ಸಾರಾಂಶ
ಸುದ್ದಿಗೋಷ್ಠಿ
ಕನ್ನಡಪ್ರಭ ವಾರ್ತೆ ಹಾಸನಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಬಿಜೆಪಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಬದಲಾವಣೆ ಮಾಡಿ ಹೊಸದಾಗಿ ನೇಮಕ ಮಾಡಲು ಯಾವ ಕಾರಣವಿದೆ? ಇದರ ಉದ್ದೇಶ ಏನು? ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಮಾಡಲಾಗಿದೆ ಎಂದು ಮಂಡಲದ ಅಧ್ಯಕ್ಷ ನಾಗರಾಜು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ಇತ್ತೀಚೆಗೆ ನಡೆದ ಬಿಜೆಪಿ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪ ನಡೆದಿದ್ದು ನನ್ನನ್ನು ಟಾರ್ಗೆಟ್ ಮಾಡಿ ಬದಲಾವಣೆ ಮಾಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರ ನೇಮಕ ಮಾಡಲಾಗಿದೆ. ಆದರೆ ಬಹುತೇಕ ಎಲ್ಲ ತಾಲೂಕುಗಳಲ್ಲಿ ಹಳೆಯ ಅಧ್ಯಕ್ಷರನ್ನು ಮರು ನೇಮಕ ಮಾಡಲಾಗಿದೆ. ಆದರೆ ಆಲೂರು ಕಟ್ಟಿದ ಕ್ಷೇತ್ರದ ತಾಲೂಕು ಅಧ್ಯಕ್ಷನಾದ ನನ್ನನ್ನು ಯಾವ ಕಾರಣಕ್ಕೆ ಬದಲಾವಣೆ ಮಾಡಿದ್ದಾರೆ’ದೆಂದು ಪ್ರಶ್ನಿಸಿದರು.‘ಸಿದ್ದೇಶ್ ನಾಗೇಂದ್ರ ಅವರು ಜಿಲ್ಲಾಧ್ಯಕ್ಷರಾದ ನಂತರ ಪಕ್ಷದ ನಿಯಮಗಳನ್ನು ಗಾಳಿಗೆ ತೂರುವ ಕೆಲಸ ಮಾಡಿದ್ದಾರೆ, ತಾಲೂಕು ಅಧ್ಯಕ್ಷರು ಇದ್ದರೂ ಮೂರನೇ ವ್ಯಕ್ತಿಯನ್ನು ಮುಂದೆ ಬಿಟ್ಟು ಕಾರ್ಯಕ್ರಮಗಳು ಸಭೆ ಸಮಾರಂಭಗಳನ್ನು ಆಯೋಜಿಸುವ ಕೆಲಸ ಮಾಡಿದ್ದಾರೆ’ ಎಂದು ದೂರಿದರು.
‘ಸಿಮೆಂಟ್ ಮಂಜು ಅವರು ಶಾಸಕರಾಗಿರುವ ಮುನ್ನ ತನು, ಮನ, ಧನವನ್ನು ಅರ್ಪಿಸಿ ಕೆಲಸ ಮಾಡಿದ್ದೇವೆ. ಜತೆಗೆ ನಾನು ಕೂಡ ನನ್ನ ಮನೆಯ ಒಡವೆಗಳನ್ನು ಬ್ಯಾಂಕ್ನಲ್ಲಿ ಗಿರವಿ ಇಟ್ಟು ಪಕ್ಷಕ್ಕೆ ಹಣ ನೀಡಿದ್ದೇನೆ. ಆದರೆ ನಮ್ಮಂಥ ನಿಷ್ಠಾವಂತ ಕಾರ್ಯಕರ್ತರನ್ನೇ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಕಡೆಗಣಿಸಿದ್ದಾರೆ’ ಎಂದು ಅಳಲು ತೋಡಿಕೊಂಡರು.‘ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರನ್ನು ನೇಮಕ ಮಾಡುವ ಪಕ್ಷದ ನಿಯಮ ಪಾಲಿಸಬೇಕು. ಆದರೆ ನನ್ನನ್ನೇ ಟಾರ್ಗೆಟ್ ಮಾಡಿ ನಮ್ಮನ್ನು ಹತ್ತಿಕ್ಕುವ ಹುನ್ನಾರ ಮಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಪಡೆದಿರುವ ಬಿಜೆಪಿ ಪಕ್ಷ ಹಾಸನ ಜಿಲ್ಲೆಯಲ್ಲಿ ವ್ಯಕ್ತಿ ನಿಷ್ಠೆ ಹೊಂದಿರುವ ಸಿದ್ದೇಶ್ ನಾಗೇಂದ್ರ, ಅವರು ಪಕ್ಷಕ್ಕೆ ಈವರೆಗೆ ಏನು ಕೊಡುಗೆ ನೀಡಿಲ್ಲ. ಕೇವಲ ಕುಟುಂಬದ ರಾಜಕೀಯ ಹಿನ್ನೆಲೆ ಇಟ್ಟುಕೊಂಡು ಬಂದಿರುವ ಸಿದ್ದೇಶ್ ಇತರರಿಗೆ ಸೇವೆ ಮಾಡಿದ್ದರೆ ಈ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ವೈಯಕ್ತಿಕ ಕೊಡುಗೆ ಪಕ್ಷಕ್ಕೆ ಏನಿದೆ ಎಂಬುದನ್ನು ಬಹಿರಂಗವಾಗಿ ಹೇಳಬೇಕು’ ಎಂದರು.
ಬಿಜೆಪಿ ಮುಖಂಡರಾದ ಭರಣ್ಣ, ಗೋವಿಂದೇಗೌಡ, ಲೋಹಿತ್ ಇದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಂಡಲದ ಅಧ್ಯಕ್ಷ ನಾಗರಾಜು.