ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಜೂನ್ 20ರಿಂದ ಪ್ರಕ್ರಿಯೆ ಆರಂಭವಾಗಲಿದ್ದು, ಯಾವುದೇ ಅರ್ಹ ಮತದಾರರೂ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಕಟ್ಟುನಿಟ್ಟಿನ ಹಾಗೂ ಪಾರದರ್ಶಕವಾಗಿ ಪರಿಷ್ಕರಣೆ ನಡೆಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಜೂನ್ 20ರಿಂದ ಪ್ರಕ್ರಿಯೆ ಆರಂಭವಾಗಲಿದ್ದು, ಯಾವುದೇ ಅರ್ಹ ಮತದಾರರೂ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಕಟ್ಟುನಿಟ್ಟಿನ ಹಾಗೂ ಪಾರದರ್ಶಕವಾಗಿ ಪರಿಷ್ಕರಣೆ ನಡೆಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಜೂನ್ 20 ರಿಂದ ಅಕ್ಟೋಬರ್ 7 ರವರೆಗೆ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 5.55 ಕೋಟಿ (ಶೇ.86.46) ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ನಡೆಯಲಿದೆ ಎಂದು ಹೇಳಿದರು.
59,050 ಬಿಎಲ್ಒಗಳಿಂದ ಪರಿಷ್ಕರಣೆ:ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಒಟ್ಟು 59,050 ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಒ), 5,905 ಬಿಎಲ್ಒ ಮೇಲ್ವಿಚಾರಕರು, 336 ಸಹಾಯಕ ಮತದಾರರ ನೋಂದಣಾಧಿಕಾರಿ, 224 ಮತದಾರರ ನೋಂದಣಾಧಿಕಾರಿ, 31 ಡಿಇಒ ಮತ್ತು 4 ಎಡಿಇಒಗಳನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಎಸ್ಐಆರ್ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದರು.
ಎಸ್ಐಆರ್ಗೆ ಪೂರ್ವ ತಯಾರಿಗಾಗಿ ಮತದಾರರ ವಿವರಗಳನ್ನು ಹೋಲಿಸಿ, ಖಚಿತಪಡಿಸಿಕೊಳ್ಳುವ (ಮ್ಯಾಪಿಂಗ್) ಕೆಲಸ ಶೇ 86.46 ರಷ್ಟಾಗಿದೆ. 2025ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 5.55 ಕೋಟಿ ಅರ್ಹ ಮತದಾರರು ಇದ್ದು, ಈ ಪೈಕಿ 4.80 ಕೋಟಿ ಮತದಾರರ ವಿವರಗಳನ್ನು 2002ರ ಮತದಾರರ ಪಟ್ಟಿ ಮತ್ತು ಪೋಷಕರ ಮತದಾರರ ಚೀಟಿ ವಿವರಗಳ ಜತೆಗೆ ಹೋಲಿಸಿ ನೋಡಿ ಖಚಿತಪಡಿಸಿಕೊಳ್ಳಲಾಗಿದೆ. ಎಸ್ಐಆರ್ ಆರಂಭವಾಗುವವರೆಗೂ ಮ್ಯಾಪಿಂಗ್ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.ಮತದಾರರಿಗೆ ಎರಡೆರಡು ಅರ್ಜಿ:
