ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಸಾಮಾಜಿಕ ಕಳಕಳಿಯ ಆಧಾರದ ಮೇಲೆ ಹಾಗೂ ವೃದ್ಧಾಶ್ರಮದ ವಾಸಿಗಳ ಕೋರಿಕೆಯ ಮೇರೆಗೆ ವೃದ್ಧರಿಗೆ ಅಗತ್ಯವಿರುವ ಪರಿಕರಗಳನ್ನು ವಿರಾಜಪೇಟೆ ಮುತ್ತಪ್ಪನ್ ಮಲಯಾಳಿ ಸಮಾಜಂ ವಿತರಿಸಿತು.ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜಂ ವಿರಾಜಪೇಟೆ ವತಿಯಿಂದ ಹೆಗ್ಗಳ ಗ್ರಾಮದ ಸ್ನೇಹ ಭವನ್ ಮಹಿಳಾ ವೃದ್ಧಾಶ್ರಮಕ್ಕೆ ಗಾಲಿ ಕುರ್ಚಿ ಮತ್ತು ವಾಟರ್ ಫಿಲ್ಟರ್ ವಿತರಣೆ ಮಾಡಲಾಯಿತು.
ಪರಿಕರ ವಿತರಣಾ ಕಾರ್ಯಕ್ರಮದ ಬಳಿಕ ನಗರದ ಮೀನುಪೇಟೆಯಲ್ಲಿರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಸಭಾಂಗಣದಲ್ಲಿ ಸರ್ವ ಸದಸ್ಯರ ಮಹಾಸಭೆ ನಡೆಯಿತು.ಮಹಾಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜಂ ಅಧ್ಯಕ್ಷ ಪಿ.ಜಿ. ಸುಮೇಶ್, ಈ ಮೊದಲು ಸಂಘವು ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತಿತ್ತು. ಸರ್ವ ಸದಸ್ಯರ ಒಪ್ಪಿಗೆ ಪಡೆದು ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜಂ ಎಂದು ಬದಲಾವಣೆಗೊಂಡಿದೆ. ಶ್ರೀ ಮುತ್ತಪ್ಪನ್ ದೇವರ ಕೃಪೆ ಮತ್ತು ದೇವಾಲಯದ ಆಡಳಿತ ಮಂಡಳಿಯ ಪರಿಪೂರ್ಣ ಸಹಕಾರದೊಂದಿಗೆ ಸಂಘಟನೆಯು ಬಲಪ್ರದಗೊಂಡಿದೆ. ಓಣಂ ಅಚರಣೆಗೆ ಮಾತ್ರ ಸಿಮಿತವಾಗದೆ ಸಂಘವು ಜನಾಂಗ ಬಾಂಧವರ ಎಳಿಗೆ ಮತ್ತು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ನ 15 ವರ್ಷಗಳನ್ನು ಪೂರೈಸಿದೆ. ಸಂಘದಲ್ಲಿ ಮರಣನಿಧಿ ಸ್ಥಾಪನೆಗಾಗಿ ನೂತನ ಬೈಲಾ ತಿದ್ದುಪಡಿ ಮಾಡಿಸಿ ಮರಣ ನಿಧಿಯನ್ನು ನೀಡಲಾಗುತ್ತದೆ. ಮುಂದೆಯೂ ಸಂಘಟಣೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಜನಪರ ಕಾರ್ಯಕ್ರಮಗಳಿಗೆ ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.ಕಾರ್ಯದರ್ಶಿ ಸಿ.ಆರ್. ಬಾಬು, ವಾರ್ಷಿಕ ಲೆಕ್ಕಪತ್ರ ಮಂಡಣೆ ಮಾಡಿದರು. ನಂತರ ಮಾತನಾಡಿ, ಜ.21ರಂದು ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಏಳನೇ ವರ್ಷದ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು ಶ್ರೀ ಮುತ್ತಪ್ಪನ್ ವೆಳ್ಳಾಟಂ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತದೆ. ಸರ್ವರೂ ಸಹಕರಿಸುವಂತೆ ಮನವಿ ಮಾಡಿದರು.ಮಹಾಸಭೆಯ ವೇದಿಕೆ ಉಪಾಧ್ಯಕ್ಷ ಸಜೀವನ್ ಸಿ.ಆರ್., ಗೌ.ಅಧ್ಯಕ್ಷ ಪದ್ಮನಾಭ, ಕೋಶಾಧಿಕಾರಿ ಟಿ.ಆರ್. ಗಣೇಶ್, ಸಹ ಕಾರ್ಯದರ್ಶಿ ರಂಜೀತ್, ಸಲಹೆಗಾರರಾದ ಪಿ.ಜೆ. ವಿಶ್ವನಾಥ್ ಉಪಸ್ಥಿತರಿದ್ದರು.ಮಹಾಸಭೆ ಮತ್ತು ವೃದ್ಧಾಶ್ರಮಕ್ಕೆ ಪರಿಕರ ವಿತರಣಾ ವೇಳೆ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜಂನ ಪದಾಧಿಕಾರಿಗಳು, ಸದಸ್ಯರು, ಜನಾಂಗ ಬಾಂಧವರು ಹಾಜರಿದ್ದರು.