಸಿದ್ದು, ಅವರ ಜೊತೆ ಜ.17 ಅಥವಾ 18ರಂದು ಚರ್ಚೆ ನಡೆಸಿ ಶೀಘ್ರದಲ್ಲಿಯೇ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿದರು.ಸೊರಬ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ರಸ್ತೆ ವಿಸ್ತರಣೆಗೆ ಸಾಕಷ್ಟು ಜನರು ಜಾಗವನ್ನು ಬಿಟ್ಟುಕೊಟ್ಟು ನಗರಸಭೆಗೆ ಜಾಗ ನೋಂದಾವಣೆ ಮಾಡಿಕೊಟ್ಟಿದ್ದಾರೆ. ಕೆಲವರು ಪರಿಹಾರದ ಬಗ್ಗೆ ತಮ್ಮ ವಕೀಲರ ಮೂಲಕ ಮನವಿ ಸಲ್ಲಿಸಿದ್ದಾರೆ. ಎಲ್ಲರ ಮನವಿಯನ್ನು ಪರಿಶೀಲನೆ ನಡೆಸಿ, ಅಗಲೀಕರಣದ ಬಗ್ಗೆ ಅಂತಿಮ ಗಮನಹರಿಸಲಾಗುತ್ತದೆ ಎಂದು ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸೊರಬ ರಸ್ತೆ ನಿವಾಸಿಗಳು ನಮ್ಮ ಜೊತೆ ಚರ್ಚೆ ನಡೆಸಿದ್ದು, ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಆದರೆ, ಕೆಲವು ನಿಬಂಧನೆಗಳನ್ನು ಮಂಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿ, ನಿವಾಸಿಗಳ ಬೇಡಿಕೆ ಈಡೇರಿಸುವ ಬಗ್ಗೆ ಗಮನ ಹರಿಸಲಾಗುತ್ತದೆ ಎಂದರು.ಈಗಾಗಲೇ ಅನೇಕರು ತಮ್ಮ ಕಟ್ಟಡಗಳನ್ನು ತೆರವು ಮಾಡಿದ್ದಾರೆ. ಕೆಲವರು ಪರಿಹಾರ ಇನ್ನಿತರೇ ಬಗ್ಗೆ ಆಕ್ಷೇಪ ಎತ್ತಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಈ ಬಗ್ಗೆ ಚರ್ಚೆ ಮಾಡಲು ಜಿಲ್ಲಾಧಿಕಾರಿ ಸಮಯ ನಿಗದಿಗೊಳಿಸಿದ್ದು, ಸಭೆಯಲ್ಲಿ ಎಲ್ಲವೂ ಅಂತಿಮಗೊಳ್ಳುತ್ತದೆ. ಇಲ್ಲವಾದಲ್ಲಿ ಸರ್ಕಾರದಿಂದ ನೋಟಿಫಿಕೇಶನ್ ಮಾಡಿ, ಜಾಗವನ್ನು ಪಡೆಯುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಯತೀಶ್, ತಹಸೀಲ್ದಾರ್ ಚಂದ್ರಶೇಖರ್ ನಾಯಕ್, ಪೌರಾಯುಕ್ತ ಎಚ್.ಕೆ. ನಾಗಪ್ಪ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್. ಸೊರಬ ರಸ್ತೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಯು.ಜೆ. ಮಲ್ಲಿಕಾರ್ಜುನ. ವಕೀಲರಾದ ಸಂತೋಷ್ ಇನ್ನಿತರರು ಹಾಜರಿದ್ದರು.- - - -6ಕೆ.ಎಸ್.ಎ.ಜಿ.2:
ಸಾಗರ ಪಟ್ಟಣದಲ್ಲಿ ಸೊರಬ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳೀಯರ ಅಹವಾಲು ಸ್ವೀಕರಿಸಿದರು.