ಮ್ಯಾಪಿಂಗ್ ಪ್ರಕ್ರಿಯೆಯ ಆಧಾರದಲ್ಲಿ ರಾಜ್ಯದ ಎಲ್ಲ 5,55,61,565 (5.55 ಕೋಟಿ) ಮತದಾರರಿಗೂ ಗಣತಿ ನಮೂನೆಗಳ (ಎನ್ಯುಮರೇಷನ್ ಫಾರಂ) ಎರಡು ಅರ್ಜಿಗಳನ್ನು ನೀಡಲಾಗುತ್ತದೆ. ಮತದಾರರು ಎರಡೂ ಅರ್ಜಿ ಭರ್ತಿ ಮಾಡಿ, ಒಂದನ್ನು ಬಿಎಲ್ಒಗಳಿಗೆ ನೀಡಬೇಕು ಮತ್ತು ಇನ್ನೊಂದನ್ನು ತಮ್ಮ ಬಳಿಯೇ ಇರಿಸಿಕೊಳ್ಳಬೇಕು. ಆ ಎರಡು ಅರ್ಜಿಗಳಿಗೂ ಬಿಎಲ್ಒ ಮತ್ತು ಮತದಾರರು ಕಡ್ಡಾಯವಾಗಿ ಸಹಿ ಮಾಡಬೇಕಾಗುತ್ತದೆ. ಕ್ಯೂಆರ್ ಕೋಡ್ ಸಹಿತ ಭಾಗಶಃ ಮುದ್ರಿತ ಅರ್ಜಿಯನ್ನು ಬಿಎಲ್ಒಗಳು ಮತದಾರರಿಗೆ ತಲುಪಿಸುತ್ತಾರೆ. ಭರ್ತಿ ಮಾಡಿದ ಬಳಿಕ ಅದನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಿದ್ದಾರೆ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋದರೆ, ಈ ಅರ್ಜಿಯ ಆಧಾರಲ್ಲೇ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.‘ಬಿಎಲ್ಒಗಳು ಗಣತಿ ನಮೂನೆಗಳನ್ನು ಪಡೆದುಕೊಂಡ ನಂತರ, ಅವುಗಳನ್ನು ಪರಿಶೀಲಿಸಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ವಿವರ ತಪ್ಪಾಗಿದ್ದರೆ, ಆಕ್ಷೇಪಣೆ ಸಲ್ಲಿಸಬಹುದು. ಅದನ್ನು ಪರಿಶೀಲಿಸಿ, ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟುಹೋಗಿದ್ದರೆ ಮತದಾರರು ಜಿಲ್ಲಾಧಿಕಾರಿ ಹಂತದ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ನಂತರದ ಹಂತದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೂ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ವಿವರಿಸಿದರು.
ನೋಟಿಸ್ ನೀಡಿಕೆ:ಮತದಾರರ ಹೆಸರು, ದಾಖಲಾತಿ ಸರಿ ಇಲ್ಲದ ಮತದಾರರಿಗೆ ನೋಟಿಸ್ ಕೊಡಲಾಗುತ್ತದೆ. ನೋಟಿಸ್ ಕೊಟ್ಟ ಬಳಿಕ ಕೆಲವು ದಾಖಲಾತಿಗಳನ್ನು ಅವರು ಕೊಡಬೇಕಾಗುತ್ತದೆ. ಹಲವು ರೀತಿಯ ದಾಖಲಾತಿಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರಿಗೆ ನೋಟಿಸ್ ನೀಡಲಾಗುವುದು. ಯಾವ ಕಡೆಯಿಂದ ಅರ್ಜಿ ಭರ್ತಿ ಮಾಡಿ ನೀಡಲಾಗುತ್ತದೆಯೋ ಅದನ್ನು ಉಳಿಸಿಕೊಂಡು ಅರ್ಜಿ ಬರದೆ ಇರುವ ಕಡೆ ಮತದಾರರ ಪಟ್ಟಿ ಸ್ವಯಂ ಆಗಿ ರದ್ದಾಗಲಿದೆ ಎಂದು ತಿಳಿಸಿದರು. ಎಸ್ಐಆರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಆಯಾ ಜಿಲ್ಲಾ ಚುನಾವಣಾಧಿಕಾರಿಗಳ ವೆಬ್ಸೈಟ್ ಅಥವಾ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ಜಾಲತಾಣವನ್ನು ವೀಕ್ಷಿಸಬಹುದು ಎಂದು ಹೇಳಿದರು.
ನೋಟಿಸ್ಗೆ ಹೆದರಬೇಕಾಗಿಲ್ಲ:2002ರ ಮತದಾರರ ಪಟ್ಟಿಯಲ್ಲಿ ನೀಡಿದ ಮಾಹಿತಿಗೂ ಈಗ ನೀಡುವ ಮಾಹಿತಿಗೂ ತಾಳೆಯಾಗದೇ ಇದ್ದರೆ ನೋಟಿಸ್ ನೀಡಲಾಗುತ್ತದೆ. ಸೂಕ್ತ ದಾಖಲೆ ಸಲ್ಲಿಸಿದರೆ ಅದನ್ನು ಸರಿಪಡಿಸಲಾಗುತ್ತದೆ. ನೋಟಿಸ್ ನೀಡುವುದು ಹೆಸರು ತೆಗೆದು ಹಾಕುವುದಕ್ಕಲ್ಲ, ಮಾಹಿತಿಗಳನ್ನು ಸರಿಪಡಿಸುವುದಕ್ಕಾಗಿ ಎಂದರು.
