ದೊಡ್ಡಬಳ್ಳಾಪುರ: ಜನಗಣತಿ-2027ಕ್ಕೆ ದೇಶ ಸಜ್ಜಾಗಿದ್ದು, ಭಾರತದ 16ನೇ ಜನಗಣತಿ ಮತ್ತು ಸ್ವಾತಂತ್ರ್ಯದ ನಂತರದ 8ನೇ ಜನಗಣತಿ ಇದಾಗಿದೆ. ಈ ಬಾರಿಯ ಜನಗಣತಿಯು ಎರಡು ಹಂತದಲ್ಲಿ ನಡೆಯಲಿದ್ದು ಬರುವ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿರುವ ಮೊದಲ ಹಂತದ ಮನೆಗಳ ಪಟ್ಟಿ ಮತ್ತು ವಸತಿ ಗಣತಿಯನ್ನು ಒಳಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಜನಗಣತಿ-2027 ಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಚಾರ್ಜ್ ಅಧಿಕಾರಿಗಳಿಗೆ ಸೋಮವಾರ ಆರಂಭವಾದ ಮೂರು ದಿನಗಳ ಕಾಲ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎರಡನೇ ಹಂತದ ಜನಸಂಖ್ಯಾ ಗಣತಿಯು ಫೆಬ್ರವರಿ 9, 2027ರಿಂದ ಫೆಬ್ರವರಿ 28, 2027ರವರೆಗೆ

ನಡೆಯಲಿದೆ. ಈ ಹಿಂದೆ 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿತ್ತು. ಬಳಿಕ 2021ರಲ್ಲಿ ಜನಗಣತಿ ನಡೆಯಬೇಕಾಗಿತ್ತು. ಆದರೆ, ಕೋವಿಡ್ ಕಾರಣಕ್ಕೆ 10 ವರ್ಷಗಳಿಗೆ ಒಮ್ಮೆ ನಡೆಯಬೇಕಾದ ಜನಗಣತಿ ನಡೆದಿರಲಿಲ್ಲ. ಇದೀಗ 2026-27ನೇ ಸಾಲಿನಲ್ಲಿ ಜನಗಣತಿ ನಡೆಯುತ್ತಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಏಪ್ರಿಲ್ 1ರಿಂದ 15 ವರೆಗೆ ಸಾರ್ವಜನಿಕರು ಜನಗಣತಿ ಆ್ಯಪ್ ಅಥವಾ ಪೋರ್ಟಲ್ ಮೂಲಕ ಸ್ವಯಂ ಮಾಹಿತಿ ದಾಖಲಿಸಿಕೊಳ್ಳಬಹುದು. ನಂತರ ಏಪ್ರಿಲ್ 16ರಿಂದ ಮೇ 16ರವರೆಗೆ ಗಣತಿದಾರರು ಮನೆಪಟ್ಟಿ, ಮನೆ ಗಣತಿ ಕ್ಷೇತ್ರ ಕಾರ್ಯ ಮಾಡಲಿದ್ದಾರೆ. ಗಣತಿದಾರರ ಸ್ಮಾರ್ಟ್ ಫೋನ್ ಮೀಸಲಾದ ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಫ್‌ಲೈನ್‌ನಲ್ಲಿಯೂ ಈ ಆ್ಯಪ್ ಕೆಲಸ ಮಾಡಲಿದ್ದು, ನೆಟ್‌ವರ್ಕ್ ವ್ಯಾಪ್ತಿಗೆ ಬಂದಾಗ ಸಂಗ್ರಹಿಸಿದ ಮಾಹಿತಿಗಳು ಸರ್ವ‌ರ್‌ಗೆ ಸಂಯೋಜನೆ ಆಗಲಿವೆ. ಗಣತಿ ಪ್ರಕ್ರಿಯೆಯನ್ನು

ಆರಂಭದಿಂದ ಮುಕ್ತಾಯದವರೆಗೆ ನಿರ್ವಹಿಸಲು ಜನಗಣತಿ ನಿರ್ವಹಣೆ ಮತ್ತು ಮಾನಿಟರಿಂಗ್ ಸಿಸ್ಟಂ(ಸಿಎಂಎಂಎಸ್) ಎಂಬ ವಿಶೇಷ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.


ಜನಗಣತಿಗೆ ಅಧಿಕಾರಿಗಳ ನೇಮಕ:

ಜನಗಣತಿ ಸಲುವಾಗಿ ಬ್ಲಾಕ್ ರಚಿಸಲಾಗಿದ್ದು,150 ರಿಂದ 200 ಮನೆಗಳು ಅಥವಾ 700 ರಿಂದ 800

ಜನಸಂಖ್ಯೆಗೆ ಓರ್ವ ಗಣತಿದಾರರನ್ನು ಮತ್ತು ಪ್ರತಿ ಆರು ಜನ ಗಣತಿದಾರರಿಗೆ ಓರ್ವ ಮೇಲ್ವಿಚಾರಕರನ್ನು ನೇಮಿಸಲಾಗಿದೆ.

ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು, ಜಿಲ್ಲಾ ಜನಗಣತಿ ಅಧಿಕಾರಿಗಳಾಗಿ ಅಪರ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಗಳಾಗಿ ಜಿಪಂ ಮುಖ್ಯ ಯೋಜನಾಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು,ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಉಪ ವಿಭಾಗಾಧಿಕಾರಿಗಳು ಉಪ ವಿಭಾಗ ಹಂತದ ಚಾರ್ಜ್ ಅಧಿಕಾರಿಗಳಾಗಿ, ಗ್ರಾಮೀಣ ಪ್ರದೇಶದ ಚಾರ್ಜ್ ಅಧಿಕಾರಿಗಳಾಗಿ ತಹಶೀಲ್ದಾರರು,ನಗರ ಪ್ರದೇಶಕ್ಕೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಚಾರ್ಜ್ ಅಧಿಕಾರಿಗಳಾಗಿರುತ್ತಾರೆ ಎಂದು ವಿವರಿಸಿದರು.

ಮೊದಲ ಹಂತದಲ್ಲಿ ಮನೆ ಗಣತಿ:

ಮೊದಲ ಹಂತದಲ್ಲಿ ಮನೆ ಗಣತಿ ಮಾತ್ರ ನಡೆಯಲಿದ್ದು, ಕ್ಷೇತ್ರ ಮಟ್ಟದ ಗಣತಿದಾರರು ಎಚ್‌ಎಲ್‌ಬಿ (ಹೌಸ್ ಲಿಸ್ಟಿಂಗ್ ಬ್ಲಾಕ್) ಕ್ರಿಯೇಟರ್ ಆ್ಯಪ್ ಬಳಸಿ ಪ್ರತಿ ಬ್ಲಾಕ್‌ನ ಮನೆಗಳ ಲೊಕೇಶನ್ ಮತ್ತು ವ್ಯಾಪ್ತಿಯನ್ನು ಜಿಯೋ ಟ್ಯಾಗಿಂಗ್‌ ಮೂಲಕ ಗುರುತಿಸಲಿದ್ದಾರೆ. ಮೊದಲ ಹಂತದಲ್ಲಿ 33 ಪ್ರಶ್ನೆ ಒಳಗೊಂಡಿದ್ದು ಮನೆಗಳ ಸಂಖ್ಯೆ, ಗೋಡೆ, ಛಾವಣಿ ನಿರ್ಮಾಣಕ್ಕೆ ಬಳಸಿದ ವಸ್ತುಗಳು, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಮತ್ತು ಮನೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.

2ನೇ ಹಂತದಲ್ಲಿ ವ್ಯಕ್ತಿಗತ ಮಾಹಿತಿ:

ಎರಡನೇ ಹಂತ ಜನಸಂಖ್ಯಾ ಗಣತಿ ಎರಡನೇ ಹಂತದಲ್ಲಿ ಪ್ರತಿ ವ್ಯಕ್ತಿಯ ವಯಸ್ಸು, ಲಿಂಗ, ಶಿಕ್ಷಣ, ಉದ್ಯೋಗ, ಧರ್ಮ ಮತ್ತು ಭಾಷೆಯಂತಹ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎಂದು ವಿವರಿಸಿದರು.

ಕೋಟ್..............

ಜನಗಣತಿ-2027 ಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಸೋಮವಾರದಿಂದ ಮೂರು ದಿನಗಳ ಕಾಲ ಚಾರ್ಜ್ ಆಫೀಸರ್ ಗಳಿಗೆ ತರಬೇತಿ ನೀಡಲಾಗುತ್ತಿದೆ. ಗಣತಿದಾರರಿಗೂ ತರಬೇತಿ ನೀಡಲಾಗುತ್ತಿದೆ. ಸಾರ್ವಜನಿಕರು ಜನಗಣತಿಗೆ ನಿಖರವಾದ ಮಾಹಿತಿ ನೀಡಿ ಸಹಕರಿಸುವಂತೆ ಕೋರಲಾಗಿದೆ.

-ಡಾ.ಕೆ.ಎನ್ ಅನುರಾಧ, ಜಿಲ್ಲಾಧಿಕಾರಿ

ಫೋಟೋ-

9ಕೆಡಿಬಿಪಿ6-

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಜನಗಣತಿ-2027ಗೆ ಸಂಬಂಧಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಚಾರ್ಜ್ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.

9ಕೆಡಿಬಿಪಿ7- ಡಾ.ಕೆ.ಎನ್.ಅನುರಾಧ, ಜಿಲ್ಲಾಧಿಕಾರಿ