ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅರಮನೆ ಮೈದಾನದ ಬಳಿ ಪ್ರಧಾನಿ ನರೇಂದ್ರ ಮೋದಿ ಬರುವ ವೇಳೆ ಚೊಂಬು ಪ್ರದರ್ಶಿಸಿ ಪ್ರತಿಭಟನೆ ಮಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್, ಆತನ ಸಹಚರ ರೌಡಿ ಶೀಟರ್ ಜಾನಿ ವಿರುದ್ಧ ಬಿಜೆಪಿ ನಿಯೋಗವು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.20ರಂದು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಿ.ವಿ.ರಾಮನ್ ರಸ್ತೆಯಲ್ಲಿ ಬರುವಾಗ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್, ಆತನ ಸಹಚರ ರೌಡಿ ಶೀಟರ್ ಜಾನಿ ಅಲಿಯಾಸ್ ಸಿದ್ದಾಪುರ ಜಾನಿ ಹಾಗೂ ಇತರರು ಸೇರಿಕೊಂಡು ಚೊಂಬು ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ದಾರೆ.
ರೌಡಿ ಜಾನಿ ಈ ಹಿಂದೆ ಅಕ್ಟೋಬರ್ನಲ್ಲಿ ನಡೆದ ಸಿದ್ದಾಪುರ ಜಾತ್ರೆಯಲ್ಲಿ ನಲಪಾಡ್ ಜತೆ ಕಾಣಿಸಿಕೊಂಡಿದ್ದ. ಈಗಾಗಲೇ ಪ್ರತಿಭಟನೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಪೊಲೀಸರು ಆತನಿಂದ ಬಾಂಡ್ ಬರೆಸಿಕೊಂಡಿದ್ದಾರೆ. ಇನ್ನು ನಲಪಾಡ್ ವಿರುದ್ಧ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹೀಗಿದ್ದರೂ ಪ್ರಧಾನಿ ಬರುವಾಗ ಎನ್ಎಸ್ಜಿ ಭದ್ರತಾ ವ್ಯವಸ್ಥೆ ನಡುವೆಯೂ ಪ್ರತಿಭಟನೆ ಮಾಡಿದ್ದಾರೆ.ಇದು ಇಲ್ಲಿನ ಸರ್ಕಾರದ ನಾಯಕರ ಕುಮ್ಮಕ್ಕಿನಿಂದ ನಡೆದಿದೆ. ಪೊಲೀಸ್ ಅಧಿಕಾರಿಗಳ ಸಹಕಾರದಿಂದಲೇ ಘಟನಾ ಸ್ಥಳಕ್ಕೆ ಚೊಂಬು ತಂದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಇಂತಹ ಕೃತ್ಯಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಭದ್ರತಾ ವೈಫಲ್ಯದ ಘಟನೆಗಳು ಹಾಗೂ ಇನ್ನಷ್ಟು ಹೇಯ ಕೃತ್ಯಗಳು ಮರುಗಳಿಸುವ ಸಾಧ್ಯತೆ ಇರುತ್ತದೆ.
ಪ್ರಧಾನಿ ಮೋದಿ ಕಾರ್ಯಕ್ರಮದ ಭದ್ರತಾ ಉಸ್ತುವಾರಿ ವಹಿಸಿದ್ದ ಡಿಸಿಪಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಚುನಾವಣಾ ಕಾರ್ಯಗಳಿಂದ ಬಿಡುಗಡೆಗೊಳಿಸಬೇಕು. ಇಲಾಖಾ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲಾಖೆ ತನಿಖೆ ನಡೆಯುವವರೆಗೆ ಆ ಅಧಿಕಾರಿಗಳನ್ನು ಅಮಾನತಿನಲ್ಲಿ ಇರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಅವರನ್ನು ಈ ಕೂಡಲೇ ಚುನಾವಣಾ ಪ್ರಚಾರ ಕಾರ್ಯಗಳಿಂದ ಎರಡು ಹಂತದ ಚುನಾವಣೆ ಮುಗಿಯುವವರೆಗೂ ನಿರ್ಬಂಧಿಸಬೇಕು. ರೌಡಿ ಸಿದ್ದಾಪುರ ಜಾನಿಯನ್ನು ರಾಜ್ಯದಿಂದ ಗಡಿಪಾರು ಮಾಡಲು ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಮುಖ್ಯ ಚುನಾವಣಾಧಿಕಾರಿಯನ್ನು ಆಗ್ರಹಿಸಿದ್ದಾರೆ.