ಸಹಾಯ ಕೇಂದ್ರ ಆರಂಭ:ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಹಾಯ ಕೇಂದ್ರ (ವೋಟರ್ ಫೆಸಿಲಿಟಿ ಸೆಂಟರ್) ತೆರೆಯಲಾಗುತ್ತದೆ. ಜತೆಗೆ ಜಿಲ್ಲೆ ಹಾಗೂ ರಾಜ್ಯಮಟ್ಟದ ಹೆಲ್ಪ್ಲೈನ್ ಇರಲಿದೆ. ಸ್ವಯಂ ಸೇವಕರ ಮೂಲಕ ಪ್ರಕ್ರಿಯೆಯಲ್ಲಿ ಭಾಗಿಯಾಗಲು ನೆರವು ಪಡೆಯಬಹುದು.
ಬಾಕ್ಸ್...25,284 ಬೂತ್ ಮಟ್ಟದ ಏಜೆಂಟರ ನೇಮಕ
25,284 ಬೂತ್ ಲೆವೆಲ್ ಏಜೆಂಟ್ಗಳನ್ನು ರಾಜಕೀಯ ಪಕ್ಷಗಳು ನೇಮಕ ಮಾಡಿ ಲಿಸ್ಟ್ ಕೊಟ್ಟಿದ್ದಾರೆ. ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸಲು ಎಲ್ಲ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿಯೊಂದು ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟ್ರನ್ನು ನೇಮಕ ಮಾಡಬೇಕು. ಇದರಿಂದ ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಸಹಕಾರಿಯಾಗಲಿದೆ ಎಂದು ಅನ್ಬುಕುಮಾರ್ ಹೇಳಿದರು.ಸಾರ್ವಜನಿಕರು ಸಹಕಾರ ನೀಡಬೇಕು:
ಮನೆ ಮನೆಗೆ ಭೇಟಿ ನೀಡುವ ಬಿಎಲ್ಒಗಳಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಗಣತಿ ನಮೂನೆಗಳನ್ನು ವಿತರಿಸುವ ಮತ್ತು ಸಂಗ್ರಹಿಸುವ ವೇಳೆ ನಿಖರವಾದ ಮಾಹಿತಿ ನೀಡುವುದು ಅತ್ಯಗತ್ಯ. ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಗಳಿಲ್ಲದಂತೆ ನೋಡಿಕೊಳ್ಳಲು ತಾಂತ್ರಿಕ ಮರುಹೊಂದಾಣಿಕೆ ಪ್ರಕ್ರಿಯೆಗಳನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.---
ಹೊಸ ಮತದಾರರಿಗೂ ಅವಕಾಶಅಕ್ಟೋಬರ್ 1, 2026ಕ್ಕೆ 18 ವರ್ಷ ತುಂಬುವ ಯುವಕರು ಸಹ ಈ ಬಾರಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹರಾಗಿರುತ್ತಾರೆ. ಬಿಎಲ್ಒಗಳ ಬಳಿಯೇ ಫಾರಂ 6 ಲಭ್ಯವಿರಲಿದೆ. ಸೂಕ್ತ ದಾಖಲೆಯೊಂದಿಗೆ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ಬಾಕ್ಸ್...ಅ.7 ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ
ಸಿದ್ದತೆ ಮತ್ತು ಮುದ್ರಣ ಕಾರ್ಯ: ಜೂನ್ 20-ಜುಲೈ 29ಮತಗಟ್ಟೆ ಅಧಿಕಾರಿಗಳ ಮನೆ ಮನೆ ಭೇಟಿ: ಜೂನ್ 30-ಜುಲೈ 29
ಮತಗಟ್ಟೆಗಳ ತಾರ್ತಿಕ ಮರುಹೊಂದಾಣಿಕೆ: ಜುಲೈ 29 ರೊಳಗೆಕರಡು ಮತದಾರರ ಪಟ್ಟಿ ಪ್ರಕಟ ಆಗಸ್ಟ್ 5
ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿ: ಆಗಸ್ಟ್ 5- ಸೆಪ್ಟೆಂಬರ್ 4ನೋಟಿಸ್ ಹಂತ ಹಾಗೂ ಹಕ್ಕು, ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ: ಆಗಸ್ಟ್ 5-ಅಕ್ಟೋಬರ್ 3
ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 7 ರಂದು ಪ್ರಕಟ