ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲಾಡಳಿತ ಹಾಗೂ ಜಿಲ್ಲಾ ಕಂಬಳ ಸಮಿತಿಯು ಪಿಲಿಕುಳ ಕಂಬಳಕ್ಕೆ ಸಿದ್ಧತೆ ನಡೆಸುತ್ತಿದೆ. ಈ ನಡುವೆ, ಪಿಲಿಕುಳದಲ್ಲಿ ಕಂಬಳ ಆಯೋಜಿಸಿದರೆ ಮೃಗಾಲಯದಲ್ಲಿನ ಕಾಡು ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಪಿಲಿಕುಳವನ್ನು ‘ಸೈಲೆಂಟ್ ಝೋನ್’ ಆಗಿ ಘೋಷಿಸುವಂತೆ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ಅವರು ಜಿಲ್ಲಾಧಿಕಾರಿ ಹಾಗೂ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಲ್ಲೈ ಮುಗಿಲನ್ ಅವರಿಗೆ ಮನವಿ ಪತ್ರ ಬರೆದಿದ್ದಾರೆ.ಮೃಗಾಲಯದ 500 ಮೀ. ವ್ಯಾಪ್ತಿಯನ್ನು ಸೈಲೆಂಟ್ ಝೋನ್ ಎಂದು ಘೋಷಿಸುವಂತೆ ಮನವಿ ಪತ್ರದಲ್ಲಿ ಮನವಿ ಮಾಡಲಾಗಿದೆ.
ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಳಿವಿನಂಚಿನ ಪ್ರಾಣಿಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಉದ್ದೇಶದಿಂದ ಸುಮಾರು 1,250 ಬಂಧಿತ ಕಾಡು ಪ್ರಾಣಿಗಳನ್ನು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಇರಿಸಲಾಗಿದೆ. ಜನರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಸಂಶೋಧನೆ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಉತ್ತೇಜಿಸುವ ಉದ್ದೇಶವನ್ನು ಜೈವಿಕ ಉದ್ಯಾನವನ ಹೊಂದಿದೆ. ಕಂಬಳ ಮತ್ತು ಮೇಳಗಳನ್ನು ಪ್ರದರ್ಶಿಸುವುದು ಪಿಲಿಕುಳ ಮೃಗಾಲಯದ ಮೇಲೆ ಹಾನಿಕಾರಕ ಪರಿಣಾಮ ಉಂಟುಮಾಡಬಹುದು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಮೃಗಾಲಯವನ್ನು ದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳ ಪ್ರಕಾರ ನಡೆಸಲಾಗುತ್ತಿದೆ. ಸಾಕುಪ್ರಾಣಿಗಳು ಅಥವಾ ದಾರಿತಪ್ಪಿ ಪ್ರಾಣಿಗಳು ಪಿಲಿಕುಳ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ದೊಡ್ಡ ಮೃಗಾಲಯಗಳಲ್ಲಿ ಹೊರಗಿನ ಪ್ರಾಣಿಗಳಿಂದ ಮಾರಣಾಂತಿಕ ದಾಳಿ ಅಥವಾ ಇತರ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ. ಮಾತ್ರವಲ್ಲದೆ, ಹೆಚ್ಚಿನ ಡೆಸಿಬಲ್ ಶಬ್ದ ಕೂಡ ಮೃಗಾಲಯಗಳಲ್ಲಿನ ಪ್ರಾಣಿಗಳ ಸಾಮಾನ್ಯ ನಡವಳಿಕೆ ಮತ್ತು ಸಂತಾನವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಈ ಹಿಂದೆ ಪಿಲಿಕುಳದಲ್ಲಿ ಕಂಬಳ ನಡೆಸಿದಾಗ ಮೃಗಾಲಯದ ಪ್ರಾಣಿಗಳು ಅಸಹಜ ನಡವಳಿಕೆ ತೋರಿಸಿದ್ದು, ಸಹಜ ಸ್ಥಿತಿಗೆ ಮರಳಲು ಒಂದೆರಡು ವಾರಗಳೇ ಬೇಕಾಗಿತ್ತು. ಕಂಬಳದಲ್ಲಿ 2 ಕಿ.ಮೀ.ವರೆಗೆ ಧ್ವನಿವರ್ಧಕ, ಬ್ಯಾಂಡ್ ಮತ್ತು ಸುಡುಮದ್ದು ಶಬ್ದ ಕೇಳಿಸುತ್ತದೆ. ಇದು ಕಾಡು ಪ್ರಾಣಿಗಳ ‘ಸೈಲೆಂಟ್ ಝೋನ್’ ವಿಷಯಕ್ಕೆ ವಿರುದ್ಧವಾಗಿದೆ ಎಂದು ಭಂಡಾರಿ ಪತ್ರದಲ್ಲಿ ತಿಳಿಸಿದ್ದಾರೆ.
ಪಿಲಿಕುಳಕ್ಕೆ ಭೇಟಿ ನೀಡುವವರಿಗೆ ಮಾಲಿನ್ಯ ಮುಕ್ತ ವಾತಾವರಣ ಖಚಿತಪಡಿಸಿಕೊಳ್ಳುವುದು ಪ್ರಾಧಿಕಾರದ ಕರ್ತವ್ಯ. ಜತೆಗೆ ಬಂಧಿತ ಕಾಡು ಪ್ರಾಣಿಗಳು ವಿಚ್ಛಿದ್ರಕಾರಕ ಪರಿಸರ ಮತ್ತು ಶಬ್ದ ಮುಕ್ತ ವಾತಾವರಣ ಹೊಂದಿರುವುದನ್ನೂ ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಸಹ ಪ್ರಾಧಿಕಾರಕ್ಕಿದೆ. ಆದ್ದರಿಂದ ಪರಿಸರ ಸಂರಕ್ಷಣಾ ಕಾಯ್ದೆ 1986ರ ಪ್ರಕಾರ ಮೃಗಾಲಯದ 500 ಮೀ. ವ್ಯಾಪ್ತಿಯನ್ನು ನಿಶ್ಯಬ್ದ ವಲಯ ಎಂದು ಘೋಷಿಸುವುದು ಅತ್ಯಗತ್ಯ ಎಂದು ಪತ್ರದಲ್ಲಿ ತಿಳಿಸಲಾಗಿದೆ.ಪಿಲಿಕುಳದಲ್ಲಿ ಕೊನೆಯದಾಗಿ 2014ರಲ್ಲಿ ಕಂಬಳ ನಡೆಸಲಾಗಿತ್ತು. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಆನಿಮಲ್ಸ್ (ಪೇಟಾ) ಸಂಸ್ಥೆಯು ಎಲ್ಲ ರೀತಿಯ ಕಂಬಳ ಕೂಟ ನಡೆಸುವ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸಿದ ನಂತರ ಇದನ್ನು ನಿಲ್ಲಿಸಲಾಗಿತ್ತು ಎಂದು ಪತ್ರದಲ್ಲಿ ಭಂಡಾರಿ ತಿಳಿಸಿದ್ದಾರೆ.