ಸಾರಾಂಶ
ಬಳ್ಳಾರಿ: ಜಿಲ್ಲೆಯ ರೈತರು ಸಿರಿಧಾನ್ಯ ಬೆಳೆಯಲು ಆಸಕ್ತಿ ವಹಿಸಬೇಕು. ಸಿರಿಧಾನ್ಯ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ, ಸಂಸ್ಕರಣಾ ಘಟಕಗಳ ಸ್ಥಾಪನೆ ಸೇರಿದಂತೆ ಎಲ್ಲ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ರಾಜ್ಕುಮಾರ್ ರಸ್ತೆಯ ಸರ್ಕಾರಿ (ಮುನಿಸಿಪಲ್) ಪದವಿಪೂರ್ವ ಕಾಲೇಜ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರಕ್ಕೆ ಸಿರಿಧಾನ್ಯಗಳ ರಾಶಿಗೆ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಮಾನಗಳಲ್ಲಿ ಮಳೆಯ ಕೊರತೆ ಹೆಚ್ಚು ಕಂಡುಬರುತ್ತಿದೆ. ಅದಕ್ಕಾಗಿ ರೈತರು ಹವಾಮಾನಕ್ಕೆ ಅನುಗುಣವಾಗಿ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದಾರೆ. ಭತ್ತದ ಜತೆಗೆ ಸಿರಿಧಾನ್ಯ ಬೆಳೆಗಳಾದ ಸಜ್ಜೆ, ನವಣೆ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಸಹ ಬೆಳೆಯಬೇಕು ಎಂದರು.
ಸಿರಿಧಾನ್ಯಗಳ ಬಗ್ಗೆ ಮಹಾನಗರಗಳಲ್ಲಿನ ಸಾರ್ವಜನಿಕರು ಹೆಚ್ಚು ಅರಿವು ಹೊಂದಿದ್ದಾರೆ. ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯಯುತ ಜೀವನಕ್ಕೆ ಸಾಕಷ್ಟು ಪ್ರಯೋಜನೆಗಳಿವೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಮೊದಲೇ ನಮ್ಮ ಪೂರ್ವಜರು ಸಿರಿಧಾನ್ಯಗಳ ಮಹತ್ವ ಅರಿತುಕೊಂಡಿದ್ದರು. ಹಾಗಾಗಿ, ಅವರು ಸಿರಿಧಾನ್ಯಗಳ ಸೇವನೆಯಿಂದ ಗಟ್ಟಿ ಮುಟ್ಟಾಗಿ ಸದೃಢ ಆರೋಗ್ಯವಂತರಾಗಿರುತ್ತಿದ್ದರು. ಆದರೆ, ಈಗ ಕಲಬೆರಕೆ ಆಹಾರ ಸೇವನೆಯಿಂದ ಅನೇಕ ರೀತಿಯ ರೋಗಗಳು ಬರುತ್ತಿವೆ. ದೈನಂದಿನ ಆಹಾರ ಪದ್ಧತಿಯಲ್ಲಿ ನಾವೆಲ್ಲರೂ ಸಿರಿಧಾನ್ಯಗಳ ಬಳಸಿಕೊಂಡು ಆರೋಗ್ಯವಂತರಾಗೋಣ ಎಂದು ತಿಳಿಸಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಮಾತನಾಡಿ, 2023ರ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಯಿತು. ಸಿರಿಧಾನ್ಯಗಳ ಮಹತ್ವವನ್ನು ಸಾರ್ವಜನಿಕರಲ್ಲಿ ಇನ್ನೂ ಹೆಚ್ಚು ಹೆಚ್ಚು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಸೇವನೆಯಿಂದ ರೋಗ-ರುಜಿನಗಳು ಹೆಚ್ಚಾಗಿ ಕಂಡು ಬರುತ್ತಿವೆ. ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.ಪ್ರಾಸ್ತಾವಿಕ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ಕೆ.ಎಂ. ಸೋಮಸುಂದರ್,
ದೇಶದಲ್ಲಿ 142 ಕೋಟಿ ಜನಸಂಖ್ಯೆ ಇದೆ. 332 ಮಿಲಿಯನ್ ಟನ್ನಷ್ಟು ಆಹಾರ ಉತ್ಪಾದನೆ ಮಾಡುವ ಮೂಲಕ ಸ್ವಾವಲಂಬನೆ ಆಗಿದ್ದೇವೆ. ಮುಂದಿನ 5 ವರ್ಷಗಳವರೂ ಪ್ರತಿಯೊಬ್ಬರಿಗೆ ಒದಗಿಸುವಷ್ಟು ಆಹಾರ ನಮ್ಮಲ್ಲಿದೆ. ಆದರೆ ಪೋಷಕಾಂಶಯುಕ್ತ ಆಹಾರ ಸಿಗುತ್ತಿಲ್ಲ ಎಂದರು.ಸಿರಿ ಎಂದರೆ ಸಂಪತ್ತು. ಅಂತಹ ಸಿರಿಧಾನ್ಯಗಳಾದ ಸಾಮೆ, ನವಣೆ, ರಾಗಿ, ಸಜ್ಜೆ, ಊದಲು ಪೌಷ್ಟಿಕಯುಕ್ತವಾಗಿದೆ. ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚು ಉಪಯುಕ್ತವಾಗಿವೆ. ಸಿರಿಧಾನ್ಯ ಬೆಳೆ ಬೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ರೈತರು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಗಣ್ಯರು ಸಿರಿಧಾನ್ಯ ಬೆಳೆಗಳ ಉತ್ಪಾದನಾ ತಾಂತ್ರಿಕತೆ ಮತ್ತು ಅವುಗಳ ಮೌಲ್ಯವರ್ಧನೆ ಕುರಿತ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು. ಬಳಿಕ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ರಾಮಪ್ಪ ಕೆ.ಟಿ. ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕೃಷಿಕ ಸಮಾಜ ಉಪಾಧ್ಯಕ್ಷೆ ಎಸ್.ಕೆ. ವಿಶಾಲಾಕ್ಷಿ, ರಾಜ್ಯ ಪ್ರತಿನಿಧಿ ಕೃಷಿಕ ಸಮಾಜದ ಸುರೇಶ ನಂದಿ, ಉಪ ಕೃಷಿ ನಿರ್ದೇಶಕ ಮಂಜುನಾಥ ಎಸ್.ಎನ್., ಸಹಾಯಕ ಕೃಷಿ ನಿರ್ದೇಶಕ ದಯಾನಂದ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಎಲ್ಲ ರೈತ ಮತ್ತು ಇತರೆ ಸಂಘ-ಸಂಸ್ಥೆಗಳು, ಪ್ರಗತಿ ಪರ ರೈತರು ಮತ್ತು ಮಹಿಳಾ ರೈತರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸಿರಿಧಾನ್ಯ ಕಾರ್ಯಾಗಾರ ಅಂಗವಾಗಿ ಮುನ್ಸಿಪಲ್ ಕಾಲೇಜ್ ಮೈದಾನದ ಆವರಣದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳ ಮಳಿಗೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ವಿವಿಧ ಕೃಷಿ ಪರಿಕರಗಳ ಮಳಿಗೆಗಳನ್ನು ನಿರ್ಮಿಸಲಾಗಿತ್ತು.ಮೈಸೂರಿನಿಂದ ಬಂದು ನಾಡಗೀತೆ ಹಾಡಿದರು
ಸಿರಿಧಾನ್ಯಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಆಹ್ವಾನಪತ್ರಿಕೆಯಲ್ಲಿ ಸಚಿವರು, ಶಾಸಕರು ಹಾಗೂ ಸಂಸದರ ಹೆಸರುಗಳಿದ್ದವು. ಆದರೆ, ಯಾರೂ ಬರಲಿಲ್ಲ. ಸಮಾರಂಭಕ್ಕೆ ಪ್ರೇಕ್ಷಕರ ಕೊರತೆ ಕಾಡಿತು. ಹೀಗಾಗಿ ಪಕ್ಕದ ಮುನ್ಸಿಪಲ್ ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಕರೆತಂದು ಪ್ರೇಕ್ಷಕರ ಕೊರತೆಯನ್ನು ನೀಗಿಸಿಕೊಳ್ಳಲಾಯಿತು. ಕಾರ್ಯಕ್ರಮ ಶುರುಮುನ್ನ ಜರುಗಿದ ಜಾನಪದ ಗೀತೆಗಳ ಗಾಯನ, ನಾಡಗೀತೆ ಹಾಗೂ ರೈತಗೀತೆ ಹಾಡಲು ಮೈಸೂರಿನ ಕಡೆಯವರನ್ನು ಕರೆಸಲಾಗಿತ್ತು. ಜಿಲ್ಲೆಯ ಕಲಾವಿದರನ್ನು ಬಿಟ್ಟು ಹೊರ ಜಿಲ್ಲೆಯವರನ್ನು ಕರೆಸಿದ್ದು ಯಾಕೆ ಎಂಬ ಪ್ರಶ್ನೆ ಮೂಡಿತು.