ಸಾರಾಂಶ
ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ನಗರದ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ನಗರದ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, 1 ಲಕ್ಷ ರು.ನಲ್ಲಿ ಆರಂಭಿಸಿದ ಶ್ರೀರಾಮ್ ಫೈನಾನ್ಸ್ ಸಂಸ್ಥೆ ಇಂದು 2.50 ಲಕ್ಷ ಕೋಟಿ ರು.ಗೂ ಅಧಿಕ ವಹಿವಾಟು ನಡೆಸುತ್ತಿದೆ. ಶ್ರೀರಾಮ ಫೈನಾನ್ಸ್ನ ಸಂಸ್ಥಾಪಕ ತ್ಯಾಗರಾಜನ್ ಅವರ ಜೀವನ ಮೌಲ್ಯ, ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ತ್ಯಾಗರಾಜನ್ ಅವರ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು. ಶ್ರೀರಾಮ್ ಫೈನಾನ್ಸ್ ನೀಡುವ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳು ಓದಿಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಶ್ರೀರಾಮ್ ಫೈನಾನ್ಸ್ನ ಝೋನಲ್ ಬಿಸಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಾಂಚನ್ ಮೋಟಾರ್ಸ್ನ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ರಾಜ್ ಕಾಂಚನ್, ಉಡುಪಿ ತಹಸೀಲ್ದಾರ್ ಪಿ.ಆರ್. ಗುರುರಾಜ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಪ್ರಾಧ್ಯಾಪಕಿ ಡಾ.ನಿಕೇತನ, ಹೆಗ್ಡೆ ಮೋಟಾರ್ ಟ್ರಾನ್ಸ್ಪೋರ್ಟ್ ಮಾಲೀಕ ಗಣನಾಥ ಹೆಗ್ಡೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಬಿಲ್ಲವ ಮುಖಂಡ ಮಾಧವ ಬನ್ನಂಜೆ ಆಗಮಿಸಿದ್ದರು.ಶ್ರೀರಾಮ್ ಫೈನಾನ್ಸ್ನ ಕಾನೂನು ಸಲಹೆಗಾರ ಉಲ್ಲಾಸ್ ನಾಯಕ್, ಶ್ರೀರಾಮ್ ಫೈನಾನ್ಸ್ನ ನಾಗರಾಜ್ ಬಿ., ಗಣಪತಿ ನಾಯಕ್, ದಿನೇಶ್ ನಾಯ್ಕ್, ಸುರೇಶ್ ಶೆಟ್ಟಿ, ಉಡುಪಿ ಶಾಖಾಧಿಕಾರಿ ಸಂದೀಪ್, ಕಾರ್ಕಳ ಶಾಖಾಧಿಕಾರಿ ವಿಕೇಶ್ ಸುವರ್ಣ, ಕುಂದಾಪುರ ಶಾಖಾಧಿಕಾರಿ ರಘು ಮಡಿವಾಳ ಉಪಸ್ಥಿತರಿದ್ದರು. ಸಂಸ್ಥೆಯ ವಿಭಾಗೀಯ ಅಧಿಕಾರಿ ಸದಾಶಿವ ಅಮೀನ್ ಕಟ್ಟೆಗುಡ್ಡೆ ಸ್ವಾಗತಿಸಿದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.