ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಈಗಾಗಲೇ ಸಾಲಿನ ಪೂರ್ವ ಮತ್ತು ತಡ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಬಿತ್ತನೆಯಾಗಿದ್ದ ಮುಸುಕಿನ ಜೋಳ ಬೆಳೆಯಲ್ಲಿ ಬಿಳಿ ಸುಳಿ, ಬೂಜು ರೋಗ, ಕೇದಿಗೆ ರೋಗದ ಬಾದೆ ಕಂಡು ಬಂದು ಬೆಳೆ ಹಾನಿಗೆ ಕಾರಣವಾಗಿರುತ್ತದೆ, ರೈತರು ಮುಂಜಾಗ್ರತವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಪ್ರಸಾದ ಅರಸ್ ಹೇಳಿದರು.ಪಟ್ಟಣದ ಸಮೀಪದ ಹ್ಯಾಂಡ್ ಪೋಸ್ಟಿನ ಮೈರಾಡ ಸಭಾಂಗಣದಲ್ಲಿ ನಡೆದ ರೈತರು ಮತ್ತು ಕೀಟನಾಶಕ ಗೊಬ್ಬರ ಬಿತ್ತನೆ ಬೀಜ ಮಾರಾಟಗಾರರು ಸಭೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾಡಿದರು.
ಬಿತ್ತನೆ ಬೀಜ ಮಾರಾಟಗಾರರು ಮತ್ತು ರೈತರು ಮುಂಜಾಗ್ರತವಾಗಿ ಕೃಷಿ ಇಲಾಖೆ ಜಾರಿ ಮಾಡಿರುವ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗಿದೆ ಬಿತ್ತನೆ ಮುಸುಕಿನ ಜೋಳ ಮತ್ತು ಬೆಳೆಯ ಬಗ್ಗೆ ಅರಿವು ಆಗಬೇಕಾಗಿದ್ದು,ಕಳೆದ ಸಾಲಿನಲ್ಲಿ ಹಲವೆಡೆ ಬೀಜೋಪಚಾರ ಕೈಗೊಳ್ಳದೆ ಮುಸುಕಿನ ಜೋಳ ಬಿತ್ತನೆ ಕೈಗೊಂಡಿರುವುದು, ಮೇವಿನ ಉದ್ದೇಶಕ್ಕಾಗಿ ಬೆಳೆಯುವ ಮುಸುಕಿನ ಜೋಳದ ಬಿತ್ತನೆಗೆ ಕಳೆದ ಬಾರಿಯ ಬೆಳೆಯ ಬೀಜಗಳನ್ನು ಉಪಯೋಗಿಸಿರುವುದು, ಬೆಳೆ ಪರಿವರ್ತನೆ ಮಾಡದೇ ಪ್ರತಿ ವರ್ಷ, ಪ್ರತಿ ಹಂಗಾಮಿನಲ್ಲಿ ಮುಸುಕಿನ ಜೋಳ ಬೆಳೆಯುತ್ತಿರುವುದರಿಂದ, ಬದುಗಳ ಮೇಲೆ ಅತಿಥೇಯ ಸಸ್ಯವಾಗಿ ಕಾರ್ಯನಿರ್ವಹಿಸುವ ಕಳೆಗಳನ್ನು ನಿಯಂತ್ರಣ ಮಾಡದಿರುವುದು ಹಾಗೂ ವಾತಾವರಣದಲ್ಲಿನ ಹೆಚ್ಚಿನ ಆದ್ರತೆ, ಮೋಡ ಕವಿದ ವಾತಾವರಣ ಹಾಗೂ ಹೆಚ್ಚಿನ ಮಳೆಯಿಂದಾಗಿ ಬಿಳಿ ಸುಳಿ, ಬೂಜು ರೋಗ ಬಾದೆ ಹೆಚ್ಚಾಗಲು ಕಾರಣವಾಗಿರುವುದಾಗಿ ಕೃಷಿ ವಿಜ್ಞಾನಿಗಳು ತಮ್ಮ ವರದಿಗಳಲ್ಲಿ ತಿಳಿಸಿರುತ್ತಾರೆ.
ಈ ಹಿನ್ನೆಲೆ ರೋಗ ಬಾಧೆ ಹತೋಟಿಗೆ ಈ ಕೆಳಕಂಡ ಮುಂಜಾಗೃತ ಕ್ರಮಗಳನ್ನು ಅನುಸರಿಸಲು ಶಿಫಾರಸ್ಸು ಮಾಡಿರುತ್ತಾರೆ. ಮಣ್ಣಿನಲ್ಲಿರುವ ರೋಗಾಣುಗಳ ಪ್ರಮಾಣವನ್ನು ಕಡಿಮೆ ಮಾಡಲು ಆಳವಾಗಿ ಎರಡು ಬಾರಿ ಬೇಸಿಗೆ ಉಳುಮೆ ಮಾಡುವುದು.
ಬೆಳೆ ಪರಿವರ್ತನೆ: ಮುಸುಕಿನ ಜೋಳ ಬೆಳೆಯನ್ನು ಪದೇ ಪದೇ ಅದೇ ತಾಲೂಕುಗಳಲ್ಲಿ ಬೆಳೆದರೆ, ಈ ರೋಗದ ಪ್ರಮಾಣ ಉಲ್ಬಣವಾಗುತ್ತದೆ. ಆದ್ದರಿಂದ ರಾಗಿ ಹಾಗೂ ದ್ವಿದಳ ಧಾನ್ಯಗಳಾದ ಸೋಯಾ ಅವರೆ, ಅಲಸಂದೆ, ತೊಗರಿ ಮತ್ತು ಅವರೆ ಬೆಳೆಗಳೊಂದಿಗೆ ಬೆಳೆ ಪರಿವರ್ತನೆ ಮಾಡುವುದು.
ಅತೀ ಮುಖ್ಯವಾಗಿ ಉತ್ತಮ ಬೇಸಾಯ ಪದ್ಧತಿಗಳಾದ ಭೂಮಿಗೆ ಕೊಟ್ಟಿಗೆ ಗೊಬ್ಬರ ಸೇರಿಸುವುದು, ಹಸಿರೆಲೆ ಬೆಳೆ ಗೊಬ್ಬರಗಳ ಬಳಕೆ ಜೈವಿಕ ಜೀವಾಣು ಮತ್ತು ಜೈವಿಕ ಗೊಬ್ಬರಗಳ ಬಳಕೆ ಮಾಡುವುದು. ಬಾಧಿತ ಗಿಡಗಳನ್ನು ನಿರ್ಮೂಲನೆ ಮಾಡುವುದು, ಬದುಗಳ ಮೇಲೆ ಕಳೆ ನಿರ್ವಹಣೆ ಮಾಡಿ ತಾಲೂಕಿನ ನೈರ್ಮಲ್ಯತೆ ಕಾಪಾಡುವುದು, ಸಕಾಲಕ್ಕೆ ಶಿಫಾರಸ್ಸು ಮಾಡಿದ ಗೊಬ್ಬರಗಳ ಬಳಕೆ ಮಾಡುವುದು ಹಾಗೂ ರೋಗ ನಿರೋಧಕ ತಳಿಗಳನ್ನು ಬಳಸುವಂತೆ ಅವರು ತಿಳಿಸಿದರು.ಕೀಟನಾಶಕ ಗೊಬ್ಬರ ಬಿತ್ತನೆ ಬೀಜ ಮಾರಾಟಗಾರರ ಸಂಘದಿಂದ ಅನೇಕ ಗಣ್ಯರಿಗೆ ಸನ್ಮಾನಿಸಲಾಯಿತು. ಅಧ್ಯಕ್ಷ ಲಕ್ಷ್ಮಿನರಸಿಂಹ, ಉಪಾಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಚಂದ್ರಶೇಖರ್ ಆರಾಧ್ಯ, ಅಶೋಕ, ಸಿ.ಆರ್. ರಾಜೇಂದ್ರ, ಮಂಟಲಿಂಗು, ನಿಂಗಣ್ಣ, ಬಸವರಾಜು, ಮಹೇಂದ್ರ ಗೌಡ, ಗಿರೀಶ್, ವಿವೇಕ್, ವಿಶ್ವಾಸ್ ಇದ್ದರು.