ಸಾರಾಂಶ
ರೈತರಿಗೆ ನೀಡಲಾಗುವ ಕೃಷಿ ಚಟುವಟಿಕೆಗೆ ಪೂರಕವಾದ ಬೀಜ, ಗೊಬ್ಬರ ಯಂತ್ರೋಪಕರಣಗಳಗಳ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಕಳಪೆಯಾದಂತವುಗಳನ್ನು ವಿತರಿಸಬಾರದು
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ರೈತರಿಗೆ ನೀಡಲಾಗುವ ಕೃಷಿ ಚಟುವಟಿಕೆಗೆ ಪೂರಕವಾದ ಬೀಜ, ಗೊಬ್ಬರ ಯಂತ್ರೋಪಕರಣಗಳಗಳ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಕಳಪೆಯಾದಂತವುಗಳನ್ನು ವಿತರಿಸಬಾರದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ನಡೆದ ಮುಂದುವರಿದ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಇಲಾಖೆಯಲ್ಲಿ ಬರುವ ಕೆಲವು ಯೋಜನೆಗಳನ್ನು ಎಸ್ಸಿ/ಎಸ್ಟಿ ವರ್ಗದ ಹೆಸರು ಹೇಳಿಕೊಂಡು ಕೆಲವು ದುರುಳರು ದುರ್ಬಳಕೆ ಮಾಡುತ್ತಿದ್ದಾರೆ. ಇಂತಹವರನ್ನು ಶೀಘ್ರವಾಗಿ ಪತ್ತೆಹಚ್ಚಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದರು.ಸರ್ಕಾರದ ಯೋಜನೆಗಳ ಅನುಷ್ಠಾನ ಫಲಾನುಭವಿಗಳಿಗೆ ನಿಜವಾಗಿಯೂ ಲಾಭವಾಗುತ್ತಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸುವುದು ಅಗತ್ಯವಾಗಿದೆ. ಫಲಾನುಭವಿಗಳ ಮನೆಗೆ ಭೇಟಿ ನೀಡಿ ಅವರಿಂದ ನೇರ ಪ್ರತಿಕ್ರಿಯೆ ಪಡೆದು ವರದಿ ತಯಾರಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಹೇಗೆ ನಡೆಯುತ್ತಿದೆ ಎಂಬುದರ ಸಮಗ್ರ ತನಿಖೆ ನಡೆಸಿ, ಅದರ ಬಗ್ಗೆ ಸ್ಪಷ್ಟ ವರದಿ ಸಿದ್ಧಪಡಿಸಬೇಕು ಎಂದರು.
ತೊಗರಿ ಮತ್ತು ಕಡಲೆ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದ್ದರೂ ಖರೀದಿ ಕೇಂದ್ರಗಳಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿವೆ. ರೈತರ ಗೋಳು ಅರ್ಥ ಮಾಡಿಕೊಂಡು ಸಮಸ್ಯೆ ಪರಿಹರಿಸಿ ಎಂದರು. ಕುಡಿಯುವ ನೀರಿನ ಪೈಪುಗಳ ಗುಣಮಟ್ಟದ ಮೇಲೆ ಅಧಿಕಾರಿಗಳು ಗಮನ ಹರಿಸಿಬೇಕು. ವಿಶೇಷೆವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೈಪುಗಳ ಅಳವಡಿಕೆ ಮತ್ತು ಅವುಗಳ ಗುಣಮಟ್ಟದ ಬಗ್ಗೆ ನಿಗಾ ವಹಿಸಬೇಕಾಗಿದೆ. ಪೈಪು ಅಳವಡಿಕೆ ವೇಳೆ ರಸ್ತೆ ತೆಗೆಯಲಾಗುತ್ತದೆ. ಅದನ್ನು ತಕ್ಷಣ ಮುಚ್ಚುವ ಕ್ರಮ ಕೈಗೊಳ್ಳಬೇಕು ಎಂದು ಅವರು, ಕೃಷಿ, ಗ್ರಾಮೀಣ ಕುಡಿಯುವ ನೀರು, ಮತ್ತು ಸರ್ಕಾರಿ ಯೋಜನೆಗಳ ಪ್ರಾಮಾಣಿಕ ಕಾರ್ಯನಿರ್ವಹಣೆಗೆ ಸೂಕ್ತ ತೀರ್ಮಾನಗಳು ಕೈಗೊಳ್ಳಲು ಈ ಸಭೆ ಒಳ್ಳೆಯ ವೇದಿಕೆಯಾಗಿದೆ ಎಂದು ಹೇಳಿದರು.