ಅಭಿವೃದ್ಧಿ ವೈಫಲ್ಯ, ಭ್ರಷ್ಟಾಚಾರ ಹಗರಣಗಳು ಮತ್ತು ಆಡಳಿತ ದೌರ್ಬಲ್ಯಗಳನ್ನು ಮುಚ್ಚಿಹಾಕಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ. ಇದು ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ನೇರ ದಾಳಿ ಮತ್ತು ರಾಜಕೀಯ ಹತಾಶೆಯ ಪ್ರತಿಫಲವಾಗಿದೆ ಎಂದು ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯಪಾಲರು ತಮ್ಮ ಭಾಷಣ ಪೂರ್ಣಗೊಳಿಸಿ ಹೊರಟ ವೇಳೆ ಅವರನ್ನು ಅಡ್ಡಗಟ್ಟಿ ಅಗೌರವ ತೋರಿದ ಕಾಂಗ್ರೆಸ್ ಶಾಸಕರನ್ನು ಕೂಡಲೇ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಒತ್ತಾಯಿಸಿದ್ದಾರೆ.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಒಬ್ಬ ಜನಹಿತ ಚಿಂತನೆ ರಾಜ್ಯಪಾಲರು. ದಲಿತ ವರ್ಗಕ್ಕೆ ಸೇರಿದ ಮಹಾನ್ ನಾಯಕನನ್ನು ಒಂದು ರೀತಿ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ. ಈ ಹಿಂದೆಯೂ ಅವರಿಗೆ ಅಗೌರವ ತೋರುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಆಗ ಕಾಂಗ್ರೆಸ್ ಸದಸ್ಯರೊಬ್ಬರು ಬಾಂಗ್ಲಾ ರೀತಿಯಲ್ಲಿ ದಾಳಿ ಮಾಡುವೆ ಎಂದು ಹೇಳಿದ್ದರು, ಈಗ ಅದು ನಿಜವಾಗಿದೆ. ಈ ಕಾಂಗ್ರೆಸ್ ಶಾಸಕರಿಗೆ ಸಂವಿಧಾನ ಹಾಗೂ ಸಾಂವಿಧಾನಿಕ ಹುದ್ದೆಯ ಮೇಲೆ ಗೌರವವಿಲ್ಲ ಎಂಬುದು ತೋರುತ್ತಿದೆ. ಈ ರೀತಿ ರಾಜ್ಯಪಾಲರಿಗೆ ಅಗೌರವ ತೋರಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದೊಡ್ಡ ದ್ರೋಹ, ಕಾಂಗ್ರೆಸ್ ನಾಯಕರು ನಮ್ಮ ರಾಜ್ಯದ ಘನತೆಗೂ ಸಹ ಕುಂದು ತಂದಿದ್ದಾರೆ ಎಂದು ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರು ಯಾವುದೇ ಪಕ್ಷದ ವಕ್ತಾರರಲ್ಲ, ಅವರು ಸಂವಿಧಾನದ ರಕ್ಷಕರು. ಸರ್ಕಾರದ ತಯಾರಿಸಿದ ಪಠ್ಯವನ್ನು ಯಾಂತ್ರಿಕವಾಗಿ ಓದಲೇಬೇಕು ಎಂಬ ನಿಯಮ ಸಂವಿಧಾನದಲ್ಲಿಲ್ಲ. ಸಂವಿಧಾನದ ವಿಧಿ ೧೬೩, 175 ಮತ್ತು 176 ರಾಜ್ಯಪಾಲರಿಗೆ ವಿವೇಚನಾಧಿಕಾರ ನೀಡುತ್ತವೆ. ತಪ್ಪು, ಅಸಂಬದ್ಧ ಅಥವಾ ಸಂವಿಧಾನ ವಿರೋಧಿ ಅಂಶಗಳನ್ನು ಓದದೇ ಬಿಡುವುದು ರಾಜ್ಯಪಾಲರ ಸಂವಿಧಾನಾತ್ಮಕ ಹಕ್ಕು, ಈ ಹಕ್ಕಿನ ಅಡಿಯಲ್ಲಿಯೇ ಕರ್ತವ್ಯ ನಿರ್ವಹಣೆ ಮಾಡಿದ್ದು ತಪ್ಪೇ? ಸಂವಿಧಾನ ಬದ್ಧವಾಗಿ ನಡೆದುಕೊಂಡ ರಾಜ್ಯಪಾಲರಿಗೆ ಈ ರೀತಿ ಅಗೌರವ ತೋರುವುದು ಅಕ್ಷಮ್ಯ ಅಪರಾಧ, ಸಾಂವಿಧಾನಿಕವಾಗಿ ಗೌರವಯುತ ರಾಜ್ಯಪಾಲರನ್ನು ನಾವು ಘನತೆವೆತ್ತ ರಾಜ್ಯಪಾಲರು ಎಂದು ಕರೆಯುತ್ತೇವೆ. ಆದರೆ ಈ ಕಾಂಗ್ರೆಸ್ನವರು ರಾಜ್ಯಪಾಲರಿಗೆ ಅಗೌರವ ತೋರುವ ಕೆಲಸ ಮಾಡಿದ್ದಾರೆ. ಕೂಡಲೇ ರಾಜ್ಯಪಾಲರಿಗೆ ಅಗೌರವ ತೋರಿದ ಎಲ್ಲ ಕಾಂಗ್ರೆಸ್ ಸದಸ್ಯರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಿ ಶಿಸ್ತುಕ್ರಮ ಜರುಗಿಸಬೇಕು ಎಂದು ಪ್ರಕಟನೆ ಮೂಲಕ ಒತ್ತಾಯಿಸಿದ್ದಾರೆ.ಅಭಿವೃದ್ಧಿ ವೈಫಲ್ಯ, ಭ್ರಷ್ಟಾಚಾರ ಹಗರಣಗಳು ಮತ್ತು ಆಡಳಿತ ದೌರ್ಬಲ್ಯಗಳನ್ನು ಮುಚ್ಚಿಹಾಕಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ. ಇದು ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ನೇರ ದಾಳಿ ಮತ್ತು ರಾಜಕೀಯ ಹತಾಶೆಯ ಪ್ರತಿಫಲವಾಗಿದೆ ಎಂದು ